ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳುನಾಡು, ಕರ್ನಾಟಕದ ಕೌಂಟರ್ ಹೇಗಿತ್ತು? ಇಲ್ಲಿದೆ ವಾದ ಪ್ರತಿವಾದ

Cauvery water Row: ಕರ್ನಾಟಕದಲ್ಲಿ (Karnataka) ಮುಂಗಾರು ಮಳೆ (Rain) ಕೊರತೆ ಎದುರಾಗಿದ್ದು, ಬೆಳೆಗೆ ಮಾತ್ರವಲ್ಲ ಕೆಲವೆಡೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಇದರ ನಡುವೆಯೂ ತಮಿಳುನಾಡು ಕಾವೇರಿ ನೀರಿನ ವಿಚಾರವಾಗಿ ಮತ್ತೆ ಕ್ಯಾತೆ ತೆಗೆದಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜೂನ್ ತಿಂಗಳ ನೀರಿನ ಜೊತೆಗೆ ಜುಲೈ ತಿಂಗಳ ಪಾಲು ನೀಡಬೇಕೆಂದು ಪಟ್ಟು ಹಿಡಿದಿದೆ. ಇನ್ನು ಕರ್ನಾಟಕದ ವಾದ ಹೇಗಿತ್ತು? ಇದಕ್ಕೆ ಪ್ರಾಧಿಕಾರ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳುನಾಡು, ಕರ್ನಾಟಕದ ಕೌಂಟರ್ ಹೇಗಿತ್ತು? ಇಲ್ಲಿದೆ ವಾದ ಪ್ರತಿವಾದ
Cauvery Water
Edited By:

Updated on: Jun 23, 2026 | 6:45 PM

ನವದೆಹಲಿ, (ಜೂನ್ 23): ಕರ್ನಾಟಕದಲ್ಲಿ ಮುಂಗಾರುಮ ಮಳೆ (Karnataka Monsoon)  ಕೈಕೊಟ್ಟಿದ್ದು, ನಿರೀಕ್ಷಿಸಿದಷ್ಟು ಮಳೆಯಾಗಿಲ್ಲ. ಇದರಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಅದರಲ್ಲೂ ಮುಖ್ಯವಾಗಿ ಮಂಡ್ಯ,ಬೆಂಗಳೂರು ಭಾಗದ ಜನರ ಜೀವನಾಡಿಯಾಗಿರುವ ಕಾವೇರಿಯಲ್ಲೂ ಸಹ ನೀರಿಲ್ಲ. ಇನ್ನೊಂದೆಡೆ ತಮಿಳುನಾಡು ಮತ್ತೆ ಕಾವೇರಿ ನೀರಿಗೆ (Cauvery Water) ಖ್ಯಾತೆ ತೆಗೆದಿದ್ದು, ಜೂನ್ ತಿಂಗಳ ನೀರಿನ ಜೊತೆಗೆ ಜುಲೈ ತಿಂಗಳ 31.24 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ((Cauvery Water Management Authority)) ಸಭೆಯಲ್ಲಿ ಪಟ್ಟು ಹಿಡಿದಿದೆ. ಆದ್ರೆ, ಎರಡೂ ಕಡೆ ವಾದ ಆಲಿಸಿದಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಬಳಿಕ ಯಾವುದೇ ನಿರ್ದೇಶನ ನೀಡಿಲ್ಲ. ಭವಿಷ್ಯದಲ್ಲಿ ಮಳೆ ಪರಿಸ್ಥಿತಿ ನೋಡಿಕೊಂಡು ನೀರು ನೀಡುವ ಬಗ್ಗೆ ಯೋಜನೆ ಮಾಡೋಣ ಎಂದಿದೆ. ಇದರಿಂದ ಕರ್ನಾಟಕಕ್ಕೆ ರಿಲೀಫ್ ಸಿಕ್ಕಂತಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಬರಗಾಲ ಛಾಯೆ ಇದ್ರೂ ತಮಿಳುನಾಡು ಕಾವೇರಿ ನೀರಿಗಾಗಿ ಕ್ಯಾತೆ
  • ಕಾವೇರಿ ನೀರಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಪಟ್ಟು
  • ಜೂನ್ ತಿಂಗಳ ಜೊತೆಗೆ ಜುಲೈ ತಿಂಗಳದ್ದು ಹರಿಸಬೇಕು ಎಂದು ತಮಿಳುನಾಡು ವಾದ
  • ವಾಡಿಕೆಯಷ್ಟು ಮಳೆಯಾಗದ ಕಾರಣ ಡ್ಯಾಮ್‌ಗೆ ನೀರು ಬರುತ್ತಿಲ್ಲ ಎಂದ ಕರ್ನಾಟಕ
  • ಅಂತಿಮವಾಗಿ ಎರಡು ಕಡೆ ವಾದ ಆಲಿಸಿ ಮುಂದೆ ನೋಡೋಣ ಎಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ.

ಕರ್ನಾಟಕದ ವಾದವೇನು?

ಇಂದು (ಜೂನ್ 23) ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು, ಕರ್ನಾಟಕ, ಪುದುಚೇರಿ, ಕೇರಳದ ಪ್ರತಿನಿಧಿಗಳು ಭಾಗಿಯಾಗಿದ್ದು, ಈ ವೇಳೆ ಕಾವೇರಿ ನೀರಿಗಾಗಿ ತಮಿಳುನಾಡು ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಕರ್ನಾಟಕದ ಅಧಿಕಾರಿಗಳು, ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಯಾಗಿಲ್ಲ. ವಾಡಿಕೆಯಷ್ಟು ಮಳೆಯಾಗದ ಕಾರಣ ಡ್ಯಾಮ್‌ಗೆ ನೀರು ಬರುತ್ತಿಲ್ಲ. ಹಾಗಾಗಿ ಈಗ ನಮ್ಮ ಹತ್ತಿರ ನೀರಿಲ್ಲ. ಮಳೆ ಕೈಕೊಟ್ಟರೇ ಮುಂದಿನ ದಿನಗಳಲ್ಲಿ ಕುಡಿಯಲು ಸಹ ನೀರು ಇರಲ್ಲ. ಒಂದು ವೇಳೆ ಒಳಹರಿವು ಹೆಚ್ಚಾದರೇ ತಮಿಳನಾಡಿಗೆ ನೀರು ಹರಿಸಲಾಗುವುದು ಎಂದು ವಾದ ಮಂಡಿಸಿದೆ.

ಇದನ್ನೂ ಓದಿ: Karnataka Weather Forecast: ಕರಾವಳಿಯಲ್ಲಿ ನಾಳೆ ಮಳೆಯಬ್ಬರ, ಈ ಜಿಲ್ಲೆಗಳಲ್ಲಿಯೂ ವರ್ಷಧಾರೆಯ ನಿರೀಕ್ಷೆ

ಕಾವೇರಿ ನೀರಿಗಾಗಿ ಪಟ್ಟು ಹಿಡಿದ ತಮಿಳುನಾಡು

ಆದರೂ ಪಟ್ಟು ಬಿಡದ ತಮಿಳುನಾಡು ನೀರು ಬೇಕೇ ಬೇಕೆಂದು ಹಠಕ್ಕೆ ಬಿದ್ದಿದೆ.  ಜೂನ್ ತಿಂಗಳ 9.19 ಟಿಎಂಸಿ ನೀರು ಹರಿಸಬೇಕಿತ್ತು. ಆದ್ರೆ, ಈವರೆಗೆ ಕೇವಲ 2.6 ಟಿಎಂಸಿ ನೀರು ಮಾತ್ರ ಹರಿಸಲಾಗಿದ್ದು, ಇದರೊಂದಿಗೆ ನಾಲ್ಕು ಟಿಎಂಸಿ ನೀರು ಕಡಿಮೆ ಹರಿಸಿದೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲ ಎನ್ನುವ ಕರ್ನಾಟಕದ ವಾದ ಒಪ್ಪಲು ಸಾಧ್ಯವಿಲ್ಲ. ಫೆಬ್ರವರಿಯಿಂದ ಮೇ ವರೆಗೂ ಹೆಚ್ಚಿನ ನೀರು ಕರ್ನಾಟಕ ಬಳಕೆ ಮಾಡಿದೆ. ಹೀಗಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ ಅಷ್ಟೇ. ಇದರಿಂದಾಗಿ ಜೂನ್ ತಿಂಗಳ ನೀರಿನ ಜೊತೆಗೆ ಜುಲೈ ತಿಂಗಳ 31.24 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೇಲೆ ಒತ್ತಡ ಹಾಕಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದ್ದೇನು?

ಎರಡೂ ಕಡೆ ವಾದ ಆಲಿಸಿದ ಮೇಲೆ ಯಾವುದೇ ನಿರ್ದೇಶನ ನಿಡದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಭವಿಷ್ಯದಲ್ಲಿ ಮಳೆ ಪರಿಸ್ಥಿತಿ ನೋಡಿಕೊಂಡು ನೀರು ನೀಡುವ ಬಗ್ಗೆ ಯೋಜನೆ ಮಾಡೋಣ. ಒಂದು ವೇಳೆ ಉತ್ತಮ ಮಳೆಯಾದರೆ ಸುರ್ಪಿಂಕೋರ್ಟ್ ಆದೇಶದಂತೆ ನೀರು ಹರಿಸಿ ಎಂದು ಕರ್ನಾಟಕದ ಅಧಿಕಾರಿಗಳಿಗೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Tue, 23 June 26

Follow Us