ಕೊನೆಗೂ ಈಡೇರಿತು 40 ವರ್ಷಗಳ ಕೊರಗು: ಮಗನ ಜೊತೆ ತಂದೆಯೂ ದ್ವಿತೀಯ ಪಿಯುಸಿ ಉತ್ತೀರ್ಣ

ಮಂಗಳೂರಿನ 57 ವರ್ಷದ ವ್ಯಕ್ತಿಯೋರ್ವರು 40 ವರ್ಷಗಳ ಕನಸನ್ನು ನನಸಾಗಿಸಿಕೊಂಡಿದ್ದಾರೆ. ತಮ್ಮ ಮಗನ ಜೊತೆ ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಇವರು, ಮಗನ ಪ್ರೇರಣೆಯಿಂದ ಮತ್ತೆ ಓದು ಮುಂದುವರಿಸಿ ಶೇ.52 ಅಂಕಗಳೊಂದಿಗೆ ಪಾಸ್ ಆಗಿದ್ದಾರೆ. 

ಕೊನೆಗೂ ಈಡೇರಿತು 40 ವರ್ಷಗಳ ಕೊರಗು: ಮಗನ ಜೊತೆ ತಂದೆಯೂ ದ್ವಿತೀಯ ಪಿಯುಸಿ ಉತ್ತೀರ್ಣ
ಮಗನ ಜೊತೆ ತಂದೆಯೂ ದ್ವಿತೀಯ ಪಿಯುಸಿ ಉತ್ತೀರ್ಣ
Image Credit source: The New Indian Express

Updated on: Apr 12, 2026 | 7:52 AM

ಮಂಗಳೂರು, ಏಪ್ರಿಲ್​​ 12: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಹಲವು ವಿಚಾರಗಳಿಗೆ ಗಮನಸೆಳೆದಿದೆ. ಒಟ್ಟಿಗೆ ಪರೀಕ್ಚೆ ಬರೆದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೈಕಂಬದ ತಾಯಿ-ಮಗಳು ಉತ್ತೀರ್ಣವಾಗಿರುವ ಸುದ್ದಿ ಸದ್ದು ಮಾಡುತ್ತಿರುವ ನಡುವೆಯೇ ಮಂಗಳೂರು ಕೊಳ್ಯ ನಿವಾಸಿಯಾದ 57 ವರ್ಷದ ಮೋಹನ್ ರಾಜ್ ಅವರು ತಮ್ಮ ಮಗ ಕ್ಷಿತಿಜ್ ರಾಜ್ ಜೊತೆಗೂಡಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿರುವ ವಿಚಾರ ಗೊತ್ತಾಗಿದೆ. ಶೇ.52 ಅಂಕಗಳೊಂದಿಗೆ ಅವರು ತೇರ್ಗಡೆ ಹೊಂದಿದ್ದಾರೆ.

ಚಿಟ್ ಫಂಡ್​​ ವ್ಯವಹಾರದಲ್ಲಿ ತೊಡಗಿರುವ ಮೋಹನ್ ರಾಜ್ ಅವರು ಸುಮಾರು ನಾಲ್ಕು ದಶಕಗಳ ಹಿಂದೆ ಪ್ರಥಮ ಪಿಯುಸಿ ಪೂರ್ಣಗೊಳಿಸಿದ್ದರು. ಆದರೆ ಆರ್ಥಿಕ ಸಂಕಷ್ಟ ಹಾಗೂ ಕುಟುಂಬದ ಜವಾಬ್ದಾರಿಗಳ ಕಾರಣದಿಂದ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಈ ಕುರಿತ ಕೊರಗು ಅವರನ್ನು ಹಲವು ವರ್ಷಗಳಿಂದ ಕಾಡುತ್ತಿತ್ತು. ಈ ನಡುವೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಮಗ ಸಿದ್ಧತೆ ನಡೆಸುತ್ತಿದ್ದ ಸಂದರ್ಭ, ಆತನಿಂದ ಮೋಹನ್ ರಾಜ್ ಪ್ರೇರಿತರಾಗಿದ್ದರು. ಅಪೂರ್ಣವಾಗಿದ್ದ ತಮ್ಮ ವಿದ್ಯಾಭ್ಯಾಸವನ್ನು ಮತ್ತೆ ಪುನಾರಂಭಿಸಲು ನಿರ್ಧರಿಸಿದ್ದರು.

ಇದನ್ನೂ ಓದಿ: ಮಗಳ ಜೊತೆಗೇ ತಾಯಿ ಕೂಡ ಪಿಯುಸಿ ಪಾಸ್​​! ಪತ್ನಿಯ ಕನಸಿಗೆ ಸೇತುವೆಯಾದ ಪತಿ

ಪರೀಕ್ಷೆಗೆ ಹೇಗಿತ್ತು ಸಿದ್ಧತೆ?

ಕೆಲಸ ಹಾಗೂ ಓದು ಎರಡನ್ನೂ ಸಮತೋಲನದಲ್ಲಿಟ್ಟುಕೊಂಡಿದ್ದ ಮೋಹನ್ ರಾಜ್, ತೊಕ್ಕೊಟ್ಟಿನಲ್ಲಿರುವ ಟ್ಯುಟೋರಿಯಲ್​​ಗೆ ದಾಖಲಾಗಿದ್ದರು. ಬೆಳಿಗ್ಗೆ 8ರಿಂದ 11ರವರೆಗೆ ಮತ್ತು ಮಧ್ಯಾಹ್ನ 2.30ರಿಂದ 4ರವರೆಗೆ ಅಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದರು. ಮತ್ತೊಂದೆಡೆ ಪರೀಕ್ಷೆ ಬರೆಯಲು ಹೊರಟ ತಂದೆಗೆ ಮಕ್ಕಳಾದ ಪೃಥ್ವಿ, ಪ್ರಕೃತಿ ಹಾಗೂ ಕ್ಷಿತಿಜ್ ರಾಜ್ ನೋಟ್‌ಗಳನ್ನು ನೀಡಿ, ಓದಿನಲ್ಲಿ ಗಮನ ಕೇಂದ್ರೀಕರಿಸಲು ಸಹಾಯ ಮಾಡಿದ್ದರು. 40 ವರ್ಷಗಳ ಬಳಿಕ ಮತ್ತೆ ಓದನ್ನು ಆರಂಭಿಸುವುದು ಸುಲಭವಾಗಿರಲಿಲ್ಲವಾದರೂ ಅಂತಿಮವಾಗಿ ಅವರ ಪರಿಶ್ರಮ ಫಲಿಸಿದೆ. ಮೊದಲ ಪ್ರಯತ್ನದಲ್ಲೇ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿ, ಕಲಾ ವಿಭಾಗದಲ್ಲಿ ಶೇ. 52 ಅಂಕಗಳನ್ನು ಗಳಿಸಿದ್ದಾರೆ. ಇನ್ನು ಅವರ ಮಗ ವಾಣಿಜ್ಯ ವಿಭಾಗದಲ್ಲಿ ಶೇ. 67 ಅಂಕಗಳನ್ನು ಪಡೆದಿದ್ದಾನೆ. ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಮೋಹನ್, ತಮ್ಮ ಬಹುಕಾಲದ ಕನಸಾದ ಕಾನೂನು ವಿದ್ಯಾಭ್ಯಾಸವನ್ನು ದೂರ ಶಿಕ್ಷಣದ ಮೂಲಕ ಮುಂದುವರಿಸಲು ಬಯಸಿರೋದಾಗಿ ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us