ಮಂಗಳೂರಿಗೂ ತಟ್ಟಿದ ನೀರಿನ ಬಿಕ್ಕಟ್ಟಿನ ಬಿಸಿ: ಶಾಲೆ, ಕಾಲೇಜುಗಳಿಗೆ ರಜೆ ನೀಡಬೇಕಾದ ಅನಿವಾರ್ಯತೆ

ಬೆಂಗಳೂರಿನಲ್ಲಿ ಇರುವಂತೆಯೇ ನೀರಿನ ಬಿಕ್ಕಟ್ಟಿನ ಸಮಸ್ಯೆ ಇದೀಗ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರಿನಲ್ಲಿಯೂ ಉಂಟಾಗಿದೆ. ನೀರಿನ ಸಮಸ್ಯೆಯಿಂದಾಗಿ ಶಾಲೆ, ಕಾಲೇಜುಗಳಿಗೆ ರಜೆ ಕೊಡಬೇಕಾದ ಅನಿವಾರ್ಯತೆಯೇ ಹಲವೆಡೆ ಸೃಷ್ಟಿಯಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆಗಳನ್ನು ಎದುರಿಸುವುದಕ್ಕಾಗಿ ಎನ್​ಐಟಿಕೆ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನೇ ಪರಿಷ್ಕರಣೆ ಮಾಡಿದೆ.

ಮಂಗಳೂರಿಗೂ ತಟ್ಟಿದ ನೀರಿನ ಬಿಕ್ಕಟ್ಟಿನ ಬಿಸಿ: ಶಾಲೆ, ಕಾಲೇಜುಗಳಿಗೆ ರಜೆ ನೀಡಬೇಕಾದ ಅನಿವಾರ್ಯತೆ
ಸಾಂದರ್ಭಿಕ ಚಿತ್ರ

Updated on: Apr 04, 2024 | 7:44 AM

ಮಂಗಳೂರು, ಏಪ್ರಿಲ್ 4: ಬೆಂಗಳೂರಿನ ಜನತೆ ನೀರಿನ ಬಿಕ್ಕಟ್ಟಿನಿಂದ ಹೈರಾಣಾಗಿರುವ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿಯೂ ನೀರಿನ ಸಮಸ್ಯೆ (Waters Crisis) ತಾರಕಕ್ಕೇರತೊಡಗಿದೆ. ಶಿಕ್ಷಣ ಸಂಸ್ಥೆಗಳ ಮೇಲೆ ನೀರಿನ ಬಿಕ್ಕಟ್ಟು ಹೆಚ್ಚು ಪರಿಣಾಮ ಬೀರಿದೆ. ತುಂಬೆ ಅಣೆಕಟ್ಟಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಶೀಘ್ರದಲ್ಲೇ ಮಳೆಯಾಗದಿದ್ದರೆ ಇನ್ನಷ್ಟು ತೊಂದರೆ ಎದುರಾಗಲಿದೆ. ನೀರಿನ ಸಮಸ್ಯೆ ಮುಂದುವರಿದರೆ, ಶಾಲಾ-ಕಾಲೇಜುಗಳನ್ನು, ವಸತಿನಿಲಯಗಳನ್ನು ನಡೆಸುವುದು ಕಷ್ಟಕರವಾಗಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.

ದಕ್ಷಿಣ ಕನ್ನಡದಲ್ಲಿ ನೀರಿನ ಬಿಕ್ಕಟ್ಟು ತೀವ್ರ

ಜಿಲ್ಲೆಯಲ್ಲಿ ಹಲವು ಕಾಲೇಜುಗಳು ಮಂಗಳೂರು ಮಹಾನಗರ ಪಾಲಿಕೆಯಿಂದ ಪೂರೈಕೆಯಾಗುವ ನೀರನ್ನೇ ಅವಲಂಬಿಸಿವೆ. ಪ್ರಸ್ತುತ, ದೇರಳಕಟ್ಟೆಯಲ್ಲಿರುವ ಕೆಲವು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳು ಕ್ಯಾಂಪಸ್‌ನಲ್ಲಿರುವ ಬೋರ್‌ವೆಲ್‌ಗಳು ಮತ್ತು ಬಾವಿಗಳಿಂದ ಕುಡಿಯುವ ನೀರನ್ನು ಪಡೆಯುತ್ತಿವೆ.

ವಿದ್ಯಾರ್ಥಿಗಳು ರಜೆ ಇರುವುದರಿಂದ ಮೆಟ್ರಿಕ್ ಪೂರ್ವ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ನೀರಿನ ಸಮಸ್ಯೆ ತಲೆದೋರಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಈ ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಬಹುದು. ದಕ್ಷಿಣ ಕನ್ನಡದ ಒಟ್ಟು 50 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳ ಪೈಕಿ ಮಂಗಳೂರಿನಲ್ಲಿರುವ 15 ಹಾಸ್ಟೆಲ್‌ಗಳು ಬೇಸಿಗೆಯಲ್ಲಿ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತವೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಸ್ಥಳೀಯ ಆಡಳಿತ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್ ತಿಳಿಸಿರುವುದಾಗಿ ಮಾಧ್ಯಮ ವರದಿಯೊಂದು ಉಲ್ಲೇಖಿಸಿದೆ.

ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಕ್ಕೂರಿನ ಮೀನುಗಾರಿಕಾ ಕಾಲೇಜಿನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನೀರಿನ ಕೊರತೆ ಇಲ್ಲದಿದ್ದರೂ ಒಂದು ವಾರದೊಳಗೆ ಮಳೆ ಬಾರದೇ ಇದ್ದಲ್ಲಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಪೂರೈಸಬೇಕಾದ ಸನ್ನಿವೇಶ ಎದುರಾಗಲಿದೆ.

ಇದನ್ನೂ ಓದಿ: ಕೂಲ್ ಕೂಲ್ ವಾತಾವರಣದಲ್ಲಿ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳು! ಕಡಲನಗರಿಯ ರಣ ಬೇಸಿಗೆಯಲ್ಲಿ ಇದು ಹೇಗೆ ಸಾಧ್ಯ?

ಸುರತ್ಕಲ್‌ನಲ್ಲಿರುವ ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ 7000 ವಿದ್ಯಾರ್ಥಿಗಳಿದ್ದು, ತುಂಬೆ ಅಣೆಕಟ್ಟಿನಿಂದ ನೇರವಾಗಿ ಕ್ಯಾಂಪಸ್‌ಗೆ ನೀರು ಸರಬರಾಜು ಮಾಡಲಾಗುತ್ತದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆಗಳನ್ನು ಎದುರಿಸುವುದಕ್ಕಾಗಿ ಎನ್​ಐಟಿಕೆ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನೇ ಪರಿಷ್ಕರಣೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us