ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಕಿಡ್ನ್ಯಾಪ್​​ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಇಲ್ಲಿದೆ ಅಸಲಿ ಕಹಾನಿ

ಬೆಳ್ತಂಗಡಿಯಲ್ಲಿ ನಡೆದ ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಮಂಗಳೂರಿನ ಕಾಲೇಜು ಸೇರುವ ಆಸೆಯಿಂದ ವಿದ್ಯಾರ್ಥಿನಿಯೇ ಕಿಡ್ನ್ಯಾಪ್ ನಾಟಕವಾಡಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ತನ್ನ ಕೈಯನ್ನು ಬ್ಲೇಡ್‌ನಿಂದ ಕೊಯ್ದು, ಕತೆ ಕಟ್ಟಿ ಕುಟುಂಬಸ್ಥರನ್ನು ಆತಂಕಕ್ಕೀಡು ಮಾಡಿದ್ದಳು. ಸತ್ಯಾಂಶ ಬಯಲಾಗುತ್ತಿದ್ದಂತೆ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಕಿಡ್ನ್ಯಾಪ್​​ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಇಲ್ಲಿದೆ ಅಸಲಿ ಕಹಾನಿ
ಪೊಲೀಸರಿಂದ ಸ್ಥಳ ಪರಿಶೀಲನೆ
Image Credit source: Tv9 Kannada
Edited By:

Updated on: Feb 10, 2026 | 12:04 PM

ಮಂಗಳೂರು, ಫೆಬ್ರವರಿ 10: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ನಗರದಲ್ಲಿ ಕಾಲೇಜಿಗೆ ಸೇರುವ ಆಸೆ ಹಿನ್ನೆಲೆ ಆಕೆಯೇ ಸಿನಿಮೀಯ ಮಾದರಿ ಕತೆ ಕಟ್ಟಿರೋದು ಪೊಲೀಸ್​​ ತನಿಖೆ ವೇಳೆ ಬಯಲಾಗಿದೆ. ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ತನ್ನನ್ನು ಅಪಹರಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು 16 ವರ್ಷದ ಪ್ರಥಮ ಪಿಯುಸಿ  ವಿದ್ಯಾರ್ಥಿನಿ ಆರೋಪಿಸಿದ್ದಳು. ಕಾರಿನಲ್ಲಿ ಬಂದ ಮೂವರು ಮಾಸ್ಕ್​​ಧಾರಿಗಳು ಚೂರಿ ತೋರಿಸಿ ಬಲವಂತವಾಗಿ ಎಳೆದು ಕಾರಲ್ಲಿ ಕೂರಿಸಲು ಯತ್ನಿಸಿದ್ದಾರೆ ಎಂದು ದೂರಿದ್ದಳು. ಈ ವೇಳೆ ತನ್ನ ಕೈಗೆ ಗಾಯವಾಗಿದೆ ಎಂದು ಹೇಳಿದ್ದಳು. ಈ ವಿಚಾರ ಕುಟುಂಬಸ್ಥರ ಜೊತೆಗೆ ಸ್ಥಳೀಯರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು. ಹಿರಿಯ ಪೊಲೀಸ್​​ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಆದರೆ ಪೊಲೀಸರ ತನಿಖೆ ವೇಳೆ ವಿದ್ಯಾರ್ಥಿನಿಯ ಡ್ರಾಮಾ ಬಯಲಾಗಿದೆ. ಕಿಡ್ನ್ಯಾಪ್​​ ನಾಟಕ ಮಾಡಿದ್ರೆ ತನ್ನನ್ನು ಮನೆಯವರು ಮಂಗಳೂರಿ‌ನ ಕಾಲೇಜಿಗೆ ಸೇರಿಸುತ್ತಾರೆ ಎಂದುಕೊಂಡಿದ್ದ ಯುವತಿ ಅದಕ್ಕೆ ತಕ್ಕಂತೆ ಭರ್ಜರಿ ಪ್ಲ್ಯಾನ್​​ ಕೂಡ ಮಾಡಿದ್ದಳು. ಬ್ಲೇಡ್​​ನಲ್ಲಿ ತಾನೇ ಕೈ ಕೊಯ್ದುಕೊಂಡು ಕತೆ ಹೇಳಿದ್ದಳು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಯತ್ನ ಪ್ರಕರಣ ಸಂಬಂಧ ಪೊಲೀಸರು ಇಡೀ ದಿನ ಕಾರ್ಯಾಚರಣೆ ನಡೆಸಿದ್ದು, ಸ್ಥಳೀಯ ಶಾಸಕ ಹರೀಶ್ ಪೂಂಜಾ ಕೂಡ ದೌಡಾಯಿಸಿ ಬಾಲಕಿಯನ್ನು ಭೇಟಿ ಮಾಡಿದ್ದರು. ಆದ್ರೆ ತನಿಖೆ ವೇಳೆ ವಿದ್ಯಾರ್ಥಿನಿಯೇ ಪೊಲೀಸರ ಬಳಿ ಸತ್ಯ ಬಾಯ್ಬಿಟ್ಟಿದ್ದಾಳೆ.

ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಯುವತಿ ಅಪಘಾತಕ್ಕೆ ಬಲಿ; ಭಾವಿ ಪತಿ ಜೊತೆಗಿದ್ದಾಗಲೇ ಅವಘಡ

ಬ್ಯಾಗ್​​ನಲ್ಲಿರುವ ಪುಸ್ತಕಗಳನ್ನು ಮನೆಯಲ್ಲೇ ಸುಟ್ಟು ಹಾಕಿದ್ದ ಈಕೆ, ಬಳಿಕ ಬ್ಯಾಗ್​​ನ ದಾರಿಯಲ್ಲೇ ಬಿಸಾಕಿದ್ದಳು. ಸ್ಕೂಟಿಯನ್ನು ನಿಲ್ಲಿಸಿ ಬ್ಲೇಡ್​​ನಿಂದ ಕೈ ಕುಯ್ದುಕೊಂಡು ನಾಟಕ ಮಾಡಿದ್ದಳು. ಮತ್ತೊಂದೆಡೆ ವಿದ್ಯಾರ್ಥಿನಿ ಸ್ಕೂಟಿಯಿಂದ ಬಿದ್ದಿರುವಂತೆ ನಟಿಸುವ ವೇಳೆ ಹಿಬದಿಯಿಂದ ಬಂದಿದ್ದ ಅಬ್ಬುಸಾಲಿ ಎಂಬಾತ ಕೂಡ ಘಟನೆಯ ಬಗ್ಗೆ ವಿವರಿಸಿದ್ದ ಕಾರಣ ಆರಮಭದಲ್ಲಿ ಈಕೆ ಹೇಳುತ್ತಿರುವುದು ಸುಳ್ಳು ಕತೆಯಾಗಿರಬಹುದೆಂಬ ಅನುಮಾನ ಯಾರಿಗೂ ಬಂದಿರಲಿಲ್ಲ. ವಿದ್ಯಾರ್ಥಿನಿ ಹೇಳಿದ್ದನ್ನ ಮೊದಲು ಅಬ್ಬುಸಾಲಿ ನಂಬಿದ್ದರೆ ಬಳಿಕ ಎಲ್ಲರೂ ಆಕೆ ಹೇಳ್ತಿರೋದು ಸತ್ಯ ಎಂದು ನಂಬಿ ಕುಟುಂಬಸ್ಥರೂ ಕಂಗಾಲಾಗಿದ್ದರು.  ಆದರೆ ಪೊಲೀಸರ ತನಿಖೆಯಿಂದ ಕೊನೆಗೂ ವಿದ್ಯಾರ್ಥಿನಿ ನಾಟಕ ಬಯಲಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us