ಧರ್ಮಸ್ಥಳ ಕೇಸ್​: ‘ಬುರುಡೆ’ ಕಾಟಕ್ಕೆ ಬೆಚ್ಚಿಬಿದ್ದಿದ್ದ ಆತ​​; SIT ವರದಿಯಲ್ಲಿ ಸ್ಫೋಟಕ ಮಾಹಿತಿ

ಧರ್ಮಸ್ಥಳ ಷಡ್ಯಂತ್ರ ಪ್ರಕರಣದಲ್ಲಿ ಎಸ್​ಐಟಿ ವರದಿ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ಅಪಪ್ರಚಾರಕ್ಕೆ ಬಳಸಿದ 'ಬುರುಡೆ' ಜೊತೆಗಿದ್ದಾಗ ಗ್ಯಾಂಗ್ ಸದಸ್ಯ ಜಯಂತ್​ಗೆ ಕೆಟ್ಟ ಕನಸುಗಳು ಬಿದ್ದು ಭಯಭೀತನಾಗಿದ್ದ. ದೆಹಲಿಯಲ್ಲಿ ಬುರುಡೆ ಬಿಟ್ಟು ಬೆಂಗಳೂರಿಗೆ ಮರಳಿದ್ದ ಆತ, ನಂತರ ಅದನ್ನು ಮತ್ತೆ ತಂದಿದ್ದ. ಸುಜಾತಾ ಭಟ್ ಅರಿವಿಲ್ಲದೆ ಬುರುಡೆ ಪಕ್ಕ ಮಲಗಿದ್ದ ಘಟನೆ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ವರದಿ ಹಲವು ಕುತೂಹಲಕಾರಿ ಅಂಶಗಳನ್ನು ತೆರೆದಿಟ್ಟಿದೆ.

ಧರ್ಮಸ್ಥಳ ಕೇಸ್​: ಬುರುಡೆ ಕಾಟಕ್ಕೆ ಬೆಚ್ಚಿಬಿದ್ದಿದ್ದ ಆತ​​; SIT ವರದಿಯಲ್ಲಿ ಸ್ಫೋಟಕ ಮಾಹಿತಿ
ಸುಜಾತಾ ಭಟ್​​ ಮತ್ತು ಜಯಂತ್​​
Edited By:

Updated on: Dec 29, 2025 | 12:21 PM

ಮಂಗಳೂರು, ಡಿಸೆಂಬರ್​​ 29: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ ಪ್ರಕರಣ ಸಂಬಂಧ ಕೋರ್ಟ್​ಗೆ ಎಸ್​ಐಟಿ ಸಲ್ಲಿಸಿದ ಪ್ರಾಥಮಿಕ ವರದಿ ಹಲವಾರು ಕುತೂಹಲಕಾರಿ ಅಂಶಗಳನ್ನು ಬಹಿರಂಗಗೊಳಿಸಿದೆ. ಧರ್ಮಸ್ಥಳದ ವಿರುದ್ಧ ಆರೋಪ ಹೊರಿಸಿದ್ದ ಬುರುಡೆ ಗ್ಯಾಂಗ್​​ ಸದಸ್ಯನೋರ್ವನಿಗೆ ಅವರು ತಂದಿದ್ದ ಬುರುಡೆಯೇ ಕಾಟ ಕೊಟ್ಟಿತ್ತು ಎನ್ನುವ ಮಾಹಿತಿ SIT ವರದಿಯಲ್ಲಿ ಉಲ್ಲೇಖವಾಗಿದೆ.

ಗ್ಯಾಂಗ್​​ ಸದಸ್ಯ ಜಯಂತ್​​ ಬುರುಡೆಯನ್ನ ರೈಲಿನ ಮೂಲಕ ದೆಹಲಿಗೂ ತೆಗೆದುಕೊಂಡು ಹೋಗಿದ್ದ. ಇತರರಾದ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್ ಮತ್ತು ಸುಜಾತಾ ಫ್ಲೈಟ್​​ ಮೂಲಕ ತೆರಳಿದ್ದರು. ಈ ವೇಳೆ ಒಂದೇ ರೂಂನಲ್ಲಿ ಚಿನ್ನಯ್ಯ, ಮಟ್ಟಣ್ಣನವರ್​ ಮತ್ತು ಜಯಂತ್​ ಮಲಗಿದ್ದ ವೇಳೆ ಕೆಟ್ಟ ಕನಸು ಬಿದ್ದು ಜಯಂತ್​​ ಕಿರುಚಿಕೊಂಡಿದ್ದ. ಇದೇ ಕಅರಣಕ್ಕೆ ಹೆದರಿ ವಾಪಸ್ ಬುರುಡೆ ತರಲು ಒಪ್ಪದೆ ಅದನ್ನು ದೆಹಲಿಯಲ್ಲೇ ಬಿಟ್ಟು ಬೆಂಗಳೂರಿಗೆ ವಾಪಸ್ ಆಗಿದ್ದ. ಬಳಿಕ ಮತ್ತೆ ವಿಮಾನದ ಮೂಲದ ದೆಹಲಿಗೆ ತೆರಳಿದ್ದ ಜಯಂತ್​, ರೈಲಿನ ಮೂಲಕ ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಬುರುಡೆ ತಂದಿದ್ದ. ತಿಮರೋಡಿ ಮನೆಗೆ ಅದನ್ನು ಕೊಂಡೊಯ್ದಿದ್ದ ಎಂದು ವರದಿಯಲ್ಲಿ ಎಸ್​​ಐಟಿ ಉಲ್ಲೇಖಿಸಿದೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್​​ಗೆ ಮೇಜರ್​​ ಟ್ವಿಸ್ಟ್​​; SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!

ಬುರುಡೆ ಜೊತೆ ರಾತ್ರಿ ಕಳೆದಿದ್ದ ಸುಜಾತಾ

ದೆಹಲಿಯಲ್ಲಿ ಪ್ರತ್ಯೇಕ ರೂಮ್​ನಲ್ಲಿ ಇದ್ದ ಸುಜಾತಾ ಭಟ್ ಅರಿವಿಲ್ಲದೇ ಬುರುಡೆ ಜೊತೆ ರಾತ್ರಿ ಕಳೆದಿದ್ದರು. ದೆಹಲಿಯ ವಿಠ್ಠಲ ಮಂದಿರದಲ್ಲಿ ಆರೋಪಿಗಳು ರೂಂ ಮಾಡಿದ್ದು, ಸುಜಾತಾ ಭಟ್ ಇದ್ದ ರೂಂ ಮಂಚದ ಕೆಳಗೆ ಜಯಂತ್ ಬುರುಡೆ ಬಾಕ್ಸ್​​ ಇಟ್ಟಿದ್ದ. ಈ ವೇಳೆ ಬಾಕ್ಸ್​ನಲ್ಲಿ ಏನಿದೆ ಅಂತಾ ಸುಜಾತಾ ಭಟ್ ಕೇಳಿದ್ದು, ಏನಿಲ್ಲ ಅಂತಾ ಹೇಳಿ ಜಯಂತ್ ಸುಮ್ಮನಾಗಿದ್ದ. ಹೀಗಾಗಿ ಅಂದು ರಾತ್ರಿ ಸುಜಾತಾ ಭಟ್ ಮಲಗಿದ್ದ ಮಂಚದ ಕೆಳಗೇ ಬುರುಡೆ ಇತ್ತು. ಅದೇ ರಾತ್ರಿ ಜಯಂತ್​​​ಗೆ ಕೆಟ್ಟ ಕನಸು ಕೂಡ ಬಿದ್ದಿತ್ತು ಎಂದು ಕೋರ್ಟ್​ಗೆ ಎಸ್​ಐಟಿ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.