ಸೌಜನ್ಯಾ ಮೇಲೆ ಅತ್ಯಾಚಾರವೆಸಗಿ ಕೊಂದಿದ್ದೇ ವಿಠ್ಠಲ ಗೌಡ: ಎಲ್ಲ ಸಾಕ್ಷ್ಯ ಎಸ್​ಪಿಗೆ ಕೊಡುತ್ತೇನೆಂದ ಸ್ನೇಹಮಯಿ ಕೃಷ್ಣ!

ಧರ್ಮಸ್ಥಳದ ಬುರುಡೆ ಪ್ರಕರಣ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. ಸೌಜನ್ಯಾ ಮಾವ ವಿಠ್ಠಲ ಗೌಡನೇ ಪ್ರಮುಖ ಆರೋಪಿ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಅಲ್ಲದೆ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎಸ್​ಪಿಗೆ ನೀಡುವುದಾಗಿಯೂ ಹೇಳಿದ್ದಾರೆ. ಮತ್ತೊಂದೆಡೆ, ಗಿರೀಶ್ ಮಟ್ಟಣ್ಣನವರ್, ಜಯಂತ್, ವಿಠ್ಠಲ ಗೌಡ ಮತ್ತು ಇತರರನ್ನು ಎಸ್‌ಐಟಿ ವಿಚಾರಣೆ ನಡೆಸಿದೆ. ಪ್ರಕರಣ ಸಂಬಂಧಿತ ಎಲ್ಲ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.

ಸೌಜನ್ಯಾ ಮೇಲೆ ಅತ್ಯಾಚಾರವೆಸಗಿ ಕೊಂದಿದ್ದೇ ವಿಠ್ಠಲ ಗೌಡ: ಎಲ್ಲ ಸಾಕ್ಷ್ಯ ಎಸ್​ಪಿಗೆ ಕೊಡುತ್ತೇನೆಂದ ಸ್ನೇಹಮಯಿ ಕೃಷ್ಣ!
ಸೌಜನ್ಯಾ ಕೊಂದಿದ್ದೇ ವಿಠ್ಠಲ ಗೌಡ: ಎಲ್ಲ ಸಾಕ್ಷ್ಯ ಎಸ್​ಪಿಗೆ ಕೊಡುತ್ತೇನೆಂದ ಸ್ನೇಹಮಯಿ ಕೃಷ್ಣ!
Updated By: Ganapathi Sharma

Updated on: Sep 09, 2025 | 7:41 AM

ಮಂಗಳೂರು, ಸೆಪ್ಟೆಂಬರ್ 9: ಧರ್ಮಸ್ಥಳದ ಬುರುಡೆ ಪ್ರಕರಣ (Dharmasthala Case) ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಾಸ್ಕ್‌ಮ್ಯಾನ್‌ ಚಿನ್ನಯ್ಯಗೆ ಬುರುಡೆ ತಂದುಕೊಟ್ಟಿದ್ದು ಸೌಜನ್ಯಾಳ ಮಾವ ವಿಠ್ಠಲ ಗೌಡ ಎಂದಿ ಗಿರೀಶ್ ಮಟ್ಟಣ್ಣನವರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದರು. ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಿಂದ ರಾತ್ರಿವೇಳೆ ಈ ತಲೆಬುರುಡೆಯನ್ನು ತರಲಾಗಿತ್ತು ಎಂಬ ಬೆಚ್ಚಿಬೀಳಿಸುವ ಮಾಹಿತಿಯನ್ನು ಎಸ್‌ಐಟಿ ಮುಂದೆ ಹೇಳಿದ್ದರು. ಆದರೆ ಈಗ ಸೌಜನ್ಯಳ ಮಾವ ವಿಠ್ಠಲ ಗೌಡ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.

ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟಣ್ಣ, ಸುಜಾತ್‌ ಭಟ್‌, ಸಮೀರ್‌ನಿಂದ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಆಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಕೆಲವು ದಿನಗಳ ಹಿಂದೆ ದೂರು ನೀಡಿದ್ದರು. ಹೀಗಾಗಿ ಎಸ್‌ಐಟಿ ಸ್ನೇಹಮಯಿಗೂ ಬುಲಾವ್‌ ಕೊಟ್ಟು ಸೋಮವಾರ ವಿಚಾರಣೆ ನಡೆಸಿದೆ. ಬಳಿಕ ಮಾತನಾಡಿರುವ ಸ್ನೇಹಿಮಯಿ ಕೃಷ್ಣ ಹೊಸ ಬಾಂಬ್‌ ಸಿಡಿಸಿದ್ದಾರೆ. ಸೌಜನ್ಯಳ ಮೇಲೆ ಅತ್ಯಾಚಾರವೆಸಗಿ ಕೊಂದಿರುವುದು ಬೇರೆ ಯಾರೂ ಅಲ್ಲ, ಆಕೆಯ ಮಾವ ವಿಠ್ಠಲ ಗೌಡ ಎಂದು ಆರೋಪಿಸಿದ್ದಾರೆ.

ಸದ್ಯ ಹೀಗೆ ಆರೋಪಿಸಿರುವ ಸ್ನೇಹಮಯಿ ಕೃಷ್ಣ ತಮ್ಮ ಬಳಿರುವ ಮಾಹಿತಿ, ಸಾಕ್ಷ್ಯ ಸಮೇತ ಎಸ್​ಪಿಗೆ ದೂರು ಕೊಡಲು ನಿರ್ಧರಿಸಿದ್ದು, ಸೌಜನ್ಯ ಸಾವಿನ ಪ್ರಕರಣದ ಮರು ತನಿಖೆಯೂ ಆಗಬೇಕು ಎಂದಿದ್ದಾರೆ.

ಮಟ್ಟಣ್ಣನವರ್, ಜಯಂತ್‌, ವಿಠ್ಠಲಗೌಡನವಿಗೆ ಎಸ್‌ಐಟಿ ವಿಚಾರಣೆ ಬಿಸಿ

ಬುರುಡೆ ಸಂಚಿನ ಮಾಸ್ಟರ್‌ ಮೈಂಡ್ ಗಿರೀಶ್‌ ಮಟ್ಟಣ್ಣನವರ್‌ಗೆ ನಾಲ್ಕನೇ ದಿನವಾದ ಸೋಮವಾರವೂ ವಿಚಾರಣೆ ಬಿಸಿ ತಟ್ಟಿತು. ಸೌಜನ್ಯಳ ಮಾವ ವಿಠ್ಠಲ ಗೌಡನಿಗೂ ಫುಲ್‌ಗ್ರಿಲ್ ಮಾಡಲಾಗಿದೆ. ಇನ್ನು ಟಿ .ಜಯಂತ್ ಮಾಸ್ಕ್‌ ಹಾಕಿಕೊಂಡು ವಿಚಾರಣೆಗೆ ಹಾಜರಾಗಿದ್ದ. ಕಾಡಿನಿಂದ ತಲೆಬುರುಡೆ ತಂದ ಸಂಬಂಧವೇ ಮೂವರನ್ನೂ ವಿಚಾರಣೆ ನಡೆಸಲಾಗಿದೆ.

ಬುರುಡೆ ತಂದ ವಿಠ್ಠಲ ಗೌಡ, ಅಸ್ಥಿಪಂಜರ ಅಲ್ಲೇ ಹೂತ!

ಬಂಗ್ಲೆಗುಡ್ಡ ಕಾಡಿನಿಂದ ವಿಠ್ಠಲಗೌಡನೇ ಬುರುಡೆ ತಂದಿದ್ದು ಎಂಬುದು ಕೂಡ ಸೋಮವಾರ ಬಯಲಾಗಿತ್ತು. ಕಾಡಿನಿಂದ ಬುರುಡೆ ತಂದಿದ್ದ ವಿಠ್ಠಲ ಗೌಡ, ಉಳಿದ ಅಸ್ಥಿಪಂಜರವನ್ನು ಅಲ್ಲೇ ಹೂತು ಹಾಕಿ ಬಂದಿರುವುದು ಗೊತ್ತಾಗಿದೆ. ಹೀಗಾಗಿ ಅದನ್ನೂ ಪತ್ತೆ ಹಚ್ಚಲು ಎಸ್‌ಐಟಿ ಮುಂದಾಗಿದ್ದು, ಬಂಗ್ಲೆಗುಡ್ಡದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ವಿರೋಧಿ ಅಭಿಯಾನದ ಮೂಲ ಸಂಚುಕೋರರು ಸಿಗುವುದು ಕಷ್ಟ: ಎಸ್​ಐಟಿಗಿದೆ ತಾಂತ್ರಿಕ ಸಂಕಷ್ಟ

ಈ ಮಧ್ಯೆ ಕೇರಳ ಲಾರಿ ಮಾಲೀಕ ಕಂ ಯೂಟ್ಯೂಬರ್ ಮನಾಫ್‌, ಸುಜಾತ ಭಟ್‌ ಹೆಣೆದಿದ್ದ ಅನನ್ಯ ಭಟ್‌ ಕತೆಯನ್ನು ತನ್ನ ಚಾನಲ್‌ನಲ್ಲಿ ತೋರಿಸಿ ಅಪಪ್ರಚಾರ ಮಾಡಿದ್ದ. ಇದೇ ಆರೋಪದಲ್ಲಿ ಮನಾಫ್‌ನನ್ನ ಎಸ್‌ಐಟಿ ವಿಚಾರಣೆ ನಡೆಸಿದೆ. ಇನ್ನು ಅಭಿಷೇಕ್‌ಗೂ ಪ್ರಶ್ನೆಗಳ ಸುರಿಮಳೆಗೈಯಲಾಗಿದೆ.

ಧರ್ಮಸ್ಥಳ ವಿರುದ್ಧ ಪಿತೂರಿ ಆರೋಪ: ಅಮಿತ್‌ ಶಾಗೆ ಬಿಜೆಪಿ ನಿಯೋಗ ದೂರು

ಏತನ್ಮಧ್ಯೆ, ಧರ್ಮಸ್ಥಳ ವಿರುದ್ಧ ಪಿತೂರಿ ಆರೋಪ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕರ್ನಾಟಕ ಬಿಜೆಪಿ ನಿಯೋಗ ದೂರು ನೀಡಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ದೆಹಲಿಗೆ ತೆರಳಿದ ನಿಯೋಗ, ಬುರುಡೆ ಪ್ರಕರಣ ಮತ್ತು ಆರಂಭದಿಂದ ಎಸ್‌ಐಟಿ ತನಿಖೆಗೆ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಯಾವುದೇ ಅಸ್ಥಿಪಂಜರ ಸಿಗದಿರುವ ವಿಚಾರ ಹಾಗೂ ಬಿಜೆಪಿ ಹೋರಾಟದ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ವಿವರಣೆ ನೀಡಿದೆ. ಘಟನೆಯ ಹಿಂದೆ ಹೊರ ರಾಜ್ಯದ ಜನರ ಕೈವಾಡ ಶಂಕೆ ಇದೆ. ಈ ಹಿನ್ನಲೆ ಸೂಕ್ತ ತನಿಖೆಯ ಅಗತ್ಯವಿದೆ ಎಂದು ನಿಯೋಗ ಪ್ರಸ್ತಾಪಿಸಿದೆ. ಆ ಮೂಲಕ ಕೇಂದ್ರದ ತನಿಖಾ ತಂಡದಿಂದ ತನಿಖೆಯಾಗಬೇಕು ಎಂದು ಪರೋಕ್ಷವಾಗಿ ಒತ್ತಾಯಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ