
ಮಂಗಳೂರು, ಮೇ 13: ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ಗೆ ಘೇರಾವ್ ವಿಚಾರ ಸಂಬಂಧೇ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಖಾದರ್ ಅಂಗರಕ್ಷಕ ಮೊಹಮ್ಮದ್ ಯಾಸಿನ್ ದೂರು ಆಧರಿಸಿ ಘೇರಾವ್ ಹಾಕಿದ ಮದನಿನಗರ ನಿವಾಸಿ ಜುನೈದ್ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕೊರಗಜ್ಜ ಸರ್ಕಲ್ ವಿಚಾರವಾಗಿ ಉಳ್ಳಾಲದಲ್ಲಿ ಯು.ಟಿ.ಖಾದರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೆಲ ಯುವಕರು ಅವರಿಗೆ ಘೇರಾವ್ ಹಾಕಿದ್ದರು. ಸಾಲದ್ದಕ್ಕೆ ವಾಗ್ವಾದವನ್ನೂ ನಡೆಸಿದ್ದರು.
ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಿಂದ ಕುತ್ತಾರಿನಲ್ಲಿ ಸರ್ಕಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದರ ನಿರ್ವಹಣೆಯ ಜವಾಬ್ದಾರಿಯನ್ನೂ ಸರ್ಕಾರ ಮೆಡಿಕಲ್ ಕಾಲೇಜಿಗೇ ವಹಿಸಿದೆ. ಆದರೆ ಸರ್ಕಲ್ ನಿರ್ಮಾಣದ ಬಗ್ಗೆ ಅಪಸ್ವರ ಎತ್ತಿ ಖಾದರ್ ವಿರುದ್ದ ಕೆಲ ಮುಸ್ಲಿಮರು ತಿರುಗಿ ಬಿದ್ದಿದ್ದಾರೆ. ಕುತ್ತಾರು ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಮೂಲ ಕ್ಷೇತ್ರವಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಕೊರಗಜ್ಜ ದೈವವನ್ನು ನಂಬಿದ್ದಾರೆ. ಹೀಗಾಗಿ ವೃತ್ತ ನಿರ್ಮಾಣಕ್ಕೆ ತಿಂಗಳ ಹಿಂದೆಯೇ ಕೊರಗಜ್ಜ ದೈವದ ಕೆಲ ವಸ್ತುಗಳ ಪ್ರತಿಕೃತಿಯನ್ನು ಈ ಜಾಗದಲ್ಲಿ ವಿಶ್ವಹಿಂದೂ ಪರಿಷತ್ ಇಟ್ಟಿತ್ತು. ಸದ್ಯ ಹೊಸದಾಗಿ ನಿರ್ಮಾಣವಾಗ್ತಿರೋ ವೃತ್ತದಲ್ಲೂ ದೈವದ ಪ್ರತಿಕೃತಿ ಇಡಲು ಯೋಜನೆ ರೂಪಿಸಿದ್ದು, ಸರ್ಕಲ್ಗೆ ಕೊರಗಜ್ಜ ವೃತ್ತ ಎಂದು ಹೆಸರಿಡಲೂ ಪ್ಲ್ಯಾನ್ ಮಾಡಿದೆ. ಆದರೆ ಈ ಸರ್ಕಲ್ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ಚರ್ಚೆ ಹುಟ್ಟು ಹಾಕಿದೆ. ಆಕ್ಷೇಪ ಕುತ್ತಾರು ವೃತ್ತಕ್ಕೆ ಕೊರಗಜ್ಜ ಹೆಸರು ಇಡೋದಕ್ಕಾ? ಅಥವಾ ಅವೈಜ್ಞಾನಿಕ ಕಾಮಗಾರಿಗಾ? ಎಂಬ ಗೊಂದಲೂ ಇದೆ. ವೃತ್ತ ದೊಡ್ಡದಾಗಿ ನಿರ್ಮಿಸಿದ್ರೆ ಸಂಚಾರ ಸಮಸ್ಯೆ ಎಂಬ ನೆಪದಲ್ಲಿ ಕೆಲವರ ಅಪಸ್ವರ ತೆಗೆದಿದ್ದರೆ, ಇನ್ನು ಕೆಲವರು ಕೊರಗಜ್ಜ ಹೆಸರಿಗೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತುಗಳೂ ಇವೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದಾಖಲೆಯ ಆದಾಯ, ಸತತ 15 ವರ್ಷಗಳ ಕಾಲ ನಂ.1
ಇನ್ನು ಕೊರಗಜ್ಜ ಸರ್ಕಲ್ ವಿರೋಧಿಸುವವರಿಗೆ ಸ್ಪೀಕರ್, ಉಳ್ಳಾಲ ಶಾಸಕ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ. ಯಾರೋ ಕೆಲವರು ದಾರಿ ತಪ್ಪಿದವರು ಇದ್ದಾರೆ. ಅವರು ಏನೋ ಹೇಳ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಏನೋ ಮಾಡ್ತಾರೆ ಎಂದು ಅದನ್ನೆಲ್ಲ ಕೇಳ್ಕೊಂಡು ಇರಲು ಸಾಧ್ಯವಿಲ್ಲ.ಅವರೇನು ಮದನಿ ನಗರದವರು ಅಲ್ಲ, ಬೇರೆ ಸಂಘಟನೆಗೆ ಸೇರಿದವರು. ಅಲ್ಲದೇ ಹೊರಗಿನಿಂದ ಬಂದವರು. ಅಲ್ಲಿ ಏನು ಆಗುತ್ತೋ ಒಳ್ಳೆಯದಕ್ಕೇ ಆಗುತ್ತದೆ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.