ಮಂಗಳೂರು: ಭಾರಿ ಮಳೆಯ ಕಾರಣ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಮಿತಿ ನಿಗದಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲವು ವಾರಗಳಿಂದ ಭಾರಿ ಮಳೆಯಾಗುತ್ತಿದೆ. ಹಲವೆಡೆ ರಸ್ತೆ ಮೇಲೆ ಭೂಕುಸಿತ ಸಂಭವಿಸಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಮಿತಿ ನಿಗದಿಪಡಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಯಾವ ಹೆದ್ದಾರಿಗಳಲ್ಲಿ ಎಷ್ಟಿದೆ ವೇಗದ ಮಿತಿ ಎಂಬ ಮಾಹಿತಿ ಇಲ್ಲಿದೆ.

ಮಂಗಳೂರು: ಭಾರಿ ಮಳೆಯ ಕಾರಣ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದ ಮಿತಿ ನಿಗದಿ
ಸಾಂದರ್ಭಿಕ ಚಿತ್ರ

Updated on: Aug 06, 2024 | 9:58 AM

ಮಂಗಳೂರು, ಆಗಸ್ಟ್ 6: ಕರಾವಳಿ ಕರ್ನಾಟಕದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭುಕುಸಿತದಿಂದಾಗಿ ಹಾನಿಯಾಗಿರುವ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಹೊಸದಾಗಿ ವೇಗದ ಮಿತಿ ಹೇರಿದೆ. ಸುರತ್ಕಲ್ ಮತ್ತು ತೊಕ್ಕೊಟ್ಟು ನಡುವಿನ ರಾಷ್ಟ್ರೀಯ ಹೆದ್ದಾರಿ-66 ಮಾರ್ಗದಲ್ಲಿ ಮತ್ತು ಬಿಸಿ ರೋಡ್ ಮತ್ತು ನಂತೂರು ನಡುವಿನ ರಾಷ್ಟ್ರೀಯ ಹೆದ್ದಾರಿ-73 ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಗಂಟೆಗೆ 40 ಕಿಮೀ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಏತನ್ಮಧ್ಯೆ, ಎಲ್ಲಾ ಇತರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ವೇಗವನ್ನು ಗಂಟೆಗೆ 60 ಕಿಮೀಗೆ ಮಿತಿಗೊಳಿಸುವಂತೆ ಪ್ರಾಧಿಕಾರ ವಾಹನ ಸವಾರರಿಗೆ ಸೂಚಿಸಿದೆ.

ಮಂಗಳೂರು ಬೆಂಗಳೂರು ರೈಲು ಪ್ರಾಯೋಗಿಕ ಸಂಚಾರ ಶುರು

ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಸಕಲೇಶಪುರದ ಕಡಗರವಳ್ಳಿ ಮತ್ತು ಯಡಕುಮೇರಿ ನಿಲ್ದಾಣಗಳ ನಡುವೆ ನಡೆಯುತ್ತಿರುವ ಪುನಃಸ್ಥಾಪನೆ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ನೈಋತ್ಯ ರೈಲ್ವೆ ಹೇಳಿದೆ. 15 ಕಿಮೀ ವೇಗದ ಮಿತಿಯೊಂದಿಗೆ ಗೂಡ್ಸ್ ರೈಲು ಸಂಚಾರಕ್ಕೆ ಟ್ರ್ಯಾಕ್ ಸೂಕ್ತವೆಂದು ಆಗಸ್ಟ್ 4 ರಂದು ಪರಿಗಣಿಸಲಾಗಿದೆ. ಪ್ರಾಯೋಗಿಕ ಉದ್ದೇಶಗಳಿಗಾಗಿ ಸರಕುಸಾಗಣೆಯ ಖಾಲಿ ರೈಲನ್ನು ಈಗಾಗಲೇ ಓಡಿಸಲಾಗಿದೆ. ರೈಲಿನ ಚಾಲನೆ ಸಂದರ್ಭ ಯಾವುದೇ ಕಂಪನಗಳನ್ನು ಗಮನಿಸಲಾಗಿಲ್ಲ. ಇದಲ್ಲದೆ, ಲೋಡ್ ಮಾಡಿದ ಸರಕು ಸಾಗಣೆ ರೈಲಿನ ಸಂಚಾರದ ಪ್ರಯೋಗವೂ ಶೀಗ್ರ ನಡೆಯಲಿದೆ. ಆ ನಂತರ ಪ್ರಯಾಣಿಕ ರೈಲು ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ರೈಲ್ವೆ ತಿಳಿಸಿದೆ.

ಏತನ್ಮಧ್ಯೆ, ಮಂಗಳೂರು ಬೆಂಗಳೂರು ಪ್ರಯಾಣಿಕ ರೈಲುಗಳ ಸಂಚಾರ ರದ್ದತಿ ಮುಂದುವರಿದಿದೆ. 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ರೈಲನ್ನು ಆಗಸ್ಟ್ 6 ಮತ್ತು ಆಗಸ್ಟ್ 7 ರವರೆಗೆ ರದ್ದುಗೊಳಿಸಲಾಗಿದೆ. 16512 ಕಣ್ಣೂರು-ಕೆಎಸ್ಆರ್ ಬೆಂಗಳೂರು ರೈಲನ್ನು ಆಗಸ್ಟ್ 7 ಮತ್ತು ಆಗಸ್ಟ್ 8, 16595 ಕೆಎಸ್ಆರ್ ಬೆಂಗಳೂರು-ಕಾರವಾರ ರೈಲನ್ನು ಆಗಸ್ಟ್ 6 ಮತ್ತು ಆಗಸ್ಟ್ 7 ರವರೆಗೆ, 16596 ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್​​​ಪ್ರೆಸ್​ ಅನ್ನು ಆಗಸ್ಟ್ 7 ಮತ್ತು ಆಗಸ್ಟ್ 8 ರವರೆಗೆ ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇಯಲ್ಲಿ ಅತಿವೇಗದ ಚಾಲನೆ ಮಾಡ್ತೀರಾ ಹುಷಾರ್: 76 ಮಂದಿಯ ವಿರುದ್ಧ ದಾಖಲಾಯ್ತು ಕೇಸ್

ಬೆಂಗಳೂರು ಮೂಲಕ ಸಂಚರಿಸುವ ವಿಜಯಪುರ-ಮಂಗಳೂರು ಎಕ್ಸ್​​ಪ್ರೆಸ್, ಯಶವಂತಪುರ-ಕಾರವಾರ ಎಕ್ಸ್​​ಪ್ರೆಸ್, ಬೆಂಗಳೂರು -ಮುರ್ಡೇಶ್ವರ ಎಕ್ಸ್​​ಪ್ರೆಸ್​​ ರೈಲುಗಳ ಸಂಚಾರವೂ ಆಗಸ್ಟ್ 8ರ ವರೆಗೆ ರದ್ದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us