ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜತೆ ವೈದ್ಯರು: ಇದು ಮಂಗಳೂರು ಡಾಕ್ಟರ್​ಗಳ ಗಾಂಜಾ ಲೋಕದ ಕತೆ!

ಕಡಲತಡಿ ಮಂಗಳೂರಿನಲ್ಲಿ ಗಾಂಜಾ ಘಾಟು ಎದ್ದಿದ್ದು, ಈ ಗಾಂಜಾ ಲೋಕದಲ್ಲಿ ಕೆಎಂಸಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇನ್ನು ಈ ಗಾಂಜಾ ಕೇಸ್​ನಲ್ಲಿ ವಿದ್ಯಾರ್ಥಿಗಳು ಸೇರಿ ಒಟ್ಟು 10 ಜನರು ಪೊಲೀಸರ ಅತಿಥಿಯಾಗಿದ್ದಾರೆ.

ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜತೆ ವೈದ್ಯರು: ಇದು ಮಂಗಳೂರು ಡಾಕ್ಟರ್​ಗಳ ಗಾಂಜಾ ಲೋಕದ ಕತೆ!
ಬಂಧಿತ ಆರೋಪಿಗಳು
Follow us
| Updated By: ರಮೇಶ್ ಬಿ. ಜವಳಗೇರಾ

Updated on:Jan 11, 2023 | 5:35 PM

ಮಂಗಳೂರು: ಕರಾವಳಿಯಲ್ಲಿ ಹಿಂದೂ ಮುಸ್ಲಿಂ ಎಂದು ಧಾರ್ಮಿಕ ಭಾವನೆಗೆ ನೋವುಂಟುಮಾಡುವ ಕೆಲಸವೇ ಆಗಿತ್ತು. ಇದೀಗ ಕರಾವಳಿಯಲ್ಲಿ ಗಾಂಜಾ ಘಾಟು. ಹೌದು..ಮಂಗಳೂರಿನಲ್ಲಿ (Mmangaluru) ವಿದ್ಯಾರ್ಥಿಗಳ ಜೊತೆಗೆ ವೈದ್ಯರು ಸಹ ಗಾಂಜಾ (Ganja) ಖೆಡ್ಡಕ್ಕೆ ಬಿದ್ದಿದ್ದಾರೆ. ವೈದ್ಯಕೀಯ ಕಾಲೇಜು ಅಂಗಳದಲ್ಲೇ ಆವರಿಸಿತಾ ಘಾಟು? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಮಂಗಳೂರು ಸಿಸಿಬಿ ಪೊಲೀಸರು (Mangaluru CCB Police) ಭಾರೀ ಗಾಂಜಾ ದಂಧೆ ಭೇದಿಸಿದ್ದು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು, ಹಾಗೂ ವೈದ್ಯರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಗಾಂಜಾ ಕೇಸ್​​ನಲ್ಲಿ 4 ವೈದ್ಯಕೀಯ ವಿದ್ಯಾರ್ಥಿನಿಯರು, 2 ವೈದ್ಯರು, 2 ವಿದ್ಯಾರ್ಥಿಗಳು ಹಾಗೂ ಗಾಂಜಾ ಪೆಡ್ಲರ್​ಗಳು ಸೇರಿ ಒಟ್ಟು 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವೈದ್ಯರು, ವಿದ್ಯಾರ್ಥಿಗಳು KMC ಅತ್ತಾವರ, KMC ಮಣಿಪಾಲ ಯೆನಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜ್​​ನವರು ಎಂದು ತಿಳಿದುಬಂದಿದ್ದು, ಬಂಧಿತರಿಂದ 2 ಕೆಜಿ‌ ಗಾಂಜಾ, ನಕಲಿ ಪಿಸ್ತೂಲ್, ಡ್ರ್ಯಾಗರ್ ವಶಕ್ಕೆ ಪಡೆದುಕೊಂಡಿದ್ದಾರೆ. ವೈದ್ಯರೇ ವ್ಯಸನಕ್ಕೆ ಒಳಗಾದರೆ? ಅಥವಾ ಅವರೇ ಡ್ರಗ್ಸ್​ ದಂಧೆಯಲ್ಲಿ ತೊಡಗಿದ್ದರೆ? ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ಗಾಂಜಾ ಕೇಸ್​ನಲ್ಲಿ ನೀಲ್ ಕಿಶೋರಿಲಾಲ್ ರಾಮ್ ಜೀ(38), ಯುಕೆ ಮೂಲದ ನೀಲ್ ಕಿಶೋರಿಲಾಲ್, ನದಿಯಾ ಸಿರಾಜ್(24), ವರ್ಷಿಣಿ ಪ್ರತಿ(26), ರಿಯಾ ಚಡ್ಡ(22), ಹೀರಾ ಬಸಿನ್(23), ಭಾನು ದಹಿಯಾ(27), ಕ್ಷಿತಿಜ್ ಗುಪ್ತ(23) ಎನ್ನುವರನ್ನು ಬಂಧಿಸಲಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮಂಗಳೂರು ಸಿಸಿಬಿ ಪೊಲೀಸರ ಮಿಂಚಿನ ಕಾರ್ಯಚರಣೆ

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತದ ಸಮೀಪ ಇರುವ ಮೆಂಡಿಸ್ ಪ್ಲಾಜಾ ಎಂಬಾ ಈ ಆಪಾರ್ಟ್ಮೆಂಟ್ ನಲ್ಲಿ ಸಾಗರೋತ್ತರ ಭಾರತೀಯ ಪ್ರಜೆಯಾದ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಎಂಬಾತ ವಾಸವಿದ್ದ. ಈತ ತನ್ನ ಪ್ಲಾಟ್ ನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗಾಂಜಾ ಮಾರುತ್ತಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಬಳಿಕ ಆತನ ಪ್ಲಾಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ 2 ಕೆ,ಜಿ ಗಾಂಜಾ ಮತ್ತು ಒಂದು ನಕಲಿ ಪಿಸ್ತೂಲ್ ಹಾಗೂ ಒಂದು ಡ್ಯಾಗರ್ ಸಿಕ್ಕಿತ್ತು. ಈತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈತ ಹೇಳಿದ್ದು ಡಾಕ್ಟರ್ ಗಳ ಗಾಂಜಾ ಲೋಕದ ಕತೆ.

ಡಾಕ್ಟರ್ ಗಳ ಗಾಂಜಾ ಲೋಕದ ಕತೆ

ಹೌದು.. ಈತ ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕೋಟಾ ಆಡಿಯಲ್ಲಿ ಡೆಂಟಲ್ ಕಾಲೇಜಿನಲ್ಲಿ ವಿದ್ಯಬ್ಯಾಸ ಮಾಡುತ್ತಿದ್ದಾನೆ. ಮಂಗಳೂರಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗಾಂಜಾ ಮಾರುತ್ತಿದ್ದ ಬಗ್ಗೆ ಈತ ಹೇಳಿದ್ದ. ಇನ್ನು ಆತಂಕಕಾರಿ ವಿಚಾರ ಅಂದ್ರೆ ಆತ ವೈದ್ಯರಿಗೂ ಕೂಡ ಗಾಂಜಾ ನೀಡುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿ ಆಧಾರದ ಮೇಲೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಕೆ.ಎಂ.ಸಿ ಆಸ್ಪತ್ರೆ ವೈದ್ಯರಾದ ಡಾ.ಸಮೀರ್(32) ಮತ್ತು ಡಾ.ಮಣಿಮಾರನ್ ಮುತ್ತು(28) ಎನ್ನುವವರನ್ನು ಬಂಧಿಸಿದ್ದಾರೆ. ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಡಾ.ಸಮೀಲ್ ಮೆಡಿಕಲ್ ಆಫೀಸರ್ ಆಗಿದ್ರೆ, ಡಾ.ಮಣಿಮಾರನ್ ಮಣಿಪಾಲದಲ್ಲಿರುವ ಕೆಎಂಸಿಯಲ್ಲಿ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ.

ಇನ್ನು ಕೆಎಂಸಿಯ ವಿದ್ಯಾರ್ಥಿನಿಯರಾದ ಡಾ. ನದಿಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ(26), ಡಾ.ರಿಯಾ ಚಡ್ಡ(22), ಡಾ.ಹೀರಾ ಬಸಿನ್(23) ಬಂಧಿತರು. ಯನೆಪೋಯ ಮೆಡಿಕಲ್ ಕಾಲೇಜು ವಿದ್ಯಾರ್ಥಿಡಾ. ಭಾನು ದಹಿಯಾ(27), ಕೆಎಂಸಿ ವಿದ್ಯಾರ್ಥಿ ಡಾ.ಕ್ಷಿತಿಜ್ ಗುಪ್ತ(23) ಮತ್ತು ಬಂಟ್ವಾಳದ ಮಾರಿಪಳ್ಳ ನಿವಾಸಿ ಮಹಮ್ಮದ್ ರವೂಫ್ ಅಲಿಯಾಸ್ ಗೌಸ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರಿಂದ ತನಿಖೆ ಚುರುಕು

ಇನ್ನು ಬಂಧಿತ ವೈಧ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೇರಳ, ತಮಿಳುನಾಡು, ಆಂದ್ರಪ್ರದೇಶ, ಮಹರಾಷ್ಟ್ರ ಮತ್ತು ಪಂಜಾಬ್ ನ ಮೂಲದವರಾಗಿದ್ದಾರೆ. ಮಂಗಳೂರಿನ ಹಾಸ್ಟೆಲ್ ಮತ್ತು ಪಿಜಿ ಗಳಲ್ಲಿ ವಾಸವಿದ್ದರು. ತಮ್ಮ ನಿವಾಸಗಳಲ್ಲಿ ಮತ್ತೇರಿಸಿಕೊಂಡು ಕಾಲೇಜು ಮತ್ತು ಆಸ್ರತ್ರೆಗಳಿಗೆ ಹೋಗುತ್ತಿದ್ದರು. ಅನೇಕ ಬಾರಿ ವೈದ್ಯಕೀಯ ಕಾಲೇಜುಗಳ ಬಳಿಯೇ ಗಾಂಜಾ ಸೇವಿಸಿದ್ದರು ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗಳನ್ನು 2 ದಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಇನ್ನು ಇವರು ಗಾಂಜಾ ಸೇವಿಸಿದ್ದು ಮಾತ್ರನಾ ಅಥವಾ ಮಾರಾಟ ಅಥವಾ ಸರಬರಾಜು ಮಾಡಿದ್ರಾ ಎನ್ನುವ ನಿಟ್ಟಿನಲ್ಲಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

ಈ ಘಟನೆಯಿಂದ ಮಂಗಳೂರಿಗೆ ಮೆಡಿಕಲ್ ವಿದ್ಯಬ್ಯಾಸಕ್ಕೆ ತಮ್ಮ ಮಕ್ಕಳನ್ನು ಕಳುಹಿಸಿದ ಪೋಷಕರಿಗೆ ಚಿಂತೆ ಆರಂಭವಾಗಿದೆ. ಮತ್ತಿನಲ್ಲಿ ಅದೆಂಥಾ ಚಿಕಿತ್ಸೆ ಕೊಡುತ್ತಾರೆ ಎನ್ನುವ ಆತಂಕದಲ್ಲಿ ರೋಗಿಗಳಿದ್ದಾರೆ. ತನಿಖೆ ಬಳಿಕ ಇನ್ನೂ ಯಾವೆಲ್ಲ ವಿಚಾರ ಹೊರಬರುತ್ತವೆ ಎಂದು ಕಾದು ನೋಡಬೇಕಿದೆ.

ಇನ್ನಷ್ಟು ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:20 pm, Wed, 11 January 23