
ಮಂಗಳೂರು, ಫೆಬ್ರವರಿ 19: ಪಿಲಿಕುಳ ಝೂ ಕಳೆದ ಕೆಲ ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿಯ ಸ್ಥಿತಿ ಕಂಡು ಸ್ವತಃ ಹೈಕೋರ್ಟ್ ಗರಂ ಆಗಿತ್ತು. ಆ ಬೆನ್ನಲ್ಲೇ ಕಾಳಿಂಗ ಸರ್ಪದ ಹೆಸರಲ್ಲೂ ಇಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಕಾಳಿಂಗ ಸರ್ಪ ಸಂತಾನಾಭಿವೃದ್ಧಿ ಕೇಂದ್ರ ತೆರೆದು 2 ಕೋಟಿಗೂ ಅಧಿಕ ಅನುದಾನ ಪಡೆದಿದ್ದ ಇಲ್ಲಿಯ ಆಡಳಿತ ಅವುಗಳ ಪಾಲನೆ ಮರೆತಿದೆ. ಹೀಗಾಗಿ ಸರಿಯಾಗಿ ಆಹಾರ, ಆರೈಕೆ ಸಿಗದೆ ಅವು ಸಾವನ್ನಪ್ಪಿವೆ ಎಂದು ದೂರಲಾಗಿದೆ.
2022ರ ಜುಲೈನಲ್ಲಿ ಮೊಟ್ಟೆಯೊಡೆದು 38 ಕಾಳಿಂಗ ಸರ್ಪ ಮರಿಗಳು ಹೊರ ಬಂದಿದ್ದ ವಿಚಾರ ಭಾರಿ ಸದ್ದು ಮಾಡಿತ್ತು. ಆದರೆ ಆ ಮರಿಗಳು ಈಗ ಏನಾಗಿವೆ ಎಂಬುದಕ್ಕೆ ದಾಖಲೆಗಳೇ ಇಲ್ಲ. ಇತ್ತ ಪಿಲುಕುಳದ ಆಡಳಿತ ಮಾತ್ರ ಆ ಮರಿಗಳನ್ನು ಚಾರ್ಮಾಡಿ ಬಳಿ ಬಿಟ್ಟಿದ್ದೇವೆ ಎಂದು ಸಬೂಬು ನೀಡುತ್ತಿದೆ. ಪಶ್ಚಿಮಘಟ್ಟಕ್ಕೆ ಮರಿಗಳನ್ನು ಬಿಡುವಾಗ ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳಬೇಕು. ಇಲ್ಲಿ ಇವರು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಅಲ್ಲದೆ ಮರಿಗಳನ್ನು ಬಿಟ್ಟಿರುವ ಬಗ್ಗೆ ಯಾವುದೇ ದಾಖಲೆಯನ್ನೂ ಇಟ್ಟುಕೊಂಡಿಲ್ಲ ಎಂಬ ವಿಚಾರ ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ.
ಇದನ್ನೂ ಓದಿ: ಪಿಲಿಕುಳ ಝೂ ಅವ್ಯವಸ್ಥೆಗೆ ಹೈಕೋರ್ಟ್ ಗರಂ; ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದ ಪೀಠ
ಈ ನಡುವೆ ಹಾವುಗಳಿಗೆ ಆಹಾರ ನೀಡಿದ ಬಿಲ್ ಸಹ ಪಡೆಯಲಾಗಿದ್ದು, ಮಾಂಸ ಪೂರೈಸುವ ವ್ಯಾಪಾರಿಯ ಹೆಸರಲ್ಲಿ ಹಣ ತೆಗೆದುಕೊಂಡಿದ್ದಾರೆ. ಸ್ನೇಕ್ ಫೀಡ್ ಎಂದು ಹೆಸರಿಟ್ಟು ಕೇರೆ ಹಾವು ಪೂರೈಕೆ ಮಾಡಲಾಗಿದ್ದು, ಈ ಅಕ್ರಮಗಳ ಬಗ್ಗೆ ವೈಲ್ಡ್ ಲೈಫ್ ಕ್ರೈಮ್ ಕಂಟ್ರೋಲ್ಗೆ ದೂರು ನೀಡಿರೋದಾಗಿ ವನ್ಯಜೀವಿ ಸಂರಕ್ಷಕ ಭುವನ್ ತಿಳಿಸಿದ್ದಾರೆ.
2022ರಲ್ಲಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 38 ಕಾಳಿಂಗ ಸರ್ಪ ಮರಿಗಳು ಮೊಟ್ಟೆಯೊಡೆದು ಹೊರ ಬಂದಿವೆ ಎಂದು ಹೇಳಲಾಗಿತ್ತು. ಆದರೆ ದಾಖಲೆಯಲ್ಲಿ ಇರುವುದು ಕೇವಲ 22 ಮರಿಗಳ ಉಲ್ಲೇಖ ಮಾತ್ರ. ಅವು ಸಹ ಮೂರು ತಿಂಗಳು ಕಳೆಯುವುದರ ಒಳಗೆ ಮೃತಪಟ್ಟಿವೆ. ಕಾಳಿಂಗ ಸರ್ಪ ಸಂತಾನೋಭಿವೃದ್ಧಿ ಕೇಂದ್ರದ ಹೆಸರಲ್ಲಿ ಇವರು ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ಸ್ಥಳೀಯ ಕಂಪನಿಯ ಸಿಎಸ್ಆರ್ ಅನುದಾನದಡಿ ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದಾರೆ. ಪಿಲಿಕುಳ ಅವ್ಯವಸ್ಥೆಯ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದ್ದು, ಈ ವಿಚಾರವನ್ನು ಸಹ ನ್ಯಾಯಾಲಯದ ಗಮನಕ್ಕೆ ತರೋದಾಗಿ ಭುವನ್ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.