ನ್ಯಾಯಕ್ಕಾಗಿ ಹೆತ್ತ ತಾಯಿಯ ಕೊಳೆತ ಶವವನ್ನೇ ಬೈಕ್ನಲ್ಲಿ ತಂದ ಮಕ್ಕಳು! ಎಫ್ಐಆರ್ ದಾಖಲು
ದಾವಣಗೆರೆ ಜಿಲ್ಲೆಯ ಅದಾಪುರದಲ್ಲಿ ತಾಯಿಯ ಸಾವು ಕೊಲೆ ಎಂದು ಶಂಕಿಸಿ, ಇಬ್ಬರು ಪುತ್ರರು ರಾತ್ರೋರಾತ್ರಿ ಸಮಾಧಿ ಅಗೆದು ಕೊಳೆತ ಶವವನ್ನು ಬೈಕ್ನಲ್ಲಿ ಆಸ್ಪತ್ರೆಗೆ ತಂದ ಆಘಾತಕಾರಿ ಘಟನೆ ನಡೆದಿದೆ. ಮರು ಮರಣೋತ್ತರ ಪರೀಕ್ಷೆಗಾಗಿ ಮಕ್ಕಳು ನಡೆಸಿದ ಈ ಭೀಕರ ಹೋರಾಟ ಈಗ ಅವರ ಪಾಲಿಗೆ ಮುಳುವಾಗಿದ್ದು, ಕಾನೂನು ಉಲ್ಲಂಘನೆಯ ಹಿನ್ನೆಲೆಯಲ್ಲಿ ಅವರ ವಿರುದ್ಧವೇ ಎಫ್ಐಆರ್ ದಾಖಲಾಗಿದೆ.

ಮುಖ್ಯಾಂಶಗಳು
- ದಾವಣಗೆರೆಯಲ್ಲಿ ತಾಯಿಯ ಕೊಳೆತ ಶವದೊಂದಿಗೆ ಮಕ್ಕಳು ಬೈಕ್ ಯಾತ್ರೆ ನಡೆಸಿದ್ದಾರೆ.
- ಏಪ್ರಿಲ್ 29 ರಂದು ನಡೆದ ತಾಯಿಯ ಸಾವು ಕೊಲೆ ಎಂದು ಮಕ್ಕಳು ಆರೋಪಿಸಿದ್ದಾರೆ.
- ಕಾನೂನು ಬಾಹಿರವಾಗಿ ಸಮಾಧಿ ಅಗೆದ ಇಬ್ಬರು ಪುತ್ರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ, ಜುಲೈ 20: ನ್ಯಾಯಕ್ಕಾಗಿ ಆಗ್ರಹಿಸಿ ಹೆತ್ತ ತಾಯಿಯ ಕೊಳೆತ ಶವವನ್ನು ಸಮಾಧಿಯಿಂದ ಹೊರತೆಗೆದು, ಬಟ್ಟೆಯಲ್ಲಿ ಸುತ್ತಿಕೊಂಡು ರಾತ್ರೋರಾತ್ರಿ ಬೈಕ್ ಮೇಲೆ ಆಸ್ಪತ್ರೆಗೆ ಹೊತ್ತೊಯ್ದ ಆಘಾತಕಾರಿ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಅದಾಪುರ ಗ್ರಾಮದಲ್ಲಿ ನಡೆದಿದೆ. ಸುಮಾರು 79 ದಿನಗಳ ಹಿಂದೆ ಮೃತಪಟ್ಟಿದ್ದ ತಾಯಿಯ ಸಾವು ಸಹಜವಲ್ಲ, ಅದೊಂದು ಕೊಲೆ ಎಂದು ಆರೋಪಿಸಿ ಮಕ್ಕಳು ನಡೆಸಿದ ಈ ಭೀಕರ ಬೈಕ್ ಯಾತ್ರೆ ಈಗ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಏನಿದು ಘಟನೆ?
ಅದಾಪುರ ಗ್ರಾಮದ ಈರಮ್ಮ (58) ಎಂಬ ಮಹಿಳೆ ಕಳೆದ ಏಪ್ರಿಲ್ 29 ರಂದು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ವೈದ್ಯರು ಇದೊಂದು ಆತ್ಮಹತ್ಯೆ ಎಂದು ವರದಿ ನೀಡಿದ್ದರಿಂದ, ಮಕ್ಕಳು ದುಃಖದಲ್ಲೇ ಶವ ಸಂಸ್ಕಾರ ನೆರವೇರಿಸಿದ್ದರು. ಆದರೆ, ಗ್ರಾಮದಲ್ಲಿ ಈ ಸಾವಿನ ಕುರಿತು ಹತ್ತಾರು ಅನುಮಾನಗಳು ಕೇಳಿಬರಲಾರಂಭಿಸಿದವು. ಗ್ರಾಮದಲ್ಲಿ ಬಾಕ್ಸ್ ಚರಂಡಿ ನಿರ್ಮಾಣದ ವಿಚಾರವಾಗಿ ಸಂಬಂಧಿಕರಾದ ಕರಿಯಪ್ಪ, ಭದ್ರಾ, ಶಕುಂತಲಾ ಸೇರಿದಂತೆ ಸುಮಾರು 10 ಜನರ ಜೊತೆ ಈರಮ್ಮ ಜಗಳವಾಡಿದ್ದರು. ಅವರೇ ತಾಯಿಯನ್ನು ಹೊಡೆದು ಕೊಲೆ ಮಾಡಿ, ನಂತರ ನೇಣು ಹಾಕಿದ್ದಾರೆ ಎಂದು ಮಕ್ಕಳು ಗಂಭೀರವಾಗಿ ಆರೋಪಿಸಿದ್ದಾರೆ. ತಾಯಿಯ ಮೈಮೇಲೆ ಗಾಯದ ಗುರುತುಗಳಿದ್ದವು ಎಂದು ಹಿರಿಯ ಮಗ ಮಂಜುನಾಥ್ ಹಾಗೂ ಕಿರಿಯ ಮಗ ವೆಂಕಟೇಶ್ ದೂರಿದ್ದಾರೆ.
ರಾತ್ರೋರಾತ್ರಿ ಶವದೊಂದಿಗೆ ಬೈಕ್ ಜರ್ನಿ
ತಮ್ಮ ತಾಯಿಯ ಸಾವಿಗೆ ನ್ಯಾಯ ಸಿಗಬೇಕು ಮತ್ತು ಮರು ಮರಣೋತ್ತರ ಪರೀಕ್ಷೆ ಆಗಬೇಕು ಎಂದು ಮಕ್ಕಳು ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಸೂಕ್ತ ತನಿಖೆ ನಡೆಸದ ಕಾರಣ, ಹಗಲು ಸಮಾಧಿ ಅಗೆದರೆ ತೊಂದರೆಯಾಗಬಹುದೆಂದು ಭಾವಿಸಿದ ಸಹೋದರರು, ತಡರಾತ್ರಿ ತಾಯಿಯ ಸಮಾಧಿ ಅಗೆದಿದ್ದಾರೆ. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಬೈಕ್ ಮಧ್ಯೆ ಇರಿಸಿಕೊಂಡು ದಾವಣಗೆರೆ ಜಿಲ್ಲಾ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಆದರೆ ಶಾಮನೂರು ರಸ್ತೆಯ ಬಳಿ ನಿಯಂತ್ರಣ ತಪ್ಪಿ ಬೈಕ್ ಬಿದ್ದಾಗ ಸಾರ್ವಜನಿಕರು ಸೇರಿದ್ದು, ಶವ ಪತ್ತೆಯಾದಾಗ ಇಡೀ ವಿಷಯ ಬೆಳಕಿಗೆ ಬಂದಿದೆ.
ಮಕ್ಕಳ ವಿರುದ್ಧವೇ ಎಫ್ಐಆರ್!
ತಾಯಿಯ ಸಾವಿನ ರಹಸ್ಯ ಬಯಲು ಮಾಡಲು ಹೊರಟ ಮಕ್ಕಳು ಈಗ ಕಾನೂನಿನ ಇಕ್ಕಟ್ಟಿಗೆ ಸಿಲುಕಿದ್ದಾರೆ. ನಿಯಮಗಳ ಪ್ರಕಾರ ಹೂತ ಶವವನ್ನು ನ್ಯಾಯಾಲಯ ಅಥವಾ ತಹಶೀಲ್ದಾರ್ ಅನುಮತಿ ಇಲ್ಲದೆ ಹೊರತೆಗೆಯುವಂತಿಲ್ಲ. ಕಾನೂನು ಉಲ್ಲಂಘಿಸಿ ಶವ ತೆಗೆದ ಹಿನ್ನೆಲೆಯಲ್ಲಿ ಮಲೇಬೆನ್ನೂರು ಪೊಲೀಸರು ಇಬ್ಬರು ಪುತ್ರರನ್ನು ವಶಕ್ಕೆ ಪಡೆದು, ಅವರ ವಿರುದ್ಧವೇ ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ಶವದ ಖಚಿತತೆಗಾಗಿ ಡಿಎನ್ಎ (DNA) ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



