ದಾವಣಗೆರೆಯಲ್ಲಿ ತಣ್ಣಗಾಗದ ಅಸಮಾಧಾನ, ಅಖಾಡದಲ್ಲೇ ಉಳಿದ ಪೈಲ್ವಾನ್, ಕಾಂಗ್ರೆಸ್​​ಗೆ ಟೆನ್ಷನ್

ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆಯ ಅಖಾಡ ರಂಗೇರಿದೆ. ನಾಮಪತ್ರ ಹಿಂಪಡೆಯಲು ಇಂದು (ಮಾರ್ಚ್ 26) ಕೊನೆ ದಿನವಾಗಿತ್ತು. ಹೀಗಾಗಿ ಎರಡು ಕ್ಷೇತ್ರಗಳಲ್ಲಿ ಕೆಲವೊಂದಿಷ್ಟು ಹೈಡ್ರಾಮಾ ನಡೆದಿವೆ. ಅದರಲ್ಲೂ ದಾವಣಗೆರೆಯಲ್ಲಿ ಅಂತೂ ಬಂಡಾಯ ಅಭ್ಯರ್ಥಿ ಮನವೊಲಿಕೆಗೆ ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಆದರೆ ಸಾದಿಕ್ ಪೈಲ್ವಾನ್ ಮಾತ್ರ ಸೆಡ್ಡು ಹೊಡೆದು ಕಣದಲ್ಲಿಯೇ ಉಳಿದಿದ್ದಾರೆ.

ದಾವಣಗೆರೆಯಲ್ಲಿ ತಣ್ಣಗಾಗದ ಅಸಮಾಧಾನ, ಅಖಾಡದಲ್ಲೇ ಉಳಿದ ಪೈಲ್ವಾನ್,  ಕಾಂಗ್ರೆಸ್​​ಗೆ ಟೆನ್ಷನ್
Sadiq Pailwan
Edited By:

Updated on: Mar 26, 2026 | 10:33 PM

ದಾವಣಗೆರೆ , (ಮಾರ್ಚ್ 26): ದಾವಣಗೆರೆ ದಕ್ಷಿಣ ಕ್ಷೇತ್ರ (Davanagere South ) ಶಾಮನೂರು ಕುಟುಂಬದ ಭದ್ರಕೋಟೆ. ಕಳೆದ 30 ವರ್ಷಗಳಿಂದ್ಲೂ ಶಾಮನೂರು ಕುಟುಂಬದ ಕೈಯಲ್ಲಿಯೇ ಇಲ್ಲಿನ ಆಡಳಿತ. ಆದ್ರೆ ಶಾಮನೂರು ಶಿವಶಂಕರಪ್ಪನವರ ನಿಧನ ಬಳಿಕ ಈ ಕ್ಷೇತ್ರ ತೆರವಾಗಿದ್ದು, ತಂದೆಯ ಸ್ಥಾನವನ್ನ ಮಗನಿಗೆ ಕೊಡಿಸುವಲ್ಲಿ ಸಚಿವ SS ಮಲ್ಲಿಕಾರ್ಜುನ ಸಫಲರಾಗಿದ್ದಾರೆ. ಆದ್ರೆ,ನಮಗೆ ಟಿಕೆಟ್ ಕೊಡಿ ಎಂದಿದ್ದ ಮುಸ್ಲಿಂ ಸಮುದಾಯ ಕಾಂಗ್ರೆಸ್ (Congress) ವಿರುದ್ಧ ಬಂಡಾಯ ಸಾರಿದೆ. ಹೌದು..ಕೈ ಹೈಕಮಾಂಡ್ ತಮ್ಮ ಸಮುದಾಯವನ್ನ ಬಿಟ್ಟು ಶಾಮನೂರು ಕುಟುಂಬಕ್ಕೆ ಮಣೆ ಹಾಕಿರುವುದ ವಿರುದ್ಧ ಸೆಟೆದು ನಿಂತಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಹೀಗಾಗಿ ಕೈ ಪಡೆ ಕೂಡ ಬಂಡಾಯ ಶಮನದ ಸಹಜ ಪ್ರಯತ್ನ ನಡೆಸಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಸಾದಿಕ್ ಮನವೊಲಿಕೆಗೆ ಯತ್ನಿಸಿದ್ರು. ಕಳೆದ ರಾತ್ರಿ ಕರೆ ಮಾಡಿ ಮಾತನಾಡಿದ್ರು. ಆದ್ರೆ ಪೈಲ್ವಾನ್ ಮಾತ್ರ ತಮ್ಮ ಪಟ್ಟು ಸಡಿಲಿಸುತ್ತಿಲ್ಲ.

ಪೈಲ್ವಾನ್ ಮನವೊಲಿಸುವ ಯತ್ನ ವಿಫಲ

ಮುಸ್ಲಿಮರನ್ನು ಮನವೊಲಿಸಲು ಕಾಂಗ್ರೆಸ್​ನ ಅಲ್ಪಸಂಖ್ಯಾತ ನಾಯಕರು ಇವತ್ತು ದಾವಣಗೆರೆಗೆ ಎಂಟ್ರಿ ಕೊಟ್ಟಿದ್ದು, ಸಾದಿಕ್ ಮನೆಗೆ ಬಂದು ಮನವೊಲಿಸಲು ಯತ್ನಿಸಿದ್ದಾರೆ. ಆದ್ರೆ ಸಾದಿಕ್ ಬೆಂಬಲಿಗರು ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ. ಹೀಗಾಗಿ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ವಾಪಸ್ ಆಗಿದ್ದಾರೆ. ಆದರೆ ಮನವೊಲಿಸುವ ತಮ್ಮ ಆತ್ಮವಿಶ್ವಾಸವನ್ನ ಮಾತ್ರ ಬಿಡುತ್ತಿಲ್ಲ. ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿದರೂ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ದಾವಣಗೆರೆ ದಕ್ಷಿಣ ಬೈಎಲೆಕ್ಷನ್: ಕಾಂಗ್ರೆಸ್‌ಗೆ 1983ರ ಇತಿಹಾಸ ಮರುಕಳಿಸುವ ಭೀತಿ! ಅಂದೇನಾಗಿತ್ತು ಗೊತ್ತೇ?

ಅಂತರ ಕಾಯ್ದುಕೊಂಡ ಜಮೀರ್

ಮತ್ತೊಂದ್ಕಡೆ ಸಾದಿಕ್, ಕ್ಷೇತ್ರದಲ್ಲಿ ನಿರ್ಣಾಯಕವಾಗಿರೋ ಮುಸ್ಲಿಂ ಮತದಾರರು ತಮ್ಮ ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಸಮುದಾಯ ನನ್ನ ಹಿಂದೆ ಇದೆ, ನಾನು ಹಿಂದೆ ಸರಿಯಲ್ಲ ಎಂದು ಮಿನಿ ಸಮರದಲ್ಲಿ ಕದನದಲ್ಲಿ ಧೂಳೆಬ್ಬಿಸಿದ್ದಾರೆ. ಇನ್ನು ಸಚಿವ ಜಮೀರ್ ಅಹ್ಮದ್ ಅವರು ಟಿಕೆಟ್ ವಿಚಾರದಲ್ಲಿ ಮುನಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಹರಿದಾಡ್ತಿವೆ. ಈ ಕಾರಣಕ್ಕೆ ಅಂತರ ಕಾಪಾಡಿಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಇದಕ್ಕೆ ಇಂಬು ನೀಡುವಂತೆ ನಿನ್ನೆ (ಮಾರ್ಚ್ 25) ಸಿಎಂ ನಿವಾಸದಲ್ಲಿ ನಡೆದಿದ್ದ ಮುಸ್ಲಿಂ ಸಚಿವರು, ಶಾಸಕರು, MLCಗಳ ಸಭೆಗಳಿಗೆ ಜಮೀರ್ ಗೈರಾಗಿದ್ದರು. ಅಲ್ಲದೇ ಪೈಲ್ವಾನ್ ಮನವೊಲಿಸುವ ಪ್ರಯತ್ನ ಸಹ ಮಾಡಿಲ್ಲ.

ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳ

ಏಪ್ರಿಲ್ 9ರಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಒಟ್ಟು 36 ಅಭ್ಯರ್ಥಿಗಳ ನಾಮಪತ್ರ ಸಿಂಧು ಆಗಿದ್ದವು. ಈ ಪೈಕಿ ಇಂದು (ಮಾರ್ಚ್ 26) 11 ಅಭ್ಯರ್ಥಿಗಳು ನಾಮಪತ್ರ ವಾಪಸ್​ ಪಡೆದಿದ್ದಾರೆ. ಇದರೊಂದಿಗೆ ಅಂತಿಮವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 25 ಅಭ್ಯರ್ಥಿಗಳ ಪೈಕಿ ಓರ್ವ ಮಹಿಳಾ ಅಭ್ಯರ್ಥಿ ಕಣದಲ್ಲಿದ್ದಾರೆ. ಸಾದಿಕ್ ಪೈಲ್ವಾನ್ ಪಕ್ಷೇತರ ಅಭ್ಯರ್ಥಿ ಆಗಿ ಉಳಿದುಕೊಂಡಿದ್ದಾರೆ . ಇದರೊಂದಿಗೆ 14 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಆದ್ರೆ, ಮುಸ್ಲಿಂ ಅಭ್ಯರ್ಥಿಗಳು ಸಾಧಿಕ್ ಪೈಲ್ವಾನ್ ಅವರಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್​​ಗೆ ಟೆನ್ಷನ್ ಶುರುವಾಗಿದೆ.

ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

ಈ ಬಗ್ಗೆ ಮಾತನಾಡಿದ ಸಾದಿಕ್‌ ಪೈಲ್ವಾನ್‌, ಮೊದಲೇ ರಾಜ್ಯ ನಾಯಕರು ಬಂದು ನಮ್ಮ ಅಹಿಂದ ಮುಖಂಡರು ಹಾಗೂ ನನ್ನ ಜೊತೆ ಸಭೆ ನಡೆಸಬೇಕಿತ್ತು. ನಾವು ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನಗೆ ಕಾಂಗ್ರೆಸ್ ಹಾಗೂ ಬಿಜೆಪಿ ಯಾವುದು ಪ್ರತಿಸ್ಪರ್ಧಿ ಅಲ್ಲ. ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇನೆ ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ ಎಂದು ಸವಾಲು ಎಸೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:43 pm, Thu, 26 March 26

Follow Us