ಕೆರೆ ಬಚಾವೋ; ಧಾರವಾಡದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನರಿಂದ ಹೋರಾಟ

| Updated By: ಆಯೇಷಾ ಬಾನು

Updated on: Apr 10, 2021 | 7:22 AM

ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸೇರಿ ಈ ಅಂತರ ಗಂಗೆಯನ್ನು ನಿರ್ಮೂಲನೆಗೊಳಿಸಲು ಕೆರೆಯಲ್ಲಿನ ನೀರನ್ನು ಖಾಲಿ ಮಾಡಲು ನಿರ್ಧರಿಸಿ, ಕೆರೆಯ ಒಡ್ಡನ್ನು ಜೆಸಿಬಿ ಮೂಲಕ ಕಿತ್ತು ಹಾಕಿ, ನೀರನ್ನು ಹೊರಗೆ ಬಿಟ್ಟಿದ್ದರು. ಇದು ಅವೈಜ್ಞಾನಿಕ ಕ್ರಮ ಎಂದು ಪರಿಸರವಾದಿಗಳು ವಾದ ಮಾಡಿದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳ ವಿರುದ್ಧ ಇದೀಗ ವಿವಿಧ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ.

ಕೆರೆ ಬಚಾವೋ; ಧಾರವಾಡದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನರಿಂದ ಹೋರಾಟ
ಸೋಮೇಶ್ವರ ಕೆರೆ
Follow us on

ಧಾರವಾಡ: ಜಿಲ್ಲೆಯ ಐತಿಹಾಸಿಕ ಕೆರೆಯೊಂದರಲ್ಲಿ ಬೆಳೆದಿದ್ದ ಅಂತರ ಗಂಗೆ ಸಸ್ಯವನ್ನು ತೆಗೆಯಲು ಅಧಿಕಾರಿಗಳು ಮುಂದಾಗಿದ್ದು, ಮಾಡಿದ ಅವೈಜ್ಞಾನಿಕ ಕ್ರಮವನ್ನು ಸಮರ್ಥಿಸಿಕೊಂಡಿದ್ದಲ್ಲದೇ ತಮ್ಮ ಕೆಲಸವನ್ನು ಮುಂದುವರೆಸಿರುವುದು ವಿವಿಧ ಪ್ರಗತಿಪರ ಸಂಘಟನೆಗಳ ಕಂಗೆಣ್ಣಿಗೆ ಗುರಿಯಾಗಿತ್ತು. ಇದೀಗ ಅಧಿಕಾರಿಗಳು ತಮ್ಮ ತಪ್ಪನ್ನು ಅರಿತು ಸರಿಯಾಗಿ ಕೆಲಸವನ್ನು ಮಾಡದೇ ಇರುವ ಹಿನ್ನೆಲೆಯಲ್ಲಿ ಇದೀಗ ಸಂಘಟನೆಗಳು ಕರೆಯನ್ನು ಉಳಿಸುವ ಹೋರಾಟವನ್ನು ಆರಂಭಿಸಿವೆ.

ಧಾರವಾಡ ನಗರದ ಲಕಮನಹಳ್ಳಿ ಬಡಾವಣೆಯಲ್ಲಿರುವ ಐತಿಹಾಸಿಕ ಸೋಮೇಶ್ವರ ಕೆರೆ. ಸುಮಾರು 17 ಎಕರೆ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಈ ಕೆರೆಯಲ್ಲಿ ಇತ್ತೀಚಿಗೆ ಅಂತರ ಗಂಗೆ ಸಸ್ಯ ಬೆಳೆದಿತ್ತು. ಈ ಸಸ್ಯವನ್ನು ನಿರ್ಮೂಲನೆ ಮಾಡಲು ಹಾಗೂ ಕೆರೆಯನ್ನು ಅಭಿವೃದ್ಧಿಪಡಿಸಲು 88 ಲಕ್ಷ ರೂಪಾಯಿ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ರೂಪಿಸಿತ್ತು. ಕೆರೆಗೆ ಸುಮಾರು 800 ಮೀಟರ್ ಕಾಂಕ್ರೀಟ್ ಗೋಡೆಯನ್ನು ಹಾಕುವುದು ಕೂಡ ಇದೇ ಯೋಜನೆಯಲ್ಲಿ ಸೇರಿದೆ.

ಆದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಸೇರಿ ಈ ಅಂತರ ಗಂಗೆಯನ್ನು ನಿರ್ಮೂಲನೆಗೊಳಿಸಲು ಕೆರೆಯಲ್ಲಿನ ನೀರನ್ನು ಖಾಲಿ ಮಾಡಲು ನಿರ್ಧರಿಸಿ, ಕೆರೆಯ ಒಡ್ಡನ್ನು ಜೆಸಿಬಿ ಮೂಲಕ ಕಿತ್ತು ಹಾಕಿ, ನೀರನ್ನು ಹೊರಗೆ ಬಿಟ್ಟಿದ್ದರು. ಇದು ಅವೈಜ್ಞಾನಿಕ ಕ್ರಮ ಎಂದು ಪರಿಸರವಾದಿಗಳು ವಾದ ಮಾಡಿದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳ ವಿರುದ್ಧ ಇದೀಗ ವಿವಿಧ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ. ಇಂದು ಕೆರೆಯ ಬಳಿ ಆಗಮಿಸಿದ ಸಂಘಟನೆಗಳ ಕಾರ್ಯಕರ್ತರು, ಮೊದಲಿಗೆ ಕೆರೆಗೆ ವಿಶೇಷ ಪೂಜೆ ಮಾಡಿದರು.

ಧಾರವಾಡದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನರಿಂದ ಹೋರಾಟ

ಸಾಂಪ್ರದಾಯಿಕವಾಗಿ ಕೆರೆಯ ಪೂಜೆಯ ನಂತರ ಅಧಿಕಾರಿಗಳು ಹಾಗೂ ಗುತ್ತಿಗೆದಾರನಿಗೆ ದೇವರು ಸಮೃದ್ಧಿ ನೀಡಲಿ ಎಂದು ಮತ್ತೊಂದು ಪೂಜೆ ನೆರವೇರಿಸಲಾಯಿತು. ಏಕೆಂದರೆ ಕೆರೆಯನ್ನು ಅಭಿವೃದ್ಧಿಪಡಿಸುವುದು ಅಂದರೆ ಕೆರೆಯಲ್ಲಿನ ನೀರನ್ನು ಖಾಲಿ ಮಾಡುವುದು ಅಲ್ಲ ಎನ್ನುವ ಬುದ್ಧಿಯನ್ನು ದೇವರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರನಿಗೆ ನೀಡಲಿ ಎನ್ನುವುದು ಈ ಪೂಜೆಯ ಹಿಂದಿನ ಉದ್ದೇಶವಾಗಿತ್ತು ಎಂದು ಹೋರಾಟಗಾರ ಲಕ್ಷ್ಮಣ ದೊಡ್ಡಮನಿ ಹೇಳಿದ್ದಾರೆ.

ಪೂಜೆಯ ಬಳಿಕ ಸೋಮೇಶ್ವರ ದೇವಸ್ಥಾನದವರೆಗೆ ಪ್ರತಿಭಟನಾಕಾರರು ಪಾದಯಾತ್ರೆಯನ್ನು ನಡೆಸಿದರು. ಈ ವೇಳೆ ಈ ಕೆಲಸಕ್ಕೆ ಸಂಬಂಧಿಸಿದವರ ವಿರುದ್ಧ ಘೋಷಣೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಈ ಅಂತರ ಗಂಗೆಯನ್ನು ನಿರ್ಮೂಲನೆಗೊಳಿಸಲು ಅನೇಕ ಹೊಸ ಪದ್ಧತಿಗಳಿವೆ. ಅವುಗಳನ್ನು ಬಳಸಿಕೊಂಡೇ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಅಂತರಗಂಗೆಯನ್ನು ನಿರ್ಮೂಲನೆಗೊಳಿಸಲಾಗುತ್ತಿದೆ. ಆದರೆ ಅದನ್ನು ಬಿಟ್ಟು ಈ ರೀತಿ ನೀರು ಖಾಲಿ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಹೋರಾಟಗಾರರಾದ ಸುಧೀರ್ ಹೇಳಿದ್ದಾರೆ.

ಮೊದಲೇ ಎಲ್ಲಾ ಕಡೆಗಳಲ್ಲಿ ಅಂತರ್ಜಲ ಕಡಿಮೆಯಾಗಿದೆ. ಅಂತಹದರಲ್ಲಿ ನೀರು ತುಂಬಿರುವ ಕೆರೆಗಳು ಜನರ ಜೀವನಾಡಿಯಂತೆ ಕೆಲಸ ಮಾಡುತ್ತವೆ. ಈ ಬಗ್ಗೆ ಜ್ಞಾನದ ಕೊರತೆ ಇರುವ ಅಧಿಕಾರಿಗಳು ಏನೇನೋ ಮಾಡಿ, ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನುವುದು ಹೋರಾಟಗಾರರ ಮಾತು.

ಇದನ್ನೂ ಓದಿ: 

ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಆಗ್ರಹ; ಬೇಡಿಕೆ ಈಡೇರಿಸದಿದ್ದರೆ ಅಕ್ಟೋಬರ್​ 15ರಿಂದ ಮತ್ತೆ ಹೋರಾಟ

ಕೊಪ್ಪಳದಲ್ಲಿ ಹಸಿರು ಮಾನವೀಯತೆ; ರಸ್ತೆ ಬದಿಯಲ್ಲಿ ಒಣಗಿ ಹೋಗುತ್ತಿದ್ದ ಗಿಡಗಳಿಗೆ ನೀರುಣಿಸಿದ ದ್ವಾರಕಾಮಯಿ ಟ್ರಸ್ಟ್ ಸದಸ್ಯರು

(Dharwad People urges officers to save someshwara lake in Lakamanagalli Dharwad)