ಹಪ್ತಾ ಕೊಡದೇ ಇದ್ದಿದ್ದಕ್ಕೆ ಮಾಜಿ ಸೈನಿಕನ ಮೇಲೆ ಹಲ್ಲೆ; ಧಾರವಾಡ ಪೊಲಿಸರ ಮೇಲೆ ಗಂಭೀರ ಆರೋಪ
ಧಾರವಾಡದಲ್ಲಿ ವಿದ್ಯಾರ್ಥಿಗಳಿಗಾಗಿ ಪಿಜಿ ಮತ್ತು ಮೆಸ್ ನಡೆಸುತ್ತಿದ್ದ ಸೇನೆಯಿಂದ ನಿವೃತ್ತಿಹೊಂದಿದ್ದ ಸೈನಿಕನೊಬ್ಬ ಕಡಿಮೆ ದರದಲ್ಲಿ ಊಟ, ವಸತಿ ಕೊಡುತ್ತಿದ್ದ. ಕಳೆದ ರಾತ್ರಿ (ಸೆ.28) ಅವನ ಮೆಸ್ಗೆ ನುಗ್ಗಿದ ಎಂಟರಿಂದ ಹತ್ತು ಜನ ಪೊಲೀಸರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಪ್ತಾ ಕೊಡದೇ ಇದ್ದಿದ್ದಕ್ಕೆ ಪೊಲೀಸರು ಥಳಿಸಿರುವುದಾಗಿ ಮಾಜಿ ಸೈನಿಕ ಆರೋಪ ಮಾಡಿದ್ದಾನೆ.

ಧಾರವಾಡ, ಸೆಪ್ಟೆಂಬರ್ 29: ಸೇನೆಯಿಂದ ನಿವೃತ್ತಿಹೊಂದಿದ್ದ ಸೈನಿಕರೊಬ್ಬರು ಧಾರವಾಡದಲ್ಲಿ ವಿದ್ಯಾರ್ಥಿಗಳಿಗಾಗಿ ಪಿಜಿ ಮತ್ತು ಮೆಸ್ ನಡೆಸುತ್ತಿದ್ದರು. ಕಡಿಮೆ ದರದಲ್ಲಿ ಊಟ, ವಸತಿ ಕೊಡುತ್ತಿದ್ದರು. ಆದರೆ ಅವರ ಮೇಲೆ ಕಳೆದ ರಾತ್ರಿ ಅಟ್ಯಾಕ್ ಆಗಿದ್ದು, ಎಂಟರಿಂದ ಹತ್ತು ಜನ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕೃತ್ಯ ಎಸಗಿದವರು ಸ್ವತಃ ಪೊಲೀಸರೇ. ಹಪ್ತಾ ಕೊಡದೇ ಇದ್ದಿದ್ದಕ್ಕೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಮಾಜಿ ಸೈನಿಕ ಆರೋಪ ಮಾಡಿದ್ದಾರೆ.
ಮಾಜಿ ಸೈನಿಕನ ಮೇಲೆ ಪೊಲೀಸರಿಂದ ದುಂಡಾವರ್ತನೆ ಆರೋಪ
ದೇಶ ಸೇವೆ ಮಾಡಿ ನಿವೃತ್ತಿಯಾದ ನಂತರ ರಾಮಪ್ಪ ನಿಪ್ಪಾಣಿ, ಧಾರವಾಡದ ಸಪ್ತಾಪುರ ಬಾವಿ ಬಳಿ ಪಿಜಿ ಮತ್ತು ಮೆಸ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಕಡಿಮೆ ದರಕ್ಕೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಊಟಕ್ಕೆ ಬರುತ್ತಿದ್ದರು. ಆದರೆ ಕಳೆದ ರಾತ್ರಿ (ಸೆ.28) ಹನ್ನೊಂದು ಗಂಟೆ ಸಮಯದ್ಲಲಿ ಸಪ್ತಾಪುರ ಬಾವಿ ಬಳೀಯಿರುವ ಸೈನಿಕ್ ಮೆಸ್ಗೆ ಆಗಮಿಸಿದ್ದ ಧಾರವಾಡ ಉಪನಗರ ಠಾಣೆಯ ಪೊಲೀಸರು ಮೆಸ್ ಗೇಟ್ ಹಾಕುವಂತೆ ರಾಮಪ್ಪಗೆ ಹೇಳಿದ್ದಾರೆ.
ಇನ್ನೂ ನಾಲ್ಕೈದು ವಿದ್ಯಾರ್ಥಿಗಳು ಊಟಕ್ಕೆ ಬರುವವರಿದ್ದಾರೆ ಸರ್ ಎಂದು ಹೇಳಿದ್ದಾರೆ. ಇದೇ ವಿಚಾರಕ್ಕೆ ಪೊಲೀಸರು ಮತ್ತು ರಾಮಪ್ಪನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಮಯದಲ್ಲಿ ರಾಮಪ್ಪ ನಿಪ್ಪಾಣಿ ಮೇಲೆ ಉಪನಗರ ಠಾಣೆಯ ಎಂಟರಿಂದ ಹತ್ತು ಪೊಲೀಸರು ಹೆಲ್ಮೆಟ್ ಸೇರಿದಂತೆ ಅನೇಕ ವಸ್ತುಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರಾಮಪ್ಪಗೆ ಥಳಿಸಿದ್ದಲ್ಲದೇ, ಮೆಸ್ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗರಿಗೆ ಕೂಡಾ ಥಳಿಸಿದ್ದಾರೆ. ಮೆಸ್ನಲ್ಲಿರುವ ಟೇಬಲ್, ಕುರ್ಚಿಗಳನ್ನು ಮುರಿದು, ನಂತರ ಮೆಸ್ನಲ್ಲಿದ್ದ ಸಿಸಿಟಿವಿ ಫುಟೇಜ್, ಮೊಬೈಲ್ಗಳನ್ನು ತಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ ಹೆಂಡ ಖರೀದಿಸಲು ಹಣ ಕೊಡಲಿಲ್ಲವೆಂದು ಅಮ್ಮನನ್ನೇ ಕೊಂದ ಮಗ
ಹಪ್ತಾ ಕೊಡಲೇಬೇಕೆಂದು ಪೀಡಿಸುತ್ತಿದ್ದ ಪೊಲೀಸರು
ಇನ್ನು ತನಗೆ ಈ ಹಿಂದೆ ಪ್ರತಿ ತಿಂಗಳು ನಾಲ್ಕೈದು ಸಾವಿರ ಹಣವನ್ನು ಹಪ್ತಾ ನೀಡುವಂತೆ ಪೊಲೀಸರು ಹೇಳುತ್ತಿದ್ದರು. ನಾನು ಮಾಜಿ ಸೈನಿಕ, ನಾನು ಯಾರಿಗೂ ಹಪ್ತಾ ನೀಡಲ್ಲಾ ಎಂದು ಹೇಳಿದ್ದೆ. ಎಲ್ಲರೂ ಹಪ್ತಾ ನೀಡುತ್ತಾರೆ ನೀನು ಯಾಕೆ ನೀಡಿಲ್ಲಾ ಎಂದು ಪೊಲೀಸರು ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದರು. ನಿನ್ನೆ ರಾತ್ರಿ ಬಂದು ಮನಸೋ ಇಚ್ಚೆ ಥಳಿಸಿದ್ದಾರೆ ಎಂದು ರಾಮಪ್ಪ ಆರೋಪಿಸುತ್ತಿದ್ದಾರೆ. ನ್ಯಾಯ ನೀಡಬೇಕಾದ ಪೊಲೀಸರೇ ಅನ್ಯಾಯ ಮಾಡಿದ್ದಾರೆ ಅಂತ ರಾಮಪ್ಪನ ಸಹೋದರ ಆರೋಪಿಸಿದ್ದಾರೆ.
ಸಧ್ಯ ಧಾರವಾಡ ಉಪನಗರ ಪೊಲೀಸ್ ಠಾಣೆ ಪೊಲೀಸರ ವಿರುದ್ದ ಕುಟುಂಬ ಇದೀಗ ದೂರು ನೀಡಲು ಮುಂದಾಗಿದೆ. ಮೇಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Mon, 29 September 25



