ಧಾರವಾಡದಲ್ಲಿ ಮತ್ತೆ ಸಿಡಿದೆದ್ದ ವಿದ್ಯಾರ್ಥಿಗಳು: ಸ್ಟೂಡೆಂಟ್ಸ್ ಕಿಚ್ಚು ಹೇಗಿತ್ತು ನೋಡಿ
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಜನಸಾಮಾನ್ಯರ ವೇದಿಕೆ ವತಿಯಿಂದ ಇಂದು ಹೋರಾಟ ಮಾಡಲಾಯಿತು. ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆ ಸಂಘಟನೆಗಳು ಹೋರಾಟ ಮಾಡಿದವರು. ಇನ್ನು ಈ ವೇಳೆ ಸುಮಾರು 50 ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.
Updated on: Dec 01, 2025 | 6:38 PM

ಖಾಲಿ ಇರುವ ಸರಕಾರಿ ಹುದ್ದೆಗಳನ್ನು ತುಂಬಿಕೊಳ್ಳುವಂತೆ ಆಗ್ರಹಿಸಿ ಇಂದು ಧಾರವಾಡದಲ್ಲಿ ನಡೆಯಲಿದ್ದ ಹೋರಾಟಕ್ಕೆ ಬಹುತೇಕ ಬ್ರೇಕ್ ಬಿತ್ತು. ಕಳೆದ ಬಾರಿ ನಡೆದಿದ್ದ ಉದ್ಯೋಗಾಕಾಂಕ್ಷಿಗಳ ಹೋರಾಟದ ವೇಳೆ ಕೆಲ ಅಹಿತಕರ ಘಟನೆ ನಡೆದಿದ್ದ ಹಿನ್ನೆಲೆ ಪೊಲೀಸರು ಹೋರಾಟಕ್ಕೆ ಅನುಮತಿ ನೀಡಿರಲಿಲ್ಲ. ಆದರೂ ಪ್ರತಿಭಟನೆಯನ್ನು ನಡೆಸಲು ಮುಂದಾದ ಹೋರಾಟಗಾರರನ್ನು ಪೊಲೀಸರು ಬಂಧಿಸುವ ಮೂಲಕ ಹೋರಾಟಕ್ಕೆ ಬ್ರೇಕ್ ಹಾಕಿದರು.

ರಾಜ್ಯ ಹಾಗೂ ಕೇಂದ್ರ ಸರಕಾರಗಳು ಖಾಲಿ ಇರುವ ಹುದ್ದೆಗಳನ್ನು ತುಂಬುತ್ತಿಲ್ಲ. ಇದರಿಂದಾಗಿ ಹಲವು ವರ್ಷಗಳಿಂದ ಕಾಯ್ದು ಕುಳಿತಿರುವ ಉದ್ಯೋಗಾಕಾಂಕ್ಷಿಗಳಿಗೆ ನಿರಾಶೆಯಾಗಿದೆ. ಹೀಗಾಗಿ ಸರಕಾರದ ವಿರುದ್ಧ ಜನಸಾಮಾನ್ಯ ವೇದಿಕೆ ವತಿಯಿಂದ ಇಂದು ಧಾರವಾಡದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಗೆ ಅನೇಕ ಸಂಘಟನೆಗಳು ಕೂಡ ಸಾಥ್ ನೀಡಿದ್ದವು. ಆದರೆ ಸೆಪ್ಟೆಂಬರ್ 25 ರಂದು ನಡೆದಿದ್ದ ಉದ್ಯೋಗಾಕಾಂಕ್ಷಿಗಳ ಹೋರಾಟದ ವೇಳೆ ಕೆಲ ಅಹಿತಕರ ಘಟನೆಗಳು ಹಿನ್ನೆಲೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ ನಗರದ ಶ್ರೀನಗರ ವೃತ್ತದ ಬಳಿ ಜಮಾಯಿಸಿದ ಹೋರಾಟಗಾರರು ಪ್ರತಿಭಟನೆಯನ್ನು ಆರಂಭಿಸಲು ನಿರ್ಧರಿಸಿದ್ದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ನಾವು ಪರಿಸ್ಥಿತಿ ಅವಲೋಕನ ಮಾಡಿದ್ದೇವೆ. ನಾವು ಕೆಲವು ಪ್ರಶ್ನೆ ಕೇಳಿದ್ದೆವು. ಆದರೆ ಆಯೋಜಕರಿಂದ ಸರಿಯಾದ ಮಾಹಿತಿ ಬರಲಿಲ್ಲ. ಹೀಗಾಗಿ ನಾವು ಅನುಮತಿ ನೀಡಿಲ್ಲ ಅಂತಾ ಹೇಳಿದರು. ನಿಮ್ಮ ಮನವಿ ನಮಗೆ ಕೊಡಿ, ನಾವು ಡಿಸಿ ಮೂಲಕ ಸರಕಾರಕ್ಕೆ ಕಳಿಸಿಕೊಡುತ್ತೇವೆ ಅಂದರು. ಅನುಮತಿ ಇಲ್ಲದೇ ಪ್ರತಿಭಟನೆ, ಮೆರವಣಿಗೆ ಮಾಡುವುದು ಬೇಡ ಅಂತಾ ಮನವೊಲಿಸಲು ಯತ್ನಿಸಿದರು.

ಆಯುಕ್ತರ ಮಾತಿಗೆ ಹೋರಾಟಗಾರರು ಜಗ್ಗಲಿಲ್ಲ. ಪೊಲೀಸರು ನಮ್ಮ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಸರಕಾರ ಪೊಲೀಸರ ಮೂಲಕ ಈ ಕೆಲಸವನ್ನು ಮಾಡುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸರಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಕೊನೆಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಲು ಮುಂದಾದಾಗ ಸುಮಾರು 50 ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.

ಬಂಧಿಸಿದ ಪ್ರತಿಭಟನಾಕಾರರನ್ನು ಹುಬ್ಬಳ್ಳಿಗೆ ಕರೆದೊಯ್ದ ಪೊಲೀಸರು, ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಅಲ್ಲಿಂದ ಚೆದುರಿಸಿದರು. ಬಳಿಕ ಘಟನಾ ಸ್ಥಳಕ್ಕೆ ಕೆಲ ರೈತ ಮುಖಂಡರು ಆಗಮಿಸಿ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಇಂದು ನಡೆಯಲಿದ್ದ ಹೋರಾಟ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಂತೂ ಸತ್ಯ.




