AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂ. ಭೀಮಸೇನ ಜೋಶಿ ಜನ್ಮಶತಮಾನೋತ್ಸವ; ಧಾರವಾಡದಲ್ಲಿ ಅಕ್ಟೋಬರ್ 9 ರಿಂದ 2 ದಿನಗಳ ಸಂಗೀತೋತ್ಸವ

ಹುಬ್ಬಳ್ಳಿಯ ಹರೀಶ ಕುಲಕರ್ಣಿ ಬಾನ್ಸುರಿ ವಾದನ, ಧಾರವಾಡದ ವಿಜಯಕುಮಾರ ಪಾಟೀಲ, ಕುಮಾರ ಮರಡೂರ ಹಾಗೂ ನವನಗರದ ಶುಭಾಂಗಿ ಜಾಧವ ಅವರಿಂದ ಗಾನಸುಧೆ ಮೂಡಿಬರಲಿದೆ.

ಪಂ. ಭೀಮಸೇನ ಜೋಶಿ ಜನ್ಮಶತಮಾನೋತ್ಸವ; ಧಾರವಾಡದಲ್ಲಿ ಅಕ್ಟೋಬರ್ 9 ರಿಂದ 2 ದಿನಗಳ ಸಂಗೀತೋತ್ಸವ
ಭೀಮಪಲಾಸ ಸಂಗೀತೋತ್ಸವ
TV9 Web
| Edited By: |

Updated on: Oct 06, 2021 | 5:30 PM

Share

ಧಾರವಾಡ: ಭಾರತ ರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 9 ಹಾಗೂ 10 ರಂದು ಸಂಜೆ 5:30ಕ್ಕೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಎರಡು ದಿನಗಳ ಯುವ ಪ್ರತಿಭೆಗಳ ಕಲಾಪ್ರದರ್ಶನ ನಡೆಯಲಿದೆ. ಹುಬ್ಬಳ್ಳಿಯ ಹರೀಶ ಕುಲಕರ್ಣಿ ಬಾನ್ಸುರಿ ವಾದನ, ಧಾರವಾಡದ ವಿಜಯಕುಮಾರ ಪಾಟೀಲ, ಕುಮಾರ ಮರಡೂರ ಹಾಗೂ ನವನಗರದ ಶುಭಾಂಗಿ ಜಾಧವ ಅವರಿಂದ ಗಾನಸುಧೆ ಮೂಡಿಬರಲಿದೆ. ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಭೀಮಪಲಾಸ ಸಂಗೀತೋತ್ಸವವನ್ನು ರಾಜ್ಯಾದ್ಯಂತ ವರ್ಷಪೂರ್ತಿ ಹಮ್ಮಿಕೊಂಡಿವೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ ವಿಮಾ ನಿಗಮ, ಎಲ್‌ಐಸಿಯ ಹೌಸಿಂಗ್ ಫೈನಾನ್ಸ್ ಸಂಸ್ಥೆಗಳ ಸಹಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿದೆ. ಸಹಕಲಾವಿದರಾಗಿ ಪಾಲ್ಗೊಳ್ಳಲಿರುವ ಶ್ರೀಧರ ಮಾಂಡ್ರೆ, ಕೇಶವ ಜೋಶಿ, ಶ್ರೀಹರಿ ದಿಗ್ಗಾವಿ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರ್, ಭರತ ಹೆಗಡೆ ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ. ವಿವಿಡ್‌ಲಿಪಿ ಸಂಸ್ಥೆಯು ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಾಡಲಿದೆ. ಅ. 9 ರಂದು ಹುಬ್ಬಳ್ಳಿಯ ಬಾನ್ಸುರಿ ವಾದಕ ಹರೀಶ ಕುಲಕರ್ಣಿ ಹಾಗೂ ಧಾರವಾಡದ ಗಾನಪ್ರತಿಭೆ ವಿಜಯಕುಮಾರ ಪಾಟೀಲ ಕಲಾ ಪ್ರದರ್ಶನ ಮಾಡಲಿದ್ದಾರೆ.

ಬಾನ್ಸುರಿ ವಾದಕ ಹುಬ್ಬಳ್ಳಿಯ ಹರೀಶ ಕುಲಕರ್ಣಿ ಹುಬ್ಬಳ್ಳಿಯ ಹರೀಶ ಕುಲಕರ್ಣಿ ಅವರು ನಾಡಿನ ಉತ್ತಮ ಬಾನ್ಸುರಿ ವಾದಕರಲ್ಲಿ ಒಬ್ಬರು. ಇವರ ಸಂಗೀತ ಕಲಿಕೆ ಆರಂಭಗೊಂಡಿದ್ದು ಕರ್ನಾಟಕ ಸಂಗೀತ ಕಲಿಕೆಯೊಂದಿಗೆ. ಸುಮಾರು ವರ್ಷಗಳವರೆಗೆ ದಕ್ಷಿಣಾದಿ ಗಾಯನ ಶೈಲಿಯನ್ನು ವಿದುಷಿ ಶ್ರೀಮತಿ ಪಾರ್ಥಸಾರಥಿ ಅವರಲ್ಲಿ ಅಧ್ಯಯನ ಮಾಡಿದರು. ನಂತರ ಬಾನ್ಸುರಿ ಕಲಿಕೆಯತ್ತ ಇವರ ಚಿತ್ತ ಹರಿಯಿತು. ಮಾಧವ ಜೋಶಿ ಅವರಿಂದ ಕೊಳಲು ವಾದನದ ಆರಂಭಿಕ ಪಾಠಗಳನ್ನು ಹೇಳಿಸಿಕೊಂಡರು. ನಂತರ ಪಂ. ವೆಂಕಟೇಶ ಗೋಡಖಿಂಡಿ ಅವರಲ್ಲಿ ಶಿಕ್ಷಣ ಮುಂದುವರಿಸಿದರು. ಗ್ವಾಲಿಯರ್ ಘರಾಣೆಯ ಪಂ. ಕೃಷ್ಣಾಜಿ ಕುರ್ತಕೋಟಿ ಅವರಲ್ಲಿ ಅನೇಕ ವರ್ಷಗಳ ಆಳವಾದ ಮಾರ್ಗದರ್ಶನ ಪಡೆದು ಪ್ರತಿಭಾವಂತ ಬಾನ್ಸುರಿ ವಾದಕರಾಗಿ ಹೊರಹೊಮ್ಮಿದರು. ಆಕಾಶವಾಣಿ ಶ್ರೇಣಿಯ ಕಲಾವಿದರಾಗಿರುವ ಹರೀಶ ಕುಲಕರ್ಣಿ ಅವರು ಕರ್ನಾಟಕ, ಮಹಾರಾಷ್ಟ್ರ ಮಧ್ಯಪ್ರದೇಶ, ಇಂಗ್ಲೆಂಡ್‌ನಲ್ಲಿ ತಮ್ಮ ಬಾನ್ಸುರಿ ವಾದನದ ಪ್ರತಿಭೆಯನ್ನು ಮೆರೆದಿದ್ದಾರೆ.

ಧಾರವಾಡದ ಯುವ ಗಾಯಕ ವಿಜಯಕುಮಾರ ಪಾಟೀಲ ಪಂ. ಸಂಗಮೇಶ್ವರ ಗುರವ ಹಾಗೂ ಪಂ. ಕೈವಲ್ಯಕುಮಾರ ಗುರವ ಅವರ ಗರಡಿಯಲ್ಲಿ ಪಳಗಿದ ಧಾರವಾಡದ ಯುವ ಪ್ರತಿಭೆ ವಿಜಯಕುಮಾರ ಪಾಟೀಲ. ಧಾರವಾಡದ ಸಾಂಗೀತಿಕ ಪರಿಸರವು ಇವರನ್ನು ಗಾಯನ ಕಲಿಕೆಯತ್ತ ಸೆಳೆಯಿತು. ಅನೇಕ ವರ್ಷಗಳವರೆಗೆ ಪಂ. ಕೈವಲ್ಯಕುಕಮಾರ ಗುರವ ಅವರಿಂದ ಆಳವಾದ ಮಾರ್ಗದರ್ಶನ ಪಡೆದು ಕಿರಾನಾ ಘರಾಣೆಯ ಗಾಯನ ಶೈಲಿಯನ್ನು ಪ್ರಸ್ತುತಪಡಿಸುವಲ್ಲಿ ಪ್ರಾವೀಣ್ಯತೆ ಸಾಧಿಸಿದವರು ವಿಜಯಕುಮಾರ ಪಾಟೀಲ.

Dharwad, Pandit Bhimsen Joshi Music Programme

ಭೀಮಪಲಾಸ ಸಂಗೀತೋತ್ಸವ

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಸ್ನಾತಕೋತ್ತರ ಪದವಿಧರರಾಗಿರುವ ವಿಜಯಕುಮಾರ, ಆಕಾಶವಾಣಿ ಹಾಗೂ ದೂರದರ್ಶನ ಶ್ರೇಣಿಯ ಕಲಾವಿದರು. ಕನ್ನಡ ರಂಗಗೀತೆ, ದಾಸವಾಣಿ, ವಚನ ಗಾಯನ, ಅಭಂಗವಾಣಿ ಹಾಗೂ ನಾಟ್ಯಸಂಗೀತದ ಪ್ರಸ್ತುತಿಯಲ್ಲಿ ಪ್ರಬುದ್ಧತೆಯನ್ನು ಸಾಧಿಸಿರುವ ವಿಜಯಕುಮಾರ ಪಾಟೀಲರಿಗೆ 2013ರಲ್ಲಿ ಡಾ. ಮಲ್ಲಿಕಾರ್ಜುನ ಮನ್ಸೂರ ಯುವ ಪುರಸ್ಕಾರ, ಹರಿವಲ್ಲಭ ಸಂಗೀತ ಸಮಾರೋಹದಲ್ಲಿ ಚಿನ್ನದ ಪದಕ, ಆಕಾಶವಾಣಿಯ ರಾಜ್ಯಮಟ್ಟದ ನಾಟ್ಯಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹೀಗೆ ವಿವಿಧ ಪ್ರಶಸ್ತಿ-ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಕರ್ನಾಟಕ, ಪಂಜಾಬ್‌ಗಳಲ್ಲದೇ ವಿದೇಶಗಳಲ್ಲೂ ತಮ್ಮ ಸಂಗೀತದ ನಿನಾದ ಹರಿಸಿದ್ದಾರೆ.

ಅ. 10ರಂದು ಪ್ರತಿಭಾವಂತ ಗಾಯಕಿ ಹುಬ್ಬಳ್ಳಿಯ ಶುಭಾಂಗಿ ಜಾಧವ ಹಾಗೂ ಧಾರವಾಡದ ಪ್ರಬುದ್ಧ ಗಾಯಕ ಕುಮಾರ ಮರಡೂರ ಅವರಿಂದ ಸಂಗೀತದ ನಿನಾದ ಹರಿದುಬರಲಿದೆ.

ಧಾರವಾಡದ ಗಾಯಕ ಕುಮಾರ ಮರಡೂರ ಧಾರವಾಡದ ಸಾಂಸ್ಕೃತಿಕ ಪರಿಸರದಲ್ಲಿ ಜನಿಸಿದ ಕಂಚಿನ ಕಂಠದ ಕುಮಾರ ಮರಡೂರ ಅವರದು ಸಂಗೀತಗಾರರ ಮನೆತನ. ಡಾ. ಪುಟ್ಟರಾಜ ಗವಾಯಿಗಳು, ಪಂ. ಬಸವರಾಜ ರಾಜಗುರು ಹಾಗೂ ಪಂ. ಮಲ್ಲಿಕಾರ್ಜುನ ಮನಸೂರ ಅವರ ಶಿಷ್ಯರಾದ ತಂದೆ ಪಂ. ಸೋಮನಾಥ ಮರಡೂರ ಕಿರಾನಾ ಘರಾಣೆಯ ಪ್ರತಿನಿಧಿ. ಸಹೋದರಿಯರಾದ ವೀಣಾ ಹಾಗೂ ವಾಣಿ ಅವರು ಕೂಡ ಗಾಯಕಿಯರು. ಸಹಜವಾಗಿ ಕುಮಾರ ಮರಡೂರಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು. ತಂದೆಯ ಪದತಲದಲ್ಲಿ ಕುಳಿತು ಆಳವಾದ ಸಂಗೀತ ಶಿಕ್ಷಣ ಪಡೆದ ಕುಮಾರ, ಓರ್ವ ಉದಯೋನ್ಮುಖ ಪ್ರತಿಭಾವಂತ ಕಲಾವಿದರಾಗಿ ಹೊರಹೊಮ್ಮಿದರು. ನಂತರ ಸವಾಯಿ ಗಂಧರ್ವರ ಹಿರಿಯ ಶಿಷ್ಯ ಪಂ. ಫಿರೋಜ್ ದಸ್ತೂರ ಅವರಿಂದ ಕಿರಾನಾ ಘರಾಣೆಯ ಹೆಚ್ಚಿನ ಮಾರ್ಗದರ್ಶನ ಪಡೆದರು. ನಂತರದ ದಿನಗಳಲ್ಲಿ ಜೈಪುರ ಘರಾಣೆಯ ಗಾಯನಶೈಲಿಯನ್ನು ಅಳವಡಿಕೊಂಡರು. 2011 ರಿಂದ ಕೋಲ್ಕತ್ತಾದ ಐಟಿಸಿ ರಿಸರ್ಚ್ ಅಕಾಡೆಮಿಯ ಉಪನ್ಯಾಸಕಾರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕುಮಾರ ಅವರ ಗಾಯಕಿ ಎಂದರೆ ಗ್ವಾಲಿಯರ್, ಕಿರಾನಾ ಹಾಗೂ ಜೈಪುರ ಘರಾಣೆಗಳ ಸಮ್ಮಿಲನ. ವಿಲಂಬಿತ ಲಯದ ನಿರಾತಂಕ ಅವಕಾಶದಲ್ಲಿ ಸ್ವರಗಳನ್ನು ಆಲಾಪಿಸಿ ಕ್ರಿಯಾಮಾಧುರ್ಯಗಳೊಂದಿಗೆ ಶೃಂಗರಿಸುವಿಕೆ, ರಾಗದ ಶುದ್ಧತೆ, ಕ್ರಮಬದ್ಧ ರಾಗವಿಸ್ತಾರ, ಫಿರತ್, ವೈವಿಧ್ಯಮಯ ತಾನ್ಗಳ ಪ್ರಸ್ತುತಿ, ಸ್ವರಗಳ ಆರೋಹ-ಅವರೋಹಗಳ ಸರಗಮ್, ಅತ್ಯುತ್ತಮ ಲಯಕಾರಿ ಅವರ ಗಾಯಕಿಯಲ್ಲಿ ಹಾಸುಹೊಕ್ಕಾಗಿವೆ. ಠುಮರಿ, ದಾದ್ರಾ, ಗಝಲ್, ಭಜನ್, ವಚನ ಪ್ರಸ್ತುತಪಡಿಸುವಲ್ಲಿ ಸಿದ್ಧಹಸ್ತರು.

ಉ. ಬಿಸ್ಮಿಲ್ಲಾ ಖಾನ ಯುವ ಪುರಸ್ಕಾರ, ಡಾ. ಮಲ್ಲಿಕಾರ್ಜುನ ಮನ್ಸೂರ ಯುವ ಪುರಸ್ಕಾರ, ಪಂ. ವಸಂತರಾವ ದೇಶಪಾಂಡೆ ಯುವ ಕಲಾಕಾರ ಪ್ರಶಸ್ತಿ, ವಿದ್ಯಾಸಾಗರ ಪ್ರಶಸ್ತಿ, ರಾಮಕೃಷ್ಣಬುವಾ ವಝೆ ಪ್ರಶಸ್ತಿ ಹೀಗೆ ವಿವಿಧ ಪುರಸ್ಕಾರಗಳಿಗೆ ಭಾಜನರಾಗಿರುವ ಕುಮಾರ ಮರಡೂರ ಆಕಾಶವಾಣಿ ಹಾಗೂ ದೂರದರ್ಶನದ ಎ ಶ್ರೇಣಿಯ ಕಲಾವಿದರು. ದೇಶದ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ಹಾಗೂ ಬಾಂಗ್ಲಾದೇಶ, ಅಮೆರಿಕ, ಸಿಂಗಾಪೂರಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ.

Dharwad, Pandit Bhimsen Joshi Music Programme

ಭೀಮಪಲಾಸ ಸಂಗೀತೋತ್ಸವ

ಹುಬ್ಬಳ್ಳಿಯ ಉದಯೋನ್ಮುಖ ಗಾಯಕಿ ಶುಭಾಂಗಿ ಜಾಧವ ಕಿರಾನಾ ಘರಾಣೆಯ ಉದಯೋನ್ಮುಖ ಗಾಯಕಿ ಹುಬ್ಬಳ್ಳಿ ನವನಗರದ ಶುಭಾಂಗಿ ಜಾಧವ. ಸಂಗೀತ ಮನೆತನದ ಹಿನ್ನೆಲೆಯಿಂದ ಬಂದವರು. ಅಜ್ಜ ಪಂ. ಡಿ.ಆರ್. ವಾರಂಗ ಹಾಗೂ ತಾಯಿ ಶಾರದಾ ಜಾಧವ ಅವರು ಕೂಡ ಸಂಗೀತಗಾರರು. ಮನೆಯಲ್ಲಿದ್ದ ಸಂಗೀತಮಯ ಪರಿಸರವು ಶುಭಾಂಗಿ ಅವರಿಗೆ ಚಿಕ್ಕವರಿದ್ದಾಗಿನಿಂದಲೇ ಸಂಗೀತ ಕಲಿಯಲು ಪ್ರೇರಣೆ ನೀಡಿತು. ಅಜ್ಜ ಹಾಗೂ ತಾಯಿಯಿಂದ ಪ್ರಾಥಮಿಕ ಹಂತದ ಶಿಕ್ಷಣ ಪಡೆದರು. ನಂತರ ಎರಡು ವರ್ಷ ಪಂ. ಬಾಲಚಂದ್ರ ನಾಕೋಡರಲ್ಲಿ ಗ್ವಾಲಿಯರ್ ಶೈಲಿಯ ಗಾಯನಾಭ್ಯಾಸವನ್ನು ಮುಂದುವರೆಸಿದರು. 2009ರಿಂದ ಇಲ್ಲಿಯವರೆಗೆ ಕಿರಾನಾ ಘರಾಣೆಯ ಪಂ. ಅಚ್ಯುತ ಅಭ್ಯಂಕರ ಅವರ ಶಿಷ್ಯೆ ಮುಂಬೈನ ವಿದುಷಿ ವಿಭಾವರಿ ಬಾಂಧವಕರ ಅವರಲ್ಲಿ ಮಾರ್ಗದರ್ಶನ ಪಡೆಯುತ್ತಿರುವ ಶುಭಾಂಗಿ ಜಾಧವ, ಭರವಸೆಯ ಗಾಯಕಿಯಾಗಿ ರೂಪುಗೊಂಡಿದ್ದಾರೆ. ಸಂಗೀತ ಅಲಂಕಾರ ಹಾಗೂ ಶಿವಾಜಿ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದಿರುವ ಶುಭಾಂಗಿ, ಖ್ಯಾಲ್, ಠುಮರಿ, ದಾದ್ರಾ, ನಾಟ್ಯಸಂಗೀತ, ಭಜನ್‌ಗಳನ್ನು ಹೀಗೆ ವಿವಿಧ ಪ್ರಕಾರಗಳ ಸಂಗೀತ ಶೈಲಿಗಳಲ್ಲಿ ತಮ್ಮ ಗಾಯನವನ್ನು ಪ್ರಸ್ತುತಪಡಿಸುವಲ್ಲಿ ಸಿದ್ಧಹಸ್ತರೆನಿಸಿಕೊಂಡಿದ್ದಾರೆ. ಕುಂದಗೋಳ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮುಂಬೈ, ಬರೋಡಾ, ಕೊಲ್ಹಾಪೂರಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿರುವ ಶುಭಾಂಗಿ ಜಾಧವ, ಧಾರವಾಡ ಪಂ. ಮನ್ಸೂರ ಟ್ರಸ್ಟ್ ಪ್ರದಾನಿಸುವಂಥ ಪ್ರತಿಷ್ಠಿತ ಪಂ. ಮಲ್ಲಿಕಾರ್ಜುನ ಮನ್ಸೂರ ಯುವ ಪುರಸ್ಕಾರ, ಲಕ್ಷ್ಮೀಬಾಯಿ ಜಾಧವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

ನರಸಿಂಹಮೂರ್ತಿ ಪ್ಯಾಟಿ ಹಿರಿಯ ವರದಿಗಾರ ಟಿವಿ-9, ಧಾರವಾಡ

ಇದನ್ನೂ ಓದಿ: ಭಾರತ ರತ್ನ ಪಂಡಿತ ಭೀಮಸೇನ ಜೋಶಿ ಜನ್ಮಶತಮಾನೋತ್ಸವ; ಭೀಮಪಲಾಸ್ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸಂಗೀತಕಾಶಿ ಧಾರವಾಡ

ಧಾರವಾಡ ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಿಕ್ಕಮಕ್ಕಳ ಸೆರೆಬ್ರಲ್ ಪಾಲ್ಸಿ ರೋಗ ಪತ್ತೆಗೆ ನೂತನ ಯಂತ್ರ ಆವಿಷ್ಕಾರ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್