ಸರ್ಕಾರದ ವಾತ್ಸಲ್ಯ ಯೋಜನೆ ವಿಷಯದಲ್ಲಿ ತಪ್ಪು ಸಂದೇಶ ರವಾನೆ; ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುತ್ತಿರೋ ಜನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 20, 2024 | 9:05 PM

ಸಾಮಾಜಿಕ ಜಾಲತಾಣ ವಾಟ್ಸಾಪ್​ನ ಫಾರ್ವರ್ಡ್ ಮೆಸೇಜ್ ಹಾವಳಿಯಿಂದಾಗಿ ಇತ್ತೀಚೆಗೆ ಸತ್ಯ ಯಾವುದು, ಸುಳ್ಳು ಯಾವುದು ಎನ್ನುವುದು ತಿಳಿಯದಂತಾಗಿದೆ. ಅದರಲ್ಲಿಯೂ ಸರ್ಕಾರಿ ಯೋಜನೆಗಳ ವಿಷಯದಲ್ಲಂತೂ ಒಳ್ಳೆ ಸಂದೇಶ ವೈರಲ್ ಆಗುವ ಬದಲಿಗೆ ಗೊಂದಲ ಮೂಡಿಸೋ ಸಂದೇಶಗಳೇ ಈ ವಾಟ್ಸಾಪ್​ನಿಂದ ಹೆಚ್ಚು ವೈರಲ್ ಆಗುತ್ತಿರುತ್ತೆ. ಅಂತಹುದೇ ಒಂದು ಫಾರ್ವರ್ಡ್ ಮೆಸೇಜ್ ಈಗ ಸರ್ಕಾರದ ಮಹತ್ವದ ಯೋಜನೆಯೊಂದರ ವಿಷಯದಲ್ಲಿ ಗೊಂದಲ ಸೃಷ್ಟಿಸಿದೆ.

ಸರ್ಕಾರದ ವಾತ್ಸಲ್ಯ ಯೋಜನೆ ವಿಷಯದಲ್ಲಿ ತಪ್ಪು ಸಂದೇಶ ರವಾನೆ; ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುತ್ತಿರೋ ಜನ
ಸರ್ಕಾರದ ವಾತ್ಸಲ್ಯ ಯೋಜನೆ ವಿಷಯದಲ್ಲಿ ತಪ್ಪು ಸಂದೇಶ ರವಾನೆ
Follow us on

ಧಾರವಾಡ, ಸೆ.20: ಧಾರವಾಡದ ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿಯಲ್ಲಿ ರಾಜ್ಯ ಸರ್ಕಾರದ ವಾತ್ಸಲ್ಯ ಯೋಜನೆ (vatsalya scheme) ಗೆ ಸಂಬಂಧಿಸಿ ಫಾರ್ಮ್ ತುಂಬಲಾಗುತ್ತಿದೆ. ಈ ಯೋಜನೆಯ ಅನ್ವಯ ತಂದೆ-ತಾಯಿ ಇಲ್ಲದ ಮಕ್ಕಳು ಹಾಗೂ ತಂದೆ-ತಾಯಿ ಅನಾರೋಗ್ಯಕ್ಕೀಡಾಗಿದ್ದಲ್ಲಿ ಅಂತಹ ಮಕ್ಕಳ ಪೋಷಣೆಗಾಗಿ ಹಾಗೂ ಫೋಷಕರು ಇಲ್ಲದೇ ಇದ್ದರೂ ಅವರು ಸರ್ಕಾರದ ಪ್ರಾಯೋಜಕತ್ವದ ಹಣದಲ್ಲಿ ಜೈವಿಕ ಕುಟುಂಬದಲ್ಲಿ ಬೆಳೆಯಬೇಕು ಎನ್ನುವ ಉದ್ದೇಶದಿಂದ ಪ್ರತಿ ತಿಂಗಳು 4 ಸಾವಿರ ರೂಪಾಯಿ ನೀಡುವ ಯೋಜನೆ ಇದಾಗಿದೆ. ಅಲ್ಲದೇ ಇದು ಹೊಸದಾಗಿ ಮಾಡಿರುವ ಯೋಜನೆಯೂ ಅಲ್ಲ. ಬದಲಿಗೆ ಇದೊಂದು ಚಾಲ್ತಿಯಲ್ಲಿರುವ ಯೋಜನೆ. ಆದರೆ, ಇದೊಂದು ಸ್ಕಾಲರ್ ಶಿಪ್ ಯೋಜನೆಯಾಗಿದ್ದು, ನಿಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡಿಸುತ್ತೇವೆ ಎಂದು ಕೆಲವರು ವಾಟ್ಸಾಪ್​ಗಳಲ್ಲಿ ಸಂದೇಶ ರವಾನಿಸುವ ಜೊತೆಗೆ ಅರ್ಜಿ ಫಾರ್ಮಗಳನ್ನು ಸಹ ಮಾರಾಟ ಮಾಡುವ ಮೂಲಕ ಜನರಿಗೆ ವಂಚಿಸುವ ಕಾರ್ಯ ನಡೆದಿದೆಯಂತೆ. ಹೀಗಾಗಿ ಯಾರೂ ಕೂಡ ಇದು ಸ್ಕಾಲರ್ ಶಿಪ್ ಎಂದು ನಂಬಬೇಡಿ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಹೇಳುತ್ತಿದ್ದಾರೆ.

ಇನ್ನು ಈ ವಾಟ್ಸಾಪ್ ಸಂದೇಶವನ್ನೇ ನಂಬಿ ಅನೇಕರು ದೂರದ ಊರುಗಳಿಂದ ಜಿಲ್ಲಾಧಿಕಾರಿ ಕಚೇರಿಗೂ ಬರುತ್ತಿದ್ದಾರೆ.  ಅನೇಕರು ತಮಗೆ ವಾಟ್ಸಾಪ್​ನಲ್ಲಿ ಬಂದಿರುವ ಅರ್ಜಿ ಪ್ರತಿಯನ್ನೇ ಝೆರಾಕ್ಸ್ ಮಾಡಿಸಿಕೊಂಡು ಗ್ರಾಮ ಪಂಚಾಯತಿ, ಕಂದಾಯ ಇಲಾಖೆ ಕಚೇರಿಗಳಿಗೂ ಅಲೆದಾಡುತ್ತಿದ್ದಾರೆ. ಆದರೆ, ಸದ್ಯ ವೈರಲ್ ಆಗಿರುವ ಅರ್ಜಿ ನಮೂನೆಯ ಮೇಲೆ ಮಂಗಳೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹೆಸರಿನ ಮೊಹರು ಇದೆ. ಈ ಅರ್ಜಿ ನಮೂನೆಯನ್ನೇ ತೆಗೆದುಕೊಂಡು ಅನೇಕರು ಬರುತ್ತಿದ್ದಾರೆ. ಅಲ್ಲದೇ ಇದಕ್ಕಾಗಿ ಇರುವ ಮಾನದಂಡಗಳ ಬಗ್ಗೆಯೂ ಅನೇಕರಿಗೆ ಗೊತ್ತಿಲ್ಲ. ಹೀಗಾಗಿ ಎಷ್ಟೋ ಪೋಷಕರು ಅರ್ಜಿ ಸಲ್ಲಿಸೋಕೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರೆಗೂ ಬಂದು ವಾಪಸ್ ಹೋಗುವ ಸ್ಥಿತಿ ಉಂಟಾಗಿದೆ.

ಇದನ್ನೂ ಓದಿ:ಎನ್​ಪಿಎಸ್​-ವಾತ್ಸಲ್ಯ ಯೋಜನೆ ಎಂದರೇನು? ಇದರಿಂದ ಪೋಷಕರು, ಮಕ್ಕಳಿಗೇನು ಪ್ರಯೋಜನ

ಒಟ್ಟಾರೆಯಾಗಿ ಒಂದು ಒಳ್ಳೆಯ ಯೋಜನೆಯ ಪ್ರಯೋಜನ ಅರ್ಹರಿಗೆ ಆಗುತ್ತಿರುವ ಹೊತ್ತಿನಲ್ಲಿಯೇ ವಾಟ್ಸಾಪ್ ಫಾರ್ವರ್ಡ್ ತಜ್ಞರು ಇಡೀ ಯೋಜನೆಯ ಮೂಲ ಆಶಯವೇ ಹಾಳಾಗಿ ಹೋಗುವಂತೆ ಮಾಡುತ್ತಿದ್ದಾರೆ. ಹೀಗಾಗಿ ಜನರು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ