
ಹುಬ್ಬಳ್ಳಿ, ಆಗಸ್ಟ್ 26: ರಾಜ್ಯ ಸರ್ಕಾರ ಪಿಓಪಿ ಗಣೇಶ (POP Ganesha) ಮೂರ್ತಿಗಳನ್ನು ನಿಷೇಧಿಸಿದ್ದು, ಪರಿಸರ ಸ್ನೇಹಿ ಗಣೇಶ ಮೂರ್ತಿ (Eco Friendly Ganesha) ಪ್ರತಿಷ್ಟಾಪನೆ ಮಾಡಿ, ಪರಿಸರ ಉಳಿಸಿ ಅಂತ ಮನವಿ ಮಾಡಿದೆ. ಸರ್ಕಾರದ ಈ ಆಶಯವನ್ನು ಸಾಕಾರಗೊಳಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ಇದೀಗ ವಿನೂತನ ಕಾರ್ಯ ಆರಂಭಿಸಿದೆ. ಅದಕ್ಕಾಗಿ ಇಕೋ ಭಕ್ತಿ ಸಂಭ್ರಮ ಅಭಿಯಾನ ಆರಂಭಿಸಿದ್ದು, ವಿಜೇತರಿಗೆ ಬಹುಮಾನ ನೀಡಲು ಮುಂದಾಗಿದೆ.
ಪರಿಸರ ಸ್ನೇಹಿ ಗಣೇಶೋತ್ಸವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹು-ಧಾ ಮಹಾನಗರ ಪಾಲಿಕೆ ಆಯೋಜಿಸಿರುವ “ಇಕೋ ಭಕ್ತಿ ಸಂಭ್ರಮ’ದ ಅಧಿಕೃತ ವೆಬ್ಸೈಟ್ (www.ecobhaktihdmc.com) ಆಗಸ್ಟ್ 25ರಿಂದ ಆರಂಭವಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ.
ಗಣೇಶ ಚತುರ್ಥಿಯನ್ನು ಸಂಪೂರ್ಣ ಪರಿಸರ ಸ್ನೇಹಿಯಾಗಿಸುವ ಪ್ರಯತ್ನದಿಂದ ಆರಂಭಿಸಿರುವ ಈ ಅಭಿಯಾನದಲ್ಲಿ ಜನರು ಸಕ್ರಿಯಾಗಿ ಪಾಲ್ಗೊಳ್ಳಲಿ ಎಂಬ ನಿಟ್ಟಿನಲ್ಲಿ ಡಿಜಿಟಲ್ ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ನೀಡಿ ಉತ್ತೇಜಿಸಲಾಗುತ್ತಿದೆ.
ಗಣೇಶೋತ್ಸವದಲ್ಲಿ ಪಿಒಪಿ ಬದಲು ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸುವ ಒಂದು ಲಕ್ಷ ಜನರಿಗೆ ಡಿಜಿಟಲ್ ಪ್ರಮಾಣಪತ್ರ ನೀಡಲಾಗುತ್ತದೆ. ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ನಿಂದ ಗಣಪತಿ ಮಂಟಪ ಅಲಂಕಾರ ಮಾಡುವ ಹಾಗೂ ಮನೆ ಆವರಣದಲ್ಲೇ ಪರಿಸರ ಸ್ನೇಹಿ ಗಣೇಶ ವಿಸರ್ಜನೆ ಮಾಡುವವರಿಗೆ ಬಹುಮಾನ ನೀಡಲಾಗುವುದು.
ಇದನ್ನೂ ಓದಿ: ಮನೆಯಲ್ಲಿ ಗಣೇಶ ಕೂರಿಸುತ್ತೀರಾ? ಹಾಗಿದ್ರೆ ಹಬ್ಬಕ್ಕೆ ಡೆಕೋರೇಷನ್ ಹೀಗಿರಲಿ
ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸುವ 1 ಲಕ್ಷ ಜನರಿಗೆ ಡಿಜಿಟಲ್ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಇದರ ನೋಂದಣಿಗಾಗಿ ಜನರು ಕ್ಯೂ ಆರ್ ಕೋಡ್ ಅಥವಾ (www.ecobhaktihdmc.com) ಬಳಸಬಹುದು.
ಇದರ ಜತೆಗೆ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ, ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ನಿಂದ ಗಣಪತಿ ಮಂಟಪ ಅಲಂಕರಿಸುವ ಹಾಗೂ ಮನೆ ಆವರಣದಲ್ಲೇ ಪರಿಸರ ಸ್ನೇಹಿಯಾಗಿ ಗಣೇಶ ವಿಸರ್ಜಿಸಿ, ಆ ಮಣ್ಣನ್ನು ಗಿಡಗಳಿಗೆ ಬಳಸುವ ಜನರಿಗೆ ಬಹುಮಾನ ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಎಲ್ಲ ನಿಯಮಗಳನ್ನು ಪಾಲಿಸಿದ ವಿಡಿಯೋ ಹಾಗೂ ಫೋಟೊಗಳನ್ನು, ತಮ್ಮ ಮಾಹಿತಿಯೊಂದಿಗೆ ವಾಟ್ಸಪ್ ಸಂಖ್ಯೆ- 8277802337 ಗೆ ಕಳುಹಿಸಿ ನೋಂದಣಿ ಮಾಡಿಕೊಳ್ಳಬೇಕು. ನಂತರದಲ್ಲಿ ಆಯ್ದ 10 ಜನರಿಗೆ ಮಾತ್ರ ಪಾಲಿಕೆ ವತಿಯಿಂದ ಬಹುಮಾನ ನೀಡಲಾಗುತ್ತದೆ ಎಂದು ಆಯುಕ್ತರಾದ ಡಾ. ರುದ್ರೇಶ ಘಾಳಿ ಅವರು ತಿಳಿಸಿದ್ದಾರೆ.
Published On - 2:46 pm, Tue, 26 August 25