ಎರಡು ವರ್ಷ ಕಳೆದರೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗಿಲ್ಲ ಚುನಾಯಿತ ಪ್ರತಿನಿಧಿ; ಮತದಾರರಲ್ಲಿ ನಿರಾಸೆ

67 ವಾರ್ಡ್​ನಿಂದ 82 ವಾರ್ಡ್​ಗಳಾಗಿ ವಿಸ್ತರಣೆ ಮಾಡಿ ಚುನಾವಣೆ ಮುಗಿಸಿದ ರಾಜ್ಯ ಚುನಾವಣೆ ಆಯೋಗ ಈಗ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಮಾತ್ರ ಚುನಾವಣೆ ದಿನಾಂಕ ಘೋಷಣೆ ಮಾಡಿಲ್ಲ.

ಎರಡು ವರ್ಷ ಕಳೆದರೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗಿಲ್ಲ ಚುನಾಯಿತ ಪ್ರತಿನಿಧಿ; ಮತದಾರರಲ್ಲಿ ನಿರಾಸೆ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ
Updated By: preethi shettigar

Updated on: Sep 21, 2021 | 7:32 AM

ಧಾರವಾಡ: ಎರಡು ವರ್ಷ ಒಂಬತ್ತು ತಿಂಗಳಿಂದ ಯಾವುದೇ ಚುನಾಯಿತ ಪ್ರತಿನಿಧಿಗಳಿಲ್ಲದೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೆ ಉಳಿದಿದೆ. ಈ ಪಾಲಿಕೆಗೆ ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆ ಎಂಬ ಹೆಸರು ಕೂಡ ಇದೆ‌. ಆದರೆ ಚುನಾವಣೆ ನಡೆದು ತಿಂಗಳಾಗುತ್ತಾ ಬಂದರೂ ಚುನಾಯಿತ ಪ್ರತಿನಿಧಿಗಳು ಮಾತ್ರ ಪಾಲಿಕೆಯತ್ತ ಬರುತ್ತಲೇ ಇಲ್ಲ. ಅವರು ಬರಬೇಕು ಅಂದರೂ ಅವರ ಕೈಯಲ್ಲಿ ಮಾತ್ರ ಅಧಿಕಾರ ಇಲ್ಲ. ಏನಿದು ಪಾಲಿಕೆ ಅಧಿಕಾರದಲ್ಲಿನ ಗೊಂದಲ್ಲ ಅಂತೀರಾ ಈ ವರದಿಯನ್ನೊಮ್ಮೆ ಗಮನಿಸಿ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಪಾಲಿಕೆ ಏನೋ ನಿಜ. ಆದರೆ, ಇಲ್ಲಿ ಚುನಾಯಿತ ಪ್ರತಿನಿಧಿಗಳು ಮಾತ್ರ ಅಧಿಕಾರ ವಹಿಸಿಕೊಂಡಿಲ್ಲ. ಹೌದು 67 ವಾರ್ಡ್​ನಿಂದ 82 ವಾರ್ಡ್​ಗಳಾಗಿ ವಿಸ್ತರಣೆ ಮಾಡಿ ಚುನಾವಣೆ ಮುಗಿಸಿದ ರಾಜ್ಯ ಚುನಾವಣೆ ಆಯೋಗ ಈಗ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಮಾತ್ರ ಚುನಾವಣೆ ದಿನಾಂಕ ಘೋಷಣೆ ಮಾಡಿಲ್ಲ. ಅಲ್ಲದೇ ಈ ಹಿಂದೆ ಮೀಸಲಾತಿ ಪ್ರಕಟಿಸಿದ್ದರೂ ಕೂಡ ತಿಂಗಳು ಕಳೆಯುತ್ತಾ ಬಂದರೂ ಯಾವುದೇ ದಿನಾಂಕ ಪ್ರಕಟಿಸದೇ ಇರುವುದು ಈಗ ಚುನಾಯಿತ ಪ್ರತಿನಿಧಿಗಳಲ್ಲಿ ಗೊಂದಲ ಉಂಟುಮಾಡಿದೆ.

ಜನರು ಮಾತ್ರ ಸಾಕಷ್ಟು ಭರವಸೆಯನ್ನು ಇಟ್ಟುಕೊಂಡು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಆದರೆ ಚುನಾವಣೆ ನಡೆದು ಇಷ್ಟು ದಿನಗಳಾದರೂ ಕೂಡ ಅಧಿಕಾರ ವಹಿಸಿಕೊಳ್ಳದೇ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಕೈ ಹಾಕದೇ ಇರುವುದು ಮತದಾರರಲ್ಲಿ ನಿರಾಸೆ ಭಾವನೆಮೂಡಿಸಿದೆ. ಇನ್ನೂ ಚುನಾವಣಾ ಆಯೋಗ ಮಾತ್ರ ಯಾವುದೇ ನಿರ್ಧಾರವನ್ನು ಕೈಗೊಳ್ಳದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಎಂದು ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ ತಿಳಿಸಿದ್ದಾರೆ.

ಇನ್ನೂ ಚುನಾಯಿತ ಪ್ರತಿನಿಧಿಗಳು ಕೇವಲ ಜನರ ಕಷ್ಟಗಳನ್ನು ಕೇಳಲು ವಾರ್ಡ್ ಭೇಟಿ ನೀಡಬೇಕಾಗಿದೆ. ಆದರೆ ಅಧಿಕಾರ ಮಾತ್ರ ಕೈಯಲ್ಲಿ ಇಲ್ಲ. ಇನ್ನೂ ಪಾಲಿಕೆ ಆಯುಕ್ತರು ಕೂಡ ಚುನಾವಣೆ ಆಯೋಗದ ಮೇಲೆಯೇ ಜವಾಬ್ದಾರಿ ಇದೆ ಎನ್ನುತ್ತಿದ್ದಾರೆ. ಕೂಡಲೇ ರಾಜ್ಯ ಚುನಾವಣಾ ಆಯೋಗ ಮೇಯರ್ ಉಪಮೇಯರ್ ಆಯ್ಕೆಗೆ ದಿನಾಂಕ ನಿಗದಿ ಮಾಡಬೇಕಿದೆ ಎನ್ನುವುದು ಸದ್ಯ ಸ್ಥಳೀಯರ ಮನವಿಯಾಗಿದೆ.

ವರದಿ: ರಹಮತ್ ಕಂಚಗಾರ್
ಇದನ್ನೂ ಓದಿ:
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ರವಾನಿಸಿದ ಸಂದೇಶವೇನು?

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸಿಹಿ; ಕಲಬುರಗಿಯಲ್ಲಿ ಕಾಂಗ್ರೆಸ್​ಗೆ ಹೆಚ್ಚು ಖುಷಿ