ಸಿದ್ದರಾಮಯ್ಯನವರನ್ನ ಬದಲಾವಣೆ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ: ಅಹಿಂದ ಎಚ್ಚರಿಕೆ

| Updated By: ರಮೇಶ್ ಬಿ. ಜವಳಗೇರಾ

Updated on: Jun 30, 2024 | 3:51 PM

ಒಕ್ಕಲಿಗ ಶ್ರೀಗಳು ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಅಂತಾ ಬ್ಯಾಟ್ ಮಾಡ್ತಿದ್ರೆ, ಲಿಂಗಾಯತ ಶ್ರೀಗಳು, ಲಿಂಗಾಯತ ಸಮುದಾಯದವರನ್ನ ಸಿಎಂ ಮಾಡಿ ಅಂತಿದ್ದಾರೆ. ಬದಲಾವಣೆ ಬಗ್ಗೆ ಎದ್ದಿರೋ ಬಿರುಗಾಳಿಯೇ ಈಗ ಕರ್ನಾಟಕ ಕಾಂಗ್ರೆಸ್ ಮನೆಯನ್ನೇ ಸುಡುತ್ತಿದೆ. ಇನ್ನು ಸಿಎಂ ಬದಲಾವಣೆ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಅಹಿಂದ ರಾಜ್ಯಾಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯನವರನ್ನ ಬದಲಾವಣೆ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ: ಅಹಿಂದ ಎಚ್ಚರಿಕೆ
ಸಿಎಂ ಸಿದ್ದರಾಮಯ್ಯ
Follow us on

ಹುಬ್ಬಳ್ಳಿ, (ಜೂನ್ 30): ಒಕ್ಕಲಿಗ ಸ್ವಾಮೀಜಿ ಹೇಳಿಕೆ ನೀಡಿ ಬೆನ್ನಲ್ಲೇ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಮಾತು ಜೋರಾಗಿದೆ. ಇದರೊಂದಿಗೆ ಲಿಂಗಾಯತ ಮತ್ತು ಒಕ್ಕಲಿಗ ಸ್ವಾಮೀಜಿಗಳು ತಮ್ಮ ತಮ್ಮ ಸಮುದಾಯದ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಅಹಿಂದ ಅಖಾಡಕ್ಕೆ ಇಳಿದಿದ್ದು, ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣಿ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಲು ಅಹಿಂದ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣಿ, ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. 5 ವರ್ಷ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರಬೇಕು. ಸಿದ್ದರಾಮಯ್ಯನವರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು. ಕೆಲವು ಸ್ವಾಮೀಜಿಗಳು ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆಗಳು ಧಾರ್ಮಿಕ ವಿಚಾರಗಳಿಗೆ ಧಕ್ಕೆ ತರುತ್ತೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡಬಾರದು‌ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್​​ಗೆ ಶಾಕ್: ಕೆಪಿಸಿಸಿ ಅಧ್ಯಕ್ಷ ಬದಲಾವಣೆಗೆ ಹೈಕಮಾಂಡ್ ಬಿಗ್‌ ಪ್ಲ್ಯಾನ್!

ಸಿಎಂ ಬದಲಾವಣೆ ಆಗಬೇಕು ಎಂದು ಸ್ವಾಮೀಜಿಗಳು ಹೇಳಿದ್ದಾರೆ. ಹೀಗಾಗಿ ಅದು ಚಂದ್ರಶೇಖರ ಸ್ವಾಮೀಜಿಯವರ ವೈಯಕ್ತಿಕ ಅಭಿಪ್ರಾಯ. ಮುಖ್ಯಮಂತ್ರಿ ಬದಲಾವಣೆ ಆದ್ರೆ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ. ಅಹಿಂದ ನಾಯಕರನ್ನ ತುಳಿಯೋ ಕೆಲಸ ನಡೆಯುತ್ತಿದೆ ಎಂದು ಕಿಡಿಕಾರಿದ ಪ್ರಭುಲಿಂಗ, ಸಿದ್ದರಾಮಯ್ಯ ಬೆನ್ನೆಲುಬಾಗಿ ನಿಲ್ಲುತ್ತೇವೆ. ಪ್ರತಿ ಜಿಲ್ಲೆಯಲ್ಲೂ ಅಹಿಂದ ಸಂಘಟನೆ ಮಾಡಿದ್ದೇವೆ. ರಾಜ್ಯದ ಜನ ಸಿದ್ದರಾಮಯ್ಯರನ್ನ ನೋಡಿ ಕಾಂಗ್ರೆಸ್​​ಗೆ ವೋಟ್ ಹಾಕಿದ್ದಾರೆ ಎಂದರು.

ಇನ್ನು ಸಿದ್ದರಾಮಯ್ಯ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಲು ಅಹಿಂದ ಮುಖಂಡರು ಇಂದು (ಜೂನ್ 30) ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬದ ಅಂಗವಾಗಿ ಇದೇ ಮೊದಲ ಬಾರಿಗೆ ಅಹಿಂದ ರತ್ನ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದ್ದು, ವಿವಿಧ ಕ್ಷೇತ್ರಗಳ 50 ಸಾಧಕರಿಗೆ ಅಹಿಂದ ರತ್ನ ಪ್ರಶಸ್ತಿ ಪ್ರದಾನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ