
ಹುಬ್ಬಳ್ಳಿ, ಮೇ 08: ಧಾರವಾಡ (dharwad) ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿರುವ ಪಂಚಗ್ರಹ ಹಿರೇಮಠ (Panchagrah Hiremath) ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡ ಮಠ. ಆದರೆ ಇದೇ ಮಠದ ಆಸ್ತಿ ವಿಚಾರ ಸ್ವಾಮೀಜಿ ಮತ್ತು ಭಕ್ತರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಮಠದ ಆಸ್ತಿಯನ್ನು ಸೈಟ್ ಮಾಡಿ ಮಾರಾಟ ಮಾಡಲು ಮುಂದಾದ ಸ್ವಾಮೀಜಿ ನಡೆಗೆ ಭಕ್ತರು ಅಸಮಾಧಾನ ಹೊರಹಾಕಿದ್ದರು. ಕಳೆದ ಒಂದು ತಿಂಗಳಿಂದ ನಡೆದಿದ್ದ ಮುಸುಕಿನ ಗುದ್ದಾಟಕ್ಕೆ ಇಂದು ಪಂಚಪೀಠದ ಸ್ವಾಮೀಜಿಗಳು ಭಕ್ತರ ಸಭೆ ನಡೆಸಿ ಸಮಸ್ಯೆಗೆ ತೆರೆ ಎಳೆಯುವ ಕೆಲಸ ಮಾಡಿದರು.
ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿರುವ ಪಂಚಗ್ರಹ ಹಿರೇಮಠ, ಈ ಭಾಗದ ಸುಪ್ರಸಿದ್ಧ ಮಠ. ಮಠಕ್ಕೆ ಕುಂದಗೋಳ ಸೇರಿದಂತೆ ಜಿಲ್ಲೆಯಲ್ಲಿ ಸಾವಿರಾರು ಭಕ್ತರಿದ್ದಾರೆ. ಮಠ ಕೂಡ ಈ ಹಿಂದಿನಿಂದ ಸಾಮಾಜಿಕ, ಧಾರ್ಮಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಮಠಕ್ಕೆ ಬಂದ ಎಲ್ಲಾ ಪೀಠಾಧಿಪತಿಗಳು ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ಆದರೆ ಇದೇ ಮಠದ ಆಸ್ತಿ ವಿಚಾರ ಮಠದ ಪೀಠಾಧಿಪತಿ ಶಿಥಿಕಂಠೇಶ್ವರ ಸ್ವಾಮೀಜಿ ಮತ್ತು ಭಕ್ತರ ನಡುವಿನ ಗುದ್ದಾಟಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಹರಿಹರದ ಪಂಚಮಸಾಲಿ ಮಠದ ಆವರಣದಲ್ಲಿ ನಿಷೇಧಾಜ್ಞೆ ಜಾರಿ, ಗೇಟ್ ಬಂದ್
ಕುಂದಗೋಳ ಪಟ್ಟಣದ ಹೊರವಲಯದಲ್ಲಿರುವ ಮಠದ 53 ಎಕರೆ ಆಸ್ತಿಯನ್ನು ಮಠದ ಸ್ವಾಮೀಜಿ ಎನ್ಎ ಮಾಡಿಸಿ, ಸೈಟ್ ಮಾಡಿ ಮಾರಾಟ ಮಾಡಲು ಮುಂದಾಗಿದ್ದರು. ಈ ವಿಚಾರ ಮಠದ ಕೆಲ ಭಕ್ತರಿಗೆ ಗೊತ್ತಾಗುತ್ತಿದ್ದಂತೆ, ಸ್ವಾಮೀಜಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಠದ ಆಸ್ತಿ ಕೇವಲ ಸ್ವಾಮೀಜಿಗಳಿಗೆ ಸೇರಿದ್ದಲ್ಲ. ಅದು ಮಠಕ್ಕೆ ಭಕ್ತರು ನೀಡಿದ ಆಸ್ತಿ. ಈ ಆಸ್ತಿಯನ್ನು ಸ್ವಾಮೀಜಿಯವರು ಸೈಟ್ ಮಾಡಿ ಮಾರಾಟ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸ್ವತಃ ಧಾರವಾಡ ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಈ ಬಗ್ಗೆ ಮನವಿ ಕೂಡ ನೀಡಿದ್ದಾರೆ.
ಕೆಲ ಭಕ್ತರ ಆಕ್ಷೇಪಕ್ಕೆ ಸ್ವಾಮೀಜಿ ತಿರುಗೇಟು ನೀಡಿದ್ದರು. ತಮ್ಮ ಮಠ ವಂಶಪಾರಂಪರೆ ಹೊಂದಿರುವ ಮಠ. ಮಠದ ಆಸ್ತಿ ಪಿತ್ರಾರ್ಜಿತ ಆಸ್ತಿಯಾಗಿದ್ದು, ಅದರ ಮೇಲೆ ಭಕ್ತರಿಗೆ ಯಾವುದೇ ಅಧಿಕಾರವಿಲ್ಲ. ಇನ್ನು ಮಠದ ಅಭಿವೃದ್ದಿಗಾಗಿ ಹಣದ ಅವಶ್ಯಕತೆ ಇರುವುದರಿಂದ ಸೈಟ್ ಮಾಡಿ ಕೆಲ ಜಾಗವನ್ನು ಮಾರಾಟ ಮಾಡಲಾಗುತ್ತಿದೆ ಅಂತ ಹೇಳಿದ್ದರು. ಹೀಗಾಗಿ ಕೆಲ ಭಕ್ತರು ಕಾಶಿ ಜಗದ್ಗುರುಗಳ ಗಮನಕ್ಕೆ ತಂದಿದ್ದರು. ಪಂಚಗ್ರಹ ಹಿರೇಮಠ, ಕಾಶಿ ಜಗದ್ಗುರುಗಳ ಖಾಸಾ ಮಠವಾಗಿದ್ದರಿಂದ ಕಾಶಿ ಜಗದ್ಗುರುಗಳಿಗೆ ಪಂಚಗ್ರಹ ಹಿರೇಮಠದ ಸ್ವಾಮೀಜಿ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕುಂದಗೋಳ ಪಟ್ಟಣದ ಪಂಚಗ್ರಹ ಹಿರೇಮಠದಲ್ಲಿ ಕಾಶಿ ಜಗದ್ಗುರುಗಳು, ರಂಬಾಪುರಿ ಪೀಠದ ಜಗದ್ಗುರುಗಳು ಭಕ್ತರು ಹಾಗೂ ಸ್ವಾಮೀಜಿ ಜೊತೆಗೆ ಸಭೆ ಮಾಡಿದರು.
ಇಂದು ನಡೆದ ಸಭೆಯಲ್ಲಿ ಕುಂದಗೋಳ ತಾಲೂಕಿನ ಜನಪ್ರತಿನಿಧಿಗಳು, ಅನೇಕ ಮುಖಂಡರು ಹಾಗೂ ಶಿಥಿಕಂಠೇಶ್ವರ ಸ್ವಾಮೀಜಿ ಹಾಗೂ ಭಕ್ತರು ಭಾಗಿಯಾಗಿದ್ದರು. ಈ ಸಮಯದಲ್ಲಿ ಕಾಶಿ ಜಗದ್ಗುರುಗಳು, ಮಠಕ್ಕೆ ತಮ್ಮನ್ನು ಪೀಠಾಧಿಪತಿ ಮಾಡಿದ್ದು, ಮಠದ ಆಸ್ತಿ ಮಾರಾಟ ಮಾಡಲು ಅಲ್ಲ. ಮಠದ ಆಸ್ತಿ ಕಾಶಿ ಪೀಠಕ್ಕೆ ಸೇರಿದ್ದು, ಅದನ್ನು ನೋಡಿಕೊಂಡು ಹೋಗಲು ತಮ್ಮನ್ನು ಮಾತ್ರ ನಿಯೋಜನೆ ಮಾಡಿದೆ ಎಂದರು.
ಇನ್ನು ಅನೇಕ ಮುಖಂಡರು, ಪಂಚಪೀಠದ ಜಗದ್ದುರುಗಳು ಕೈಗೊಳ್ಳುವ ನಿರ್ಣಯಕ್ಕೆ ಬದ್ಧ ಅಂತ ಹೇಳಿದರು. ಇದೇ ಸಮಯದಲ್ಲಿ ಮಾತನಾಡಿದ ಪಂಚಗ್ರಹ ಹಿರೇಮಠದ ಸ್ವಾಮೀಜಿ, ಇನ್ನು ಮುಂದೆ ಆಸ್ತಿ ಮಾರಾಟ ಮಾಡುವುದಿಲ್ಲ. ಪಂಚಪೀಠದ ಜಗದ್ಗುರುಗಳು ಹೇಳಿದಂತೆ ಕೇಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಪೀಠದ ‘ಲೆಕ್ಕಾ’ಚಾರ: 18 ವರ್ಷದ ಲೆಕ್ಕ ಕೊಟ್ಟ ಟ್ರಸ್ಟ್; ಕಳ್ಳಲೆಕ್ಕ ಎಂದ ಸ್ವಾಮೀಜಿ ಟೀಂ
ಕಳೆದ ಒಂದು ತಿಂಗಳಿಂದ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಕುಂದಗೋಳ ಪಂಚಗ್ರಹ ಹಿರೇಮಠದ ಆಸ್ತಿ ವಿಚಾರಕ್ಕೆ ಇಂದು ಪಂಚಪೀಠದ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆರೆ ಎಳೆಯಲಾಗಿದೆ. ಸದ್ಯ ಪಂಚಗ್ರಹ ಹಿರೇಮಠದ ಸ್ವಾಮೀಜಿ ಇನ್ನು ಮುಂದೆ ಯಾವುದೇ ಆಸ್ತಿ ಮಾರಾಟ ಮಾಡುವುದಿಲ್ಲ ಎಂದು ಲಿಖಿತವಾಗಿ ಭಕ್ತರಿಗೆ ಬರೆದುಕೊಟ್ಟಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಈ ಮಾತು ಎಷ್ಟರಮಟ್ಟಿಗೆ ಪಾಲನೆಯಾಗುತ್ತದೆ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.