AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗಾಗಿ ಫಯಾಜ್ ನಮಗೆ ಪೀಡಿಸುತ್ತಿದ್ದ, ಮಗಳಿಗೆ ಜೀವ ಬೆದರಿಕೆ ಹಾಕಿದ್ದ: ನೇಹಾ ತಂದೆ​

ಗುರುವಾರ ಮಧ್ಯಾಹ್ನ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಕೊಲೆಯಾಗಿತ್ತು. ಈ ಕೊಲೆ ಪ್ರೀತಿ ವಿಚಾರಕ್ಕೆ ಆಗಿದೆ ಅಂತ ಒಂದು ವರ್ಗದ ವಾದವಾದರೇ, ಲವ್​ ಜಿಹಾದ್​ಗೆ ವಿರೋಧಿಸಿದಕ್ಕೆ ಕೊಲೆ ನಡೆದಿದೆ ಎಂಬುವುದು ಮತ್ತೊಂದು ವರ್ಗದ ವಾದ. ಈ ನಡುವೆ ನೇಹಾ ಪೋಷಕರು ನೀಡಿದ ದೂರು ಕುತೂಹಲಕ್ಕೆ ಕಾರಣವಾಗಿದೆ.

ಮದುವೆಗಾಗಿ ಫಯಾಜ್ ನಮಗೆ ಪೀಡಿಸುತ್ತಿದ್ದ, ಮಗಳಿಗೆ ಜೀವ ಬೆದರಿಕೆ ಹಾಕಿದ್ದ: ನೇಹಾ ತಂದೆ​
ನೇಹಾ ಹಿರೇಮಠ, ತಂದೆ ನಿರಂಜನ ಹಿರೇಮಠ, ಆರೋಪಿ ಫಯಾಜ್​
ಶಿವಕುಮಾರ್ ಪತ್ತಾರ್
| Updated By: ವಿವೇಕ ಬಿರಾದಾರ|

Updated on:Apr 20, 2024 | 2:55 PM

Share

ಹುಬ್ಬಳ್ಳಿ, ಏಪ್ರಿಲ್​ 20: ವಿದ್ಯಾರ್ಥಿ ನೇಹಾ ಹಿರೇಮಠ ಕೊಲೆ (Neha Hiremath Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫಯಾಜ್​ ವಿರುದ್ಧ ನೇಹಾ ತಂದೆ ನಿರಂಜನ ಹಿರೇಮಠ ದೂರು ದಾಖಸಿದ್ದಾರೆ. ದೂರಿನಲ್ಲಿ “ಆರೋಪಿ ಫಯಾಜ್ (Fayaz)​ ಮತ್ತು ನೇಹಾ ಸಹಪಾಠಿಗಳು. ಬಿಸಿಎ ಅಂತಿಮ ವರ್ಷದಲ್ಲಿ ಓದುತ್ತಿರುವಾಗ ಫಯಾಜ್​ ನೇಹಾಳಿಗೆ ಪ್ರಪೋಸ್​ ಮಾಡಿದ್ದನು. ಅಲ್ಲದೆ ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಅಂತ ಪದೇ ಪದೇ ಕರೆ ಮಾಡಿ ಪೀಡಿಸುತ್ತಿದ್ದನು. ಆಗ ನಮ್ಮ ಮಗಳು ನಿನ್ನನ್ನು ಇಷ್ಟಪಡುತ್ತಿಲ್ಲ, ಅವಳಿಗೆ ಹೆಚ್ಚಿನ ವ್ಯಾಸಂಗ ಮಾಡುವ ಇಚ್ಛೆ ಇದೆ ಎಂದು ಫಯಾಜ್​ಗೆ ಹೇಳಿದ್ವಿ. ಇದರಿಂದ ಕೋಪಗೊಂಡ ಫಯಾಜ್​ ಗುರುವಾರ (ಏ.18) ರಂದು ಸಾಯಂಕಾಲ 4:30ಕ್ಕೆ ನೇಹಾ ಹಿರೇಮಠ ಅವರ ಕತ್ತು, ಹೊಟ್ಟೆ ಮತ್ತು ಕಾಲಿಗೆ 7-8 ಬಾರಿ ಇರಿದು ಕೊಲೆ ಮಾಡಿದ್ದಾನೆ” ಎಂದು ದೂರಿನಲ್ಲಿ ನೇಹಾ ತಂದೆ ನಿರಂಜನ ಹಿರೇಮಠ ದಾಖಲಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ನೇಹಾ ಪೋಷಕರು ಟವಿ9 ಜೊತೆ ಮಾತನಾಡಿ “ನೇಹಾಳನ್ನು ಪ್ರೀತಿ ಮಾಡುತ್ತಿದ್ದೇನೆ, ಮದುವೆ ಮಾಡಿಕೊಡಿ ಅಂತ ಫಯಾಜ್​ 4-5 ತಿಂಗಳಿಂದ ಬೆನ್ನು ಬಿದ್ದಿದ್ದನು. ಹೆಚ್ಚಿನ ವ್ಯಾಸಂಗ ಮಾಡುವುದಿದೆ ಅಂತ ಫಯಾಜ್​ನ ತಂದೆ, ತಾಯಿಗೆ ದೂರವಾಣಿ ಕರೆ ಮಾಡಿ ಹೇಳಿದ್ದೇವು. ಇಷ್ಟಾದರೂ ನಮ್ಮ ಮಗಳ ಬೆನ್ನು ಬಿಟ್ಟಿರಲಿಲ್ಲ. ಮದುವೆಯಾಗದಿದ್ದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದನು. ಈ ಬಗ್ಗೆ ನೇಹಾ ನಮಗೆ ಹೇಳಿದ್ದಳು” ನೇಹಾ ಪೋಷಕರು ಹೇಳಿದರು.

ಇದನ್ನೂ ಓದಿ: ನನ್ನ ಮಗನಿಗೆ ನೇಹಾ ಪ್ರಪೋಸ್​ ಮಾಡಿದ್ದಳು: ಆರೋಪಿ ಫಯಾಜ್ ತಾಯಿ, ವಿಡಿಯೋ ನೋಡಿ

ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ: ಹೆಬ್ಬಾಳ್ಕರ್​

ನೇಹಾ ಮನೆಗೆ ಇಂದು (ಏ.20) ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಭೇಟಿ ನೀಡಿ ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೇಹಾ ತಂದೆ, ತಾಯಿ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ. ಸೂಕ್ತ ತನಿಖೆ ಮಾಡಿ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ. ನಿಷ್ಪಕ್ಷಪಾತವಾಗಿ ತನಿಖೆ ಆಗಲು ನಾನು ಸಹಾಯ ಮಾಡುತ್ತೇನೆ. ಇಂತಹ ಕೃತ್ಯವೆಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು. ನಿಷ್ಪಕ್ಷಪಾತವಾಗಿ ತನಿಖೆ ಆಗುತ್ತೆ ಎಂದು ಭರವಸೆ ಕೊಟ್ಟಿದ್ದೇನೆ. ನಾನು ಬೇರೆ ವಿಚಾರ ಬಗ್ಗೆ ಮಾತನಾಡಿದರೆ ತನಿಖೆ ಬೇರೆ ಆಗುತ್ತೆ. ನಿರಂಜನ ಹಿರೇಮಠ ಕುಟಂಬ ಜತೆ ನಮ್ಮ ಪಕ್ಷದವರು ನಿಲ್ಲುತ್ತೇವೆ ಎಂದು ಹೇಳಿದರು.

ತಕ್ಕ ಶಿಕ್ಷೆ ಆಗಬೇಕು: ಫಕೀರ ಸಿದ್ದೇಶ್ವರ ಸ್ವಾಮೀಜಿ

ಯಾರು ತಪ್ಪು ಮಾಡಿದ್ದಾರೆ ಅವರಿಗೆ ತಕ್ಕ ಶಿಕ್ಷೆ ಆಗಬೇಕು. ಕಾಲಕ್ಕೆ ತಕ್ಕಂತೆ ಕಾನುನು ಬದಲಾಗಬೇಕು. ದುರಾಸೆ ಬಹಳ ಬೆಳೆದಿದೆ, ಆಚಾರ ವಿಚಾರ ಕಡಿಮೆ ಆಗಿದೆ. ಮಕ್ಕಳು ಮಾತು ಕೇಳದೆ ಇರುವುದರಿಂದ ಈ ರೀತಿ ಆಗುತ್ತಿದೆ ಎಂದು ಶಿರಹಟ್ಟಿ ಫಕೀರ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:57 am, Sat, 20 April 24