ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬೊಮ್ಮಾಯಿ
ಹುಬ್ಬಳ್ಳಿಯಲ್ಲಿ ಇಂದು(ಆ.09) ಡೆನಿಸನ್ಸ್ ಹೋಟೆಲ್ ನಲ್ಲಿ ಉತ್ತರ ಕರ್ನಾಟಕ ಪ್ರತಿಭಾವಂತ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷಾ ಹಿತರಕ್ಷಣಾ ಸಮಿತಿ ಏರ್ಪಡಿಸಿದ ರಾಜ್ಯ ಮಟ್ಟದ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು. ಉತ್ತರ ಕರ್ನಾಟಕದ ಮಕ್ಕಳಿಗೆ ಪಿಯುಸಿಯಿಂದ ಪದವಿ ಹಂತದವರೆಗೆ ಸಮಗ್ರ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಸಂಸ್ಥೆಯನ್ನು ಆರಂಭಿಸುವುದು ಮೊದಲ ಸಂಕಲ್ಪವಾಗಿದೆ.

ಹುಬ್ಬಳ್ಳಿ, (ಅಗಸ್ಟ್ 09): ಉತ್ತರ ಕರ್ನಾಟಕದ (North Karnataka) ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (competitive exams) ಅನುಕೂಲವಾಗುವಂತೆ ಅತ್ಯುತ್ತಮ ತರಬೇತಿ (ಕೋಚಿಂಗ್) ನೀಡುವ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು(ಆ.09) ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್ ನಲ್ಲಿ ಉತ್ತರ ಕರ್ನಾಟಕ ಪ್ರತಿಭಾವಂತ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷಾ ಹಿತರಕ್ಷಣಾ ಸಮಿತಿ ಏರ್ಪಡಿಸಿದ ರಾಜ್ಯ ಮಟ್ಟದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದ ಬೊಮ್ಮಾಯಿ, ಎಲ್ಲರ ಮನಸಿನಲ್ಲಿ ಏನಿದೆಯೊ ಅದು ಆಗಬೇಕು, ಜಗತ್ತಿನಲ್ಲಿ ಮನಸಿನೊಳಗ ಎರಡು ಬಾರಿ ಆಗುತ್ತದೆ. ಮೊದಲನೇಯದ್ದು ಮನಸಿನ್ಯಾಗ ಸಿದ್ದಿ ಅಗುತ್ತದೆ ಆ ನಂತರ ಕಾರ್ಯಗತ ಆದಾಗ ಸಿದ್ದಿ ಆಗುತ್ತದೆ. ಇವತ್ತು ಕೂಡಿರುವುದು ಸಿದ್ದಿ ಆಗಬೇಕು. ಎಲ್ಲವನ್ನು ಎದುರಿಸಿ ಸಾಧಿಸುತ್ತೇವೆ ಎಂದಾಗ ಅದು ಕಾರ್ಯಗತ ಆಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ತರಬೇತಿ ಕೇಂದ್ರ ಆರಂಭಿಸುವುದು ನಮ್ಮೆಲ್ಲರ ಸಂಕಲ್ಪ ಎಂದು ಹೇಳಿದರು.
ಪ್ರಭಾಕರ ಕೊರೆಯವರ ಉಪಸ್ತಿತಿಯೆ ದೊಡ್ಡ ಶಕ್ತಿ, ಉತ್ತರ ಕರ್ನಾಟಕದ ಮಕ್ಕಳಿಗೆ ಪಿಯುಸಿಯಿಂದ ಪದವಿ ಹಂತದವರೆಗೆ ಸಮಗ್ರ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಸಂಸ್ಥೆಯನ್ನು ಆರಂಭಿಸುವುದು ಮೊದಲ ಸಂಕಲ್ಪವಾಗಿದೆ. ಯೋಜನೆಗಾಗಿ ಸೂಕ್ತ ಸ್ಥಳ ಆಯ್ಕೆ, ಶಿಕ್ಷಣ ಸಂಸ್ಥೆಯ ಮಾದರಿ ಹಾಗೂ ಪ್ರಥಮ ವರ್ಷದ ತರಬೇತಿ ಚಟುವಟಿಕೆಗಳನ್ನು ನಿರ್ಧರಿಸಲು ತಜ್ಞರ ನೇತೃತ್ವದಲ್ಲಿ ಸಣ್ಣ ಕ್ರಿಯಾ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಈ ವರ್ಷ ಶಾಲಾ ದಾಖಲಾತಿ ಭಾರಿ ಕುಸಿತ: 4 ಲಕ್ಷ ವಿದ್ಯಾರ್ಥಿಗಳ ಕೊರತೆ
ಆರ್ಥಿಕ ಹಾಗೂ ಮೂಲಸೌಕರ್ಯ ಕ್ರೋಡೀಕರಣ
ಸರಸ್ವತಿ ಒಲಿಯಬೇಕೆಂದರೆ ಲಕ್ಷ್ಮೀ ಒಲಿದಾಗ ಮಾತ್ರ ಸರಸ್ವತಿ ಒಲಿಯುತ್ತಾಳೆ, ಸಂಸ್ಥೆಯ ನಿರ್ಮಾಣ ಮತ್ತು ಮೂಲಸೌಕರ್ಯಕ್ಕಾಗಿ ಅಗತ್ಯವಿರುವ ನಿಧಿ ಸಂಗ್ರಹಣೆಗೆ ಪ್ರತ್ಯೇಕ ಸಮಿತಿ ಕಾರ್ಯನಿರ್ವಹಿಸಲಿದ್ದು, ಮುಂಬರುವ ಏಪ್ರಿಲ್ ವೇಳೆಗೆ ತರಬೇತಿ ಪ್ರಕ್ರಿಯೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಹಿಂದೆಲ್ಲ ಬಹಳ ಪ್ರಯತ್ನ ಆಗಿದೆ ಎಂದರು.
ಬೆಂಗಳೂರಿನಲ್ಲೂ ವಿಸ್ತರಣೆ ಯೋಜನೆ
ತಾವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಯಲಹಂಕ ಬಳಿ ಉತ್ತರ ಕರ್ನಾಟಕ ಒಕ್ಕೂಟಕ್ಕೆ ನೀಡಿದ್ದ 3 ಎಕರೆ ಜಾಗವನ್ನು ಬಳಸಿಕೊಂಡು, ಬೆಂಗಳೂರಿನಲ್ಲಿ ಲಭ್ಯವಿರುವ ಅನುಭವಿ ಬೋಧಕರ ಪ್ರಯೋಜನವನ್ನು ಪಡೆಯಲು ಎರಡನೇ ಹಂತದಲ್ಲಿ ಯೋಜನೆ ರೂಪಿಸಲಾಗುವುದು. ಬೆಂಗಳೂರು ನಮ್ಮ ರಾಜಧಾನಿಯಾಗಿದ್ದು, ಅಲ್ಲಿ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಅಗತ್ಯ ತಜ್ಞರನ್ನು ಬಳಸಿಕೊಂಡು ತರಬೇತಿ ನೀಡುವ ವ್ಯವಸ್ಥೆ ಮಾಡೋಣ, ಈ ನಿಟ್ಟಿನಲ್ಲಿ ನಾನು ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಪದಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿದರು.
10 ವರ್ಷಗಳ ದೂರದೃಷ್ಟಿ:
“ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾರ್ಯಕ್ರಮ ತಡೆಹಿಡಿಯದೆ, ಬರುವ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು. ಮುಂಬರುವ 10 ವರ್ಷಗಳಲ್ಲಿ ಇದನ್ನು ದೇಶದಲ್ಲೇ ಪ್ರಸಿದ್ಧವಾದ ಅತ್ಯುನ್ನತ ಸಂಸ್ಥೆಯಾಗಿ ಬೆಳೆಸುವ ಗುರಿ ಹೊಂದಲಾಗಿದೆ, ನಾವು ಇತಿಹಾಸವನ್ನು ಸೃಷ್ಟಿಸುವ ಕೆಲಸ ಮಾಡೋಣ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.ಪ್ರಭಾಕರ್ ಕೊರೆ ಅವರಿಗೆ ಶಿಕ್ಷಣ ಸಂಸ್ಥೆಗಳ ನಿರ್ವಹಣಾ ಅನುಭವ ದೊಡ್ಡದಿದೆ, ಒಂದೂವರೆ ವರ್ಷದಲ್ಲಿ ಹುಬ್ಬಳ್ಳಿ ಮೆಡಿಕಲ್ ಕಾಲೇಜು ಮಟ್ಟಿಸಿದ್ದಾರೆ. ಈ ಸಂಸ್ಥೆಯ ನಿರ್ಮಾಣದ ಜವಾಬ್ದಾರಿಯನ್ನು ಕೊರೆಯವರಿಗೆ ಕೊಟ್ಟರೆ ಎಲ್ಲ ರೀತಿಯ ಅನುಕೂಲವಾಗುತ್ತದೆ. ಹಾಗೂ ಕನೇರಿ ಸ್ವಾಮೀಜಿಯವರಸಾಮಾಜಿಕ ಸಂಕಲ್ಪ ಈ ಯೋಜನೆಗೆ ದೊಡ್ಡ ಬಲ ನೀಡಿದೆ. ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಈ ಯೋಜನೆ ಕಾರ್ಯಗತ ಆಗಲಿ ನಾವೆಲ್ಲರೂ ಜೊತೆಯಾಗಿ ನಿಲ್ಲುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು, ಕನ್ಹೇರಿ ಶ್ರೀಗಳು ಸೇರಿದಂತೆ ನಾಡಿನ ಹಲವಾರು ಮಠಾಧೀಶರು ಸಾನಿಧ್ಯ ವಹಿಸಿದ್ದರು. ಹಾಗೂ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಜಗದೀಶ ಶೆಟ್ಟರ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ರಮೇಶ ಕತ್ತಿ, ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು.




