ಹಿರಿಯ ಪತ್ರಕರ್ತ ಗೋಪಾಲ ವಾಜಪೇಯಿ ಹೆಸರಿನಲ್ಲಿ ‘ರಂಗ ಭೂಪತಿ’ ವಾರ್ಷಿಕ ಪ್ರಶಸ್ತಿ ಪ್ರಕಟ, ನಾಳಿದ್ದು ಧಾರವಾಡದಲ್ಲಿ ಪ್ರದಾನ

'Ranga Bhupati' annual award: ರಂಗಭೂಮಿಗೆ ಕೊಡುಗೆ ನೀಡಿರುವ ಪ್ರತಿಭಾವಂತರೊಬ್ಬರಿಗೆ ಪ್ರತಿವರ್ಷವೂ ಗೋ.ವಾ. ಹೆಸರಿನಲ್ಲಿ "ರಂಗಭೂಪತಿ" ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಚೊಚ್ಚಲ ಪ್ರಶಸ್ತಿಯನ್ನು ಪ್ರತಿಭಾವಂತ ನಿರ್ದೇಶಕ ಶ್ರೀಪಾದ ಭಟ್ ಅವರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿ 5 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.

ಹಿರಿಯ ಪತ್ರಕರ್ತ ಗೋಪಾಲ ವಾಜಪೇಯಿ ಹೆಸರಿನಲ್ಲಿ 'ರಂಗ ಭೂಪತಿ' ವಾರ್ಷಿಕ ಪ್ರಶಸ್ತಿ ಪ್ರಕಟ, ನಾಳಿದ್ದು ಧಾರವಾಡದಲ್ಲಿ ಪ್ರದಾನ
ಹಿರಿಯ ಪತ್ರಕರ್ತ ಗೋಪಾಲವಾಜಪೇಯಿ ಹೆಸರಲ್ಲಿ 'ರಂಗ ಭೂಪತಿ' ವಾರ್ಷಿಕ ಪ್ರಶಸ್ತಿ
Follow us
| Updated By: ಸಾಧು ಶ್ರೀನಾಥ್​

Updated on:Mar 28, 2024 | 1:25 PM

ಧಾರವಾಡ, ಮಾರ್ಚ್​​ 28: ಹಲವು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸುವುದರ ಜೊತೆಗೆ ಕವಿ, ನಾಟಕಕಾರ, ನಟ, ನಿರ್ದೇಶಕರಾಗಿ ಮತ್ತು ಆಕಾಶವಾಣಿ, ರಂಗಭೂಮಿ, ಸಿನಿಮಾ, ಜನಸಮುದಾಯ ಅತಿ ಇಷ್ಟದ ಮಾಧ್ಯಮಗಳ ಮೂಲಕ ಸಮಾಜಕ್ಕೆ ಸಾತ್ವಿಕ ಮನರಂಜನೆ ನೀಡಿ, ಮೂರು ದಶಕಗಳಿಗೂ ಹೆಚ್ಚು ಕಾಲ ಒಂದಿಡಿ ತಲೆಮಾರನ್ನ ತಮ್ಮ ಬರಹಗಳ ಮೂಲಕ ಪ್ರಭಾವಿಸಿದವರು, ಹಿರಿಯ ಪತ್ರಕರ್ತ ಎಂದೇ ಸಂಬೋಧಿಸಲ್ಪಡುತ್ತಿದ್ದವರು (veteran journalist Gopal Vajpayee) ಗೋಪಾಲ ವಾಜಪೇಯಿ ಅವರು. ಉತ್ತರ ಕರ್ನಾಟಕದ ಗಟ್ಟಿ ಆಡುಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಅವರು, ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಅದೇನೋ ಕಾರಣಕ್ಕೆ ಅವರು ಅಜ್ಞಾತರಾಗಿಯೇ ಉಳಿದರು. ಮುಖ್ಯವಾಹಿನಿಗೆ ಬರಲಿಲ್ಲ. ಅವರಿಗೆ ದಕ್ಕಬೇಕಾದ ಗೌರವವೂ ದೊರೆಯಲಿಲ್ಲ.

ಅಂಥ ಅಪರೂಪದ ಪತ್ರಕರ್ತ, ನಾಟಕಕಾರ, ನಟ, ನಿರ್ದೇಶಕರನ್ನು ನೆನಪಿಸಿಕೊಳ್ಳುವ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಧಾರವಾಡದ (Dharwad ) ಗೋ.ವಾ. ರಂಗ-ಸಂಗ ತಂಡ, ಆಟ-ಮಾಟ ಧಾರವಾಡ ಮತ್ತು ಬಹುರೂಪಿ ಬೆಂಗಳೂರು ಸಂಸ್ಥೆಗಳ ಸಹಯೋಗದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ, ರಂಗಭೂಮಿಗೆ ಕೊಡುಗೆ ನೀಡಿರುವ ಪ್ರತಿಭಾವಂತರೊಬ್ಬರಿಗೆ ಪ್ರತಿವರ್ಷವೂ ಗೋ.ವಾ. ಹೆಸರಿನಲ್ಲಿ “ರಂಗಭೂಪತಿ” ಪ್ರಶಸ್ತಿ ನೀಡಲು ನಿರ್ಧರಿಸಿದೆ (‘Ranga Bhupati’ annual award).

ಪ್ರಸಕ್ತ ಸಾಲಿನ ಮೊದಲ ಪ್ರಶಸ್ತಿಯನ್ನು ಪ್ರತಿಭಾವಂತ ನಿರ್ದೇಶಕ ಶ್ರೀಪಾದ ಭಟ್ ಅವರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿ 5 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.

ವಿಶ್ವರಂಗ ಭೂಮಿ ದಿನದ ಪ್ರಯುಕ್ತ, ನಾಳಿದ್ದು 30 ರಂದು ಸಂಜೆ ರಂಗಾಯಣ ಆವರಣದಲ್ಲಿರುವ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ, ಗೋಪಾಲ ವಾಜಪೇಯಿ ಅವರು ರಚಿಸಿದ ರಂಗಗೀತೆಗಳ ಹಬ್ಬ ಆಯೋಜಿಸಲಾಗಿದೆ. ರಂಗಾಯಣ ಕಲಾವಿದ ರಾಘವ ಕಮ್ಮಾರ, ಹೂವಿನ ಹಡಗಲಿಯ ಶಶಿಧರ ಕೆ.ಎಮ್, ರವಿ ಯಲ್ಲಪ್ಪನವರ್, ಪರಶುರಾಮ ನಾಗೋಜಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಹಿರಿಯ ಸಾಹಿತಿ, ನಾಟಕಕಾರ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಗೋಪಾಲ ವಾಜಪೇಯಿ ಕುಟುಂಬಸ್ಥರು, ರಂಗಕರ್ಮಿ ಧನಂಜಯ ಕುಲಕರ್ಣಿ, “ಅವಧಿ ಈ-ಮ್ಯಾಗಜಿನ್” ಸಂಪಾದಕ ಜಿ.ಎನ್. ಮೋಹನ್​​, ರವಿ ಕುಲಕರ್ಣಿ ಉಪಸ್ಥಿತರಿರುತ್ತಾರೆ.

ಗೋಪಾಲ ವಾಜಪೇಯಿ ಮತ್ತು ಚಿತ್ರರಂಗ:

ಸುಂದರ ಕೃಷ್ಣ ಅರಸರ ‘’ಸಂಗ್ಯಾ ಬಾಳ್ಯಾ”, ನಾಗಾಭರಣರ ‘‘ಸಂತ ಶಿಶುನಾಳ ಶರೀಫ’’, ‘‘ನಾಗಮಂಡಲ’, ‘‘ಸಿಂಗಾರೆವ್ವ’ ‘ ಹಾಗೂ ಗಿರೀಶ್ ಕಾಸರವಳ್ಳಿಯವರ ‘‘ತಾಯಿ ಸಾಹೇಬ’’ ಚಿತ್ರಗಳಿಗೆ ಸಂಭಾಷಣೆ ಬರೆದವರು ಗೋಪಾಲ ವಾಜಪೇಯಿ. ಜೊತೆಗೆ ‘’ಸಂಗ್ಯಾ ಬಾಳ್ಯಾ’,’, ‘‘ನಾಗಮಂಡಲ’’, ‘‘ಸಿಂಗಾರೆವ್ವ’ ‘ ಮತ್ತು ಕೇಸರಿ ಹರವೂ ಅವರ ‘’ಭೂಮಿಗೀತ’’ಕ್ಕೆ ವಾಜಪೇಯಿ ಗೀತರಚನೆಯನ್ನು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:24 pm, Thu, 28 March 24