ದೆಹಲಿಗೆ ಬಂದಿದ್ದೇ ರಾಜಕೀಯ ಮಾಡಲು, ಎಲ್ಲ ಮಾತಾಡದೆ ಸುಮ್ನೆ ಹೋಗ್ತೀನಾ? ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಮಾತು

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸಿ ಚರ್ಚೆ ನಡೆಸಿದ್ದಾರೆ. ಅಸ್ಸಾಂ ಚುನಾವಣೆ ಬಗ್ಗೆ ಮಾತನಾಡಿದ್ದಾಗಿ ಹೇಳಿದರೂ, ಕರ್ನಾಟಕ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಬಿಕ್ಕಟ್ಟಿನ ಕುರಿತು ಪ್ರಮುಖ ಮಾತುಕತೆ ನಡೆದಿದೆ ಎನ್ನಲಾಗಿದೆ. ಆ ಕುರಿತು ಡಿಕೆಶಿ ಹೇಳಿದ್ದೇನು ಎಂಬ ವಿಡಿಯೋ ಸಹಿತ ಮಾಹಿತಿ ಇಲ್ಲಿದೆ.

ದೆಹಲಿಗೆ ಬಂದಿದ್ದೇ ರಾಜಕೀಯ ಮಾಡಲು, ಎಲ್ಲ ಮಾತಾಡದೆ ಸುಮ್ನೆ ಹೋಗ್ತೀನಾ? ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಮಾತು
ದೆಹಲಿಯಲ್ಲಿ ಡಿಕೆ ಶಿವಕುಮಾರ್
Image Credit source: tv9
Edited By:

Updated on: Feb 12, 2026 | 11:49 AM

ನವದೆಹಲಿ, ಫೆಬ್ರವರಿ 12: ‘ದೆಹಲಿಗೆ ಬಂದಿರುವುದೇ ರಾಜಕೀಯ ಮಾಡಲು, ಎಲ್ಲ ವಿಚಾರಗಳನ್ನು ಮಾತನಾಡದೆ ಸುಮ್ಮನೆ ವಾಪಸ್ ಹೋಗುತ್ತೇನಾ?’ ಇದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾಧ್ಯಮ ಪ್ರತಿನಿಧಿಗಳ ಬಳಿ ಕೇಳಿದ ಪ್ರಶ್ನೆ. ಕರ್ನಾಟಕ ಕಾಂಗ್ರೆಸ್​​​ನಲ್ಲಿ (Congress) ಅಧಿಕಾರ ಹಂಚಿಕೆ ಗುದ್ದಾಟ ತೀವ್ರಗೊಂಡಿರುವ ಸಂದರ್ಭದಲ್ಲೇ ದೆಹಲಿಯ ಜನಪಥದಲ್ಲಿರುವ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನಿವಾಸದಲ್ಲಿ ಹೈಕಮಾಂಡ್ ನಾಯಕರ ಜತೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅವರು ಮಾತುಕತೆ ನಡೆಸಿದ್ದಾರೆ. ನಂತರ ಹೊರಬಂದು ಮಾತನಾಡಿದ ಅವರು, ಅಸ್ಸಾಂ ಚುನಾವಣೆ ವಿಚಾರವಾಗಿ ಹೈಕಮಾಂಡ್ ಜತೆ ಮಾತನಾಡಿರುವುದಾಗಿ ತಿಳಿಸಿದರು. ಅಸ್ಸಾಂನ ಕೆಲವು ನಾಯಕರೂ ಡಿಕೆಶಿ ಜತೆ ಇದ್ದರು.

ಕರ್ನಾಟಕ ರಾಜಕೀಯದ ಕುರಿತು ಏನು ಮಾತುಕತೆ ನಡೆಯಿತು ಎಂಬ ಪ್ರಶ್ನೆಗೆ, ಏನು ಮಾತನಾಡಬೇಕೋ ಅದೆಲ್ಲವನ್ನೂ ಮಾತನಾಡಿದ್ದೇನೆ. ಏನೇನು ಚರ್ಚೆ ನಡೆಯಿತು ಎಂಬುದನ್ನೆಲ್ಲ ಇಲ್ಲಿ ಹೇಳಲಾಗದು ಎಂದರು. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ಡಿಕೆ ಶಿವಕುಮಾರ್ ಹೇಳಿದ್ದೇನು?

ಅಸ್ಸಾಂ ಚುನಾವಣಾ ಬಗ್ಗೆ ಚರ್ಚೆ ಮಾಡಲು ಸೋನಿಯಗಾಂಧಿ ನಿವಾಸಕ್ಕೆ ಆಗಮಿಸಿದ್ದೆವು. ಅಸ್ಸಾಂನಲ್ಲಿ ವಾಪಸ್ ಕಾಂಗ್ರೆಸ್ ಸರ್ಕಾರ ಬರಲಿದೆ. ಸೋನಿಯಗಾಂಧಿ ನಿವಾಸದ ಒಳಗೆ ಏನೇನು ಮಾತನಾಡಿದೆ, ಯಾರ ಜೊತೆಗೆಲ್ಲ ಮಾತನಾಡಿದೆ ಎಂದು ಇಲ್ಲಿ ಹೇಳುವುದಿಲ್ಲ. ಇಲ್ಲಿ ಬೀದಿಯಲ್ಲಿ ನಿಂತು ಎಲ್ಲ ಮಾತನಾಡುವ ಅಗತ್ಯ ಇಲ್ಲ. ಬಂದ ಮೇಲೆ ಏನೇನನು ಮಾತನಾಡಬೇಕೋ ಅದನ್ನೆಲ್ಲ ಮಾತನಾಡಿದ್ದೀನಿ ಎಂದು ಡಿಕೆ ಶಿವಕುಮಾರ್ ಹೇಳಿದರು.

ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ: ಡಿಕೆಶಿ ಮಾರ್ಮಿಕ ಮಾತು

ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ಮಾರ್ಮಿಕವಾಗಿ ಮಾತನಾಡಿದ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಬಳಿ ಚರ್ಚೆ ಮಾಡಿದ್ದೆನೆ ಎಂಬುದನ್ನು ನಿಖರವಾಗಿ ಹೇಳಿಲ್ಲ. ಡಿಕೆ ಶಿವಕುಮಾರ್ ಮೊದಲು ಪ್ರಿಯಾಂಕಾ ಗಾಂಧಿ ಜೊತೆ ಅಸ್ಸಾಂ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದರು. ನಂತರ ರಾಹುಲ್ ಗಾಂಧಿ ಜೊತೆ ಚರ್ಚಿಸಿದ್ದರು.

ಬುಧವಾರ ತಡರಾತ್ರಿ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಜತೆ ಮಾತುಕತೆ ನಡೆಸಿದ್ದರು. ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅದರ ಬೆನ್ನಲ್ಲೇ ಇದೀಗ ಅಸ್ಸಾಂ ಚುನಾವನೆ ನೆಪದಲ್ಲಿ ಹೈಕಮಾಂಡ್ ನಾಯಕರ ಜತೆ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಪಕ್ಷದಲ್ಲೇ ಅಸಮಾಧಾನ: ವರದಿ ಕೇಳಿದ ಹೈಕಮಾಂಡ್

ಏತನ್ಮಧ್ಯೆ, ಸೋನಿಯಾ ಗಾಂಧಿ ಅವರು ಡಿಕೆ ಶಿವಕುಮಾರ್ ಪರ ಒಲವು ಹೊಂದಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ. ಆದರೆ, ಮುಖ್ಯವಾದ ಜವಾಬ್ದಾರಿಗಳನ್ನು, ನಿರ್ಧಾರಗಳನ್ನು ರಾಹುಲ್ ಗಾಂಧಿ ಅವರೇ ತೆಗೆದುಕೊಳ್ಳುತ್ತಿರುವುದರಿಂದ, ನಾಯಕತ್ವ ಬದಲಾವಣೆ ವಿಚಾರವಾಗಿ ಅವರ ಮನವೊಲಿಸುವ ಅಗತ್ಯ ಡಿಕೆ ಶಿವಕುಮಾರ್​ಗೆ ಎದುರಾಗಿದೆ. ಇದೀಗ ಆ ಪ್ರಯತ್ನಕ್ಕೆ ಅವಕಾಶ ಸಿಕ್ಕಿದ್ದು, ಅದರಲ್ಲಿ ಡಿಕೆಶಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Thu, 12 February 26