Electricity Price Hike: ವಿದ್ಯುತ್ ದರ ಏರಿಕೆ, ಗ್ರಾಹಕರಿಗೆ ಶಾಕ್ ನೀಡಿದ ಕೆಇಆರ್​ಸಿ

| Updated By: Ganapathi Sharma

Updated on: Mar 20, 2025 | 11:59 AM

Power Tariff Hike in Karnataka: ಈಗಾಗಲೇ ಬಸ್ ಟಿಕೆಟ್ ದರ ಹೆಚ್ಚಳ, ಮೆಟ್ರೋ ಪ್ರಯಾಣ ದರ ಹೆಚ್ಚಳ ಸೇರಿದಂತೆ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತೊಂದು ಶಾಕ್ ನೀಡಿದೆ. ವಿದ್ಯುತ್ ದರ ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

Electricity Price Hike: ವಿದ್ಯುತ್ ದರ ಏರಿಕೆ, ಗ್ರಾಹಕರಿಗೆ ಶಾಕ್ ನೀಡಿದ ಕೆಇಆರ್​ಸಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್ 20: ಬೆಲೆ ಏರಿಕೆಯ ಹೊಡೆತದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಕೂಡ ಇದೀಗ ಶಾಕ್ ನೀಡಿದೆ. ವಿದ್ಯುತ್ ದರ ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ (Electricity Price Hike)  ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ‌್ ಸಿಬ್ಬಂದಿಯ ಪಿಂಚಿಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಂದ ವಸೂಲಿಗೆ ಕೆಇಆರ್​ಸಿ ಮುಂದಾಗಿದ್ದು, ದರ ಹೆಚ್ಚಳದ ಆದೇಶ ಹೊರಡಿಸಿದೆ. ಎಪ್ರಿಲ್ 1 ರಿಂದಲೇ ಹೊಸ ಆದೇಶ ಜಾರಿಯಾಗಲಿದೆ.

ಕೆಪಿಟಿಸಿಎಲ್ ಹಾಗೂ ಎಸ್ಕಾಂ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಇಂಧನ ಇಲಾಖೆ ಮುಂದಾಗಿದ್ದರ ಪರಿಣಾಮವೇ ಈ ದರ ಏರಿಕೆಯಾಗಿದೆ. ಅಂದರೆ, ಗ್ರಾಹಕರ ಮಾಸಿಕ ಬಿಲ್​ನಲ್ಲಿ ಉಲ್ಲೇಖ ಮಾಡಿ ಹೆಚ್ಚುವರಿ ದರ ವಸೂಲಿ ಮಾಡಲಾಗುತ್ತದೆ. ಮುಂದಿನ ಮೂರು ಆರ್ಥಿಕ ವರ್ಷಗಳಿಗೆ ಅನ್ವಯ ಆಗುವಂತೆ ಈ ಆದೇಶ ಹೊರಡಿಸಲಾಗಿದೆ.

ಗ್ರಾಹಕರಿಗೆ ಯಾವ್ಯಾವ ವರ್ಷಕ್ಕೆ ಎಷ್ಟು ಹೊರೆ?

  • 2025-26 – 36 ಪೈಸೆ
  • 2026-27 – 35 ಪೈಸೆ
  • 2027-28 – 34 ಪೈಸೆ

ಯಾರಿಗೆ ಅನ್ವಯವಾಗಲಿದೆ ವಿದ್ಯುತ್ ದರ ಹೆಚ್ಚಳ?

ವಿದ್ಯುತ್ ದರ ಹೆಚ್ಚಳ ಸಂಬಂಧ ‘ಟಿವಿ9’ ಜತೆ ಮಾತನಾಡಿದ ಸಚಿವ ಶರಣಪ್ರಕಾಶ್‌ ಪಾಟೀಲ, ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯ ಜನರಿಗೆ ತೊಂದರೆ ಆಗುವುದಿಲ್ಲ. ಗೃಹಜ್ಯೋತಿ ಯೋಜನೆಯಿಂದಾಗಿ ನಷ್ಟ ಆಗಿಲ್ಲ. ಗೃಹಜ್ಯೋತಿ ನಷ್ಟದಿಂದ ವಿದ್ಯುತ್ ದರ ಏರಿಕೆ ಮಾಡಲಾಗಿಲ್ಲ. ನಾವು 200 ಯೂನಿಟ್ ವಿದ್ಯುತ್ ಉಚಿತ ಕೊಟ್ಟಿದ್ದೇವೆ. 200 ಯೂನಿಟ್ ಮೇಲೆ ಬಳಸಿದವರಿಗೆ ದರ ಏರಿಕೆ ಅನ್ವಯವಾಗುತ್ತದೆ. ಬಿಜೆಪಿಯವರು ಶ್ರೀಮಂತರ ಪರವಾಗಿ ಮಾತನಾಡುತ್ತಿದ್ದಾರೆ. ಸರ್ಕಾರ ದರ ಏರಿಕೆ ಮಾಡುವುದಿಲ್ಲ. ಸ್ವಾಯತ್ತ ಸಂಸ್ಥೆ ದರ ಏರಿಕೆ ಮಾಡುತ್ತದೆ. ಈ ವಿಚಾರದಲ್ಲಿ ಬಿಜೆಪಿ ಆರೋಪ ಸರಿಯಲ್ಲ ಎಂದರು.

ಇದನ್ನೂ ಓದಿ
250ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸೀಜ್, 5 ಕೋಟಿ ರೂ. ದಂಡ ವಸೂಲಿ
ಬೆಂಗಳೂರು: ಪಾಕಿಸ್ತಾನಕ್ಕೆ ರಕ್ಷಣಾ ಮಾಹಿತಿ ರವಾನಿಸುತ್ತಿದ್ದ ಗೂಢಚಾರ ಬಂಧನ
ಕರ್ನಾಟಕದಲ್ಲೊಂದು ಹಿರೋಶಿಮಾ-ನಾಗಸಾಕಿ ಪ್ರದೇಶ:ಹುಟ್ಟುವ ಮಕ್ಕಳು ಅಂಗವಿಕಲರು
ಇಬ್ಬರು ಹೆಂಡರ ನೀಚ ಗಂಡ: ಬಾಬುನ ಕ್ರೌರ್ಯಕ್ಕೆ ನರಳಿ ನರಳಿ ಪ್ರಾಣಬಿಟ್ಟಳು!

ಕೆಇಆರ್​ಸಿ ಆದೇಶದ ಪ್ರತಿ

ಪ್ರತಿಪಕ್ಷ ಬಿಜೆಪಿ ಆಕ್ರೋಶ

ವಿದ್ಯುತ್ ದರ ಏರಿಕೆ ವಿಚಾರಕ್ಕೆ ಪ್ರತಿಪಕಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬೆಲೆ ಏರಿಕೆ ಒಂದನ್ನೇ ಅನುಷ್ಠಾನ ಮಾಡುತ್ತಿದೆ. ಬೆಲೆ ಏರಿಕೆಯಿಂದ ರಾಜ್ಯದ ಜನ‌ ತತ್ತರಿಸಿ ಹೋಗಿದ್ದಾರೆ. ಒಂದು ಕಡೆ ಜನರಿಗೆ ಫ್ರೀ ವಿದ್ಯುತ್​ ಎಂದು ಹೇಳುತ್ತಾರೆ. ಪಿಡಬ್ಲ್ಯುಡಿ ಇಲಾಖೆ 8 ಸಾವಿರ ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಹಲವು ಇಲಾಖೆಗಳು ಬಾಕಿ‌ ಬಿಲ್ ಉಳಿಸಿಕೊಂಡಿವೆ. ಸದನದಲ್ಲಿ ಈ ವಿಚಾರಗಳನ್ನ ನಾವು ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದರ ಏರಿಕೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ‘ಟಿವಿ9’ಗೆ ಪ್ರತಿಕ್ರಿಯೆ ನಿಡಿದ್ದಾರೆ. ಮುಂದೆ ಪಾರ್ಕ್, ಗಾಳಿ ಸೇವನೆಗೂ ದರ ವಿಧಿಸಬಹುದು. ಸರ್ಕಾರದ ಮೇಲೆ ಹೊರೆ ಜಾಸ್ತಿ ಆಗುತ್ತಿದೆ. ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ದರ ಏರಿಕೆ ಮಾಡಿದ್ದಾರೆ. ಇದರ ವಿರುದ್ಧ ಸದನದಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Auto Fare Hike: ಬೆಂಗಳೂರಿನಲ್ಲಿ ಆಟೋ ದರ ಏರಿಕೆಗೆ ಗ್ರೀನ್ ಸಿಗ್ನಲ್, ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ವಿವರ

ಇತ್ತೀಚೆಗಷ್ಟೇ ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಕೆಎಸ್​ಆರ್​ಟಿಸಿ ಬಸ್ ಪ್ರಯಾಣ ದರವೂ ಹೆಚ್ಚಿಸಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ಆಟೋ ದರ ಏರಿಕೆಗೂ ಸರ್ಕಾರ ಸಮ್ಮತಿ ನೀಡಿತ್ತು. ಇದೀಗ ವಿದ್ಯುತ್ ದರ ಹೆಚ್ಚಳ ಆದೇಶ ಹೊರಡಿಸಲಾಗಿದ್ದು, ಜನ ಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ಎಳೆದಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:31 am, Thu, 20 March 25