ಮುಡಾ ಹಗರಣ ತನಿಖೆಗೆ ಸಿಬಿಐ ಎಂಟ್ರಿ ತಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್!

| Updated By: ಗಣಪತಿ ಶರ್ಮ

Updated on: Sep 27, 2024 | 9:23 AM

ಮುಡಾ ಹಗರಣದಲ್ಲಿ ದೂರುದಾರರು ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಮೊರೆ ಹೋಗಬಹುದು ಎಂಬ ಸುಳಿವು ದೊರೆತ ಬೆನ್ನಲ್ಲೇ ಆ ವಿಚಾರದಲ್ಲಿ ಕರ್ನಾಟಕ ಸಚಿವ ಸಂಪುಟ ರಕ್ಷಣಾತ್ಮಕ ಕ್ರಮ ಕೈಗೊಂಡಿದೆ. ಸಿಬಿಐ ತನಿಖೆಗೆ ಇದ್ದ ಮುಕ್ತ ಅವಕಾಶದ ಅಧಿಸೂಚನೆಯನ್ನೇ ಹಿಂಪಡೆಯಲು ಸಚಿವ ಸಂಪುಟ ಮುಂದಾಗಿದೆ. ಇದು ಸಿಎಂ ಸಿದ್ದರಾಮಯ್ಯಗೆ ಸಿಬಿಐ ತನಿಖೆಯ ಭೀತಿ ಇರುವುದನ್ನು ಸ್ಪಷ್ಟಪಡಿಸಿದೆ.

ಮುಡಾ ಹಗರಣ ತನಿಖೆಗೆ ಸಿಬಿಐ ಎಂಟ್ರಿ ತಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್!
ಮುಡಾ ತನಿಖೆಗೆ ಸಿಬಿಐ ಎಂಟ್ರಿ ತಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್!
Follow us on

ಬೆಂಗಳೂರು, ಸೆಪ್ಟೆಂಬರ್ 27: ಮುಡಾ ಹಗರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಿಬಿಐ ತನಿಖೆಯ ಭೀತಿ ಎದುರಾಗಿದೆಯೇ ಎಂಬ ಪ್ರಶ್ನೆ ಈಗ ಮೂಡಿದೆ. ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ಕೆಲವು ನಿರ್ಣಯಗಳೇ ಇದಕ್ಕೆ ಕಾರಣ. ಸಿಬಿಐ ತನಿಖೆ ಆತಂಕದಿಂದಲೇ ಕಾನೂನು ಕುಣಿಕೆಯಿಂದ ಪಾರಾಗಲು ಸಚಿವ ಸಂಪುಟ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ಇದೇ ಕಾರಣಕ್ಕೆ ನೇರ ತನಿಖೆಗೆ ಸಿಬಿಐಗೆ ಅವಕಾಶ ದೊರೆಯದಂತೆ ಮಾಡುವ ನೆಟ್ಟಿನಲ್ಲಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಒಂದು ವೇಳೆ ದೂರುದಾರರು ಕೋರ್ಟ್ ಆದೇಶ ಪಡೆದು ನೇರವಾಗಿ ಸಿಬಿಐಗೆ ದೂರು ನೀಡಿದರೆ ತನಿಖೆ ಅಖಾಡಕ್ಕೆ ಕೇಂದ್ರ ತನಿಖಾ ಸಂಸ್ಥೆ ಧುಮುಕುವುದು ನಿಶ್ಚಿತ. ಇಂತಹದ್ದೊಂದು ಸಾಧ್ಯತೆಯನ್ನು ಗಮನಿಸಿಕೊಂಡೇ, ಸಿಬಿಐ ಮುಕ್ತ ತನಿಖೆಗೆ ಇರುವ ಅವಕಾಶವನ್ನು ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ತಮ್ಮ ವಿರುದ್ಧದ ಹಗರಣಗಳ ತನಿಖೆಗೆ ಸಿಬಿಐ ಮುಂದಾಗುವುದನ್ನು ತಡೆಯಲು ಸಿದ್ದರಾಮಯ್ಯ ರಕ್ಷಣಾತ್ಮಕ ಹೆಜ್ಜೆ ಇಟ್ಟಿದ್ದಾರೆ.

ಕರ್ನಾಟಕ ಸಚಿವ ಸಂಪುಟದ ತಂತ್ರವೇನು?

ರಾಜ್ಯಪಾಲರು ಕೇಳಿದ ಮಾಹಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಸಚಿವ ಸಂಪುಟದ ಗಮನಕ್ಕೆ ತರದೇ ನೀಡುವಂತಿಲ್ಲ. ಇಷ್ಟೇ ಅಲ್ಲದೆ, ಅನಿವಾರ್ಯ ಸಂದರ್ಭದಲ್ಲಿ ರಾಜ್ಯಪಾಲರ ಪ್ರಶ್ನೆಗೆ ಉತ್ತರ ನೀಡದೇ ಇರುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಸರ್ಕಾರ ಹಾಗೂ ಸಿಎಂ ವಿರುದ್ಧದ ರಾಜ್ಯಪಾಲರ ಅಸ್ತ್ರಗಳಿಗೆ ಸಚಿವ ಸಂಪುಟ ಪ್ರತ್ಯಸ್ತ್ರ ಹೂಡಿದೆ.

ಇಷ್ಟೇ ಅಲ್ಲದೆ, ಸಿಬಿಐ ತನಿಖೆಗೆ ಮುಕ್ತ ಅನುಮತಿ ನೀಡಿರುವ ಅಧಿಸೂಚನೆ ವಾಪಸ್ ಪಡೆಯಲು ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ. ಸಾಮಾನ್ಯವಾಗಿ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ರಾಜ್ಯಗಳಲ್ಲಿನ ಪ್ರಕರಣಗಳನ್ನು ಮುಕ್ತವಾಗಿ ತನಿಖೆ ನಡೆಸಲು ಸಿಬಿಐಗೆ (Delhi Special Police Establishment Act, 1946 ಅಡಿಯಲ್ಲಿ) ಅವಕಾಶವಿದೆ. ಇದೀಗ ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನೇ ಹಿಂಪಡೆದರೆ ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳ ತನಿಖೆಗೆ ಸಿಬಿಐ ಮುಕ್ತ ಅವಕಾಶ ಇಲ್ಲವಾಗಲಿದೆ.

ಸಿಬಿಐ ಎಂಟ್ರಿಗೆ ಸಚಿವ ಸಂಪುಟ ಬ್ರೇಕ್: ಕಾರಣವೇನು?

ಮಹರ್ಷಿ ವಾಲ್ಮೀಕ ನಿಗಮದಲ್ಲಿ ಕೋಟಿ ಕೋಟಿ ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಯಲ ಈಗಾಗಲೇ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದೆ. ಸಚಿವ ಸ್ಥಾನಕ್ಕೆ ಬಿ ನಾಗೇಂದ್ರ ರಾಜೀನಾಮೆ‌ ನೀಡಿಯಾಗಿದೆ. ಈ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿದೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಸಿಬಿಐ ತನಿಖೆಗೆ ಯೂನಿಯನ್ ಬ್ಯಾಂಕ್ ಕೂಡ ಒತ್ತಾಯ ಮಾಡಿದೆ. ಈ ಬೆಳವಣಿಗೆಗಳಿಂದಾಗಿ ಕೇಂದ್ರ ತನಿಖಾ ಸಂಸ್ಥೆ ಸಿದ್ದರಾಮಯ್ಯರತ್ತ ಮುಖ‌ಮಾಡಬಹುದು ಎಂಬ ಚರ್ಚೆ ಮುನ್ನೆಲೆಯಲ್ಲಿದೆ. ಸರ್ಕಾರದ ಮಟ್ಟದಲ್ಲಿಯೂ ಜೋರಾಗಿ ಚರ್ಚೆ ನಡೆದಿದೆ. ಅಲ್ಲದೆ‌ ಮುಡಾ ಪ್ರಕರಣದಲ್ಲೂ ದೂರುದಾರರು ಸಿಬಿಐ ಬಾಗಿಲು ತಟ್ಟಬಹುದು ಎಂಬ ಆತಂಕ ಇದೆ. ಹೀಗಾಗಿ ಸಿಬಿಐಗಿದ್ದ ಮುಕ್ತ ತನಿಖಾ ಅವಕಾಶಕ್ಕೆ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದೆ.

ರಾಜ್ಯಪಾಲರ ನಡೆಗೆ ಸರ್ಕಾರದಿಂದ ತಿರುಗೇಟು

ಸಿಬಿಐಗಿದ್ದ ಮುಕ್ತ ತನಿಖಾ ಅವಕಾಶಕ್ಕೆ ತಡೆಯೊಡ್ಡುವ ಮೂಲಕ, ಸರ್ಕಾರದ ವಿರುದ್ದ ಪತ್ರ ಸಮರ ಶುರು ಮಾಡಿದ್ದ ರಾಜ್ಯಪಾಲರಿಗೂ ತಿರುಗೇಟು ನೀಡಲು ಸಚಿವ ಸಂಪುಟ ಮುಂದಾಗಿದೆ. ಸಿಎಂ, ಸಚಿವರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳ ಬಳಿ ಮಾಹಿತಿ ಕೇಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಭಾರಿ ಮುಜಗರ ಉಂಟಾಗಿದೆ. ಹೀಗಾಗಿ ರಾಜ್ಯಪಾಲರು ಕೇಳುವ ಮಾಹಿತಿ ಸಿಎಸ್ ಕೊಡುವಂತಿಲ್ಲ. ಸಚಿವ ಸಂಪುಟದ ಗಮನಕ್ಕೆ ತರಬೇಕು, ಕ್ಯಾಬಿನೆಟ್ ಮೂಲಕವೇ ಉತ್ತರ ಹೋಗಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ನಿಮ್ಮ ‘ಸಿದ್ವಿಲಾಸ’ಕ್ಕೆ ಉಘೇ ಎನ್ನಲೇಬೇಕು ಸಿದ್ದರಾಮಯ್ಯನವರೇ: ಹೀಗೆಂದಿದ್ದೇಕೆ ಕುಮಾರಸ್ವಾಮಿ!

ಆರ್ಕಾವತಿ ಸೇರಿದಂತೆ ಯಾವುದೆ ಮಾಹಿತಿ ನೀಡಬೇಕಾದರೂ ಕ್ಯಾಬಿನೆಟ್ ಮೂಲಕವೇ ಹೋಗಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ, ರಾಜ್ಯಪಾಲರ ನಡೆಗೆ ಸರ್ಕಾರ ತನ್ನ ಅಸಮಾಧಾನ ಹೊರ ಹಾಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:23 am, Fri, 27 September 24