
ಗದಗ, ಮೇ 15: ಕರ್ನಾಟಕ ಕಾಂಗ್ರೆಸ್ ಸರ್ಕಾರದ (Congress Govt) ವಿರುದ್ಧ ಗದಗದಲ್ಲಿ (Gadag) ಗೃಹಲಕ್ಷ್ಮೀಯರು ಗರಂ ಆಗಿದ್ದಾರೆ. ಮೂರು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಬಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಉಚಿತ ಯೋಜನೆಗಳ ಭವರಸೆ ಕೊಟ್ಟು ಅಧಿಕಾರದ ಚುಕ್ಕಾಣಿ ಹಿಡಿದು ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ನುಡಿದಂತೆ ನಡಯದಿದ್ದರೆ ಮುಂದೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಫಲಾನುಭವಿಗಳು, ಸಿಎಂ ಸಿದ್ಧರಾಮಯ್ಯನವರು ಪದೇ ಪದೇ, ‘‘ನಮ್ಮದು ನುಡಿದಂತೆ ನಡೆದ ಸರ್ಕಾರ’’ ಎನ್ನುತ್ತಾರೆ. ಆದರೆ, ಚುನಾವಣೆ ಸಂದರ್ಭ ಪ್ರತಿ ತಿಂಗಳು ಹಣ ವರ್ಗಾವಣೆ ಮಾಡುತ್ತೇವೆ ಎಂದಿದ್ದರು. ಆದರೆ, ಈಗ ಮೂರು ತಿಂಗಳಾದರೂ ಹಣ ಬಂದಿಲ್ಲ. ಎಲ್ಲಿದೆ ನುಡಿದಂತೆ ನಡೆದ ಸರ್ಕಾರ ಎಂದು ಪ್ರಶ್ನೆ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ನೀಡಿ ಎಂದು ಯಾರೂ ಕೇಳಿಲ್ಲ. ಚುನಾವಣೆಯಲ್ಲಿ ಭರವಸೆ ನೀಡಿ ಮೋಸ ಮಾಡಿದ್ದಾರೆ ಎಂದು ಮಹಿಳೆಯರು ಕಿಡಿಕಾರಿದ್ದಾರೆ. ಸರ್ಕಾರದ ಹಣದ ಮೇಲೆ ಅವಲಂಬಿತರಾಗಿದ್ದೆವು. ಈಗ ಹಣ ಕೊಡದೇ ಇರುವುದರಿಂದ ಮನೆ ನಿರ್ವಹಣೆ, ಮಕ್ಕಳ ಶಿಕ್ಷಣಕ್ಕೂ ಹೊಡೆತ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸಾಕಷ್ಟು ಜನ ಮಹಿಳೆಯರು ಗ್ಯಾರಂಟಿಗಳನ್ನೇ ಅವಲಂಬಿಸಿ ಬದುಕು ನಡೆಸುತ್ತಿದ್ದು, ಗ್ಯಾರಂಟಿಗಳನ್ನು ನಮಗೆ ಸರಿಯಾಗಿ ತಲುಪುವಂತೆ ಮಾಡಿ ಎಂದು ಫಲಾನುಭವಿ ಮಾನವ್ವ ಎಂಬವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸಿಂದಗಿ ಡಿಪೋದಲ್ಲಿ ಡೀಸೆಲ್ ಸಮಸ್ಯೆ, ನಿಂತಲ್ಲೇ ನಿಂತ ಬಸ್ಗಳು..ಪ್ರಯಾಣಿಕರು ಪರದಾಟ
ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿದೆಯಾ ಎಂಬುದರ ಮೇಲ್ವಿಚಾರಣೆಗೆ ಜಿಲ್ಲಾ ಮಟ್ಟದ ಒಂದು ಸಮಿತಿ ರಚನೆ ಮಾಡಲಾಗಿದೆ. ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಭೆ ಮಾಡಿ ಸುಮ್ಮನೆ ಇದ್ದಾರೆ. ಸಂತೆಯಲ್ಲಿ ಹೋಗಿ ಮಹಿಳೆಯರನ್ನು ಮಾತನಾಡಿಸಿ ಪೋಟೋಗಳಿಗೆ ಪೋಸ್ ಕೊಟ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ಆದರೆ, ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದು ಫಲಾನುಭವಿ ಮಹಿಳೆಯರು ಆರೋಪಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ