ವಕ್ಫ್ ಆಯ್ತು, ರೈತರ ಪಹಣಿಯಲ್ಲಿ ಸರ್ಕಾರ ಅಂತ ನಮೂದು: ಆತಂಕದಲ್ಲಿ ನರಗುಂದ ಅನ್ನದಾತರು
ಅದು 80ರ ದಶಕ, ಅಂದು ನೀರಾವರಿ ಕರ ವಿಚಾರವಾಗಿ ನರಗುಂದದಲ್ಲಿ ದೊಡ್ಡ ಬಂಡಾಯವೇ ನಡೆದಿತ್ತು. ಈಗ ಮತ್ತೆ ನೀರಾವರಿ ಕರ ವಿಚಾರವಾಗಿ ರೈತರು ರೊಚ್ಚಿಗೆದ್ದು, ಸರ್ಕಾರ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. 1995ರಲ್ಲಿ ರೈತರು ನೀರಾವರಿ ಕರ ತುಂಬಿಲ್ಲ ಅಂತ ಅಂದಿನ ತಹಶೀಲ್ದಾರ ರೈತರ ಜಮೀನು ಪಹಣಿಯಲ್ಲಿ ಸರ್ಕಾರ ಅಂತ ನಮೂದು ಮಾಡಿದ್ದಾರೆ. ಎಲ್ಲ ರೀತಿಯ ಕರ ಪಾವತಿ ಮಾಡಿದರೂ, ಇಂದಿಗೂ ಸರ್ಕಾರ ಅಂತ ತೆಗೆದು ಹಾಕಿಲ್ಲ. ಇದರಿಂದ ಸರ್ಕಾರದ ಯಾವುದೇ ಸೌಲಭ್ಯ ಸಿಗದೆ ರೈತರು ರೊಚ್ಚಿಗೆದ್ದಿದ್ದಾರೆ.

ಗದಗ, ಜೂನ್ 22: ನರಗುಂದ (Nargund) ತಾಲೂಕಿನ ಹದಲಿ, ಖಾನಾಪುರ, ಗಂಗಾಪುರ ಸೇರಿದಂತೆ ಐದು ಗ್ರಾಮದ ನೂರಾರು ರೈತರ ಜಮೀನು ಪಹಣಿ ಪತ್ರದ ಕಾಲಂ ನಂಬರ್ 9 ರಲ್ಲಿ ‘ಸರಕಾರ’ (Government) ಅಂತ ನಮೂದು ಮಾಡಲಾಗಿದೆ. ಇದಕ್ಕೆ ಕಾರಣ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಹಲವು ಗ್ರಾಮಗಳ ರೈತರು ನೀರಾವರಿ ಕರವನ್ನು ಸರ್ಕಾರಕ್ಕೆ ತುಂಬದೆ ಇರುವುದರಿಂದ, 1995 ರಲ್ಲಿ ಅಂದಿನ ತಹಶೀಲ್ದಾರ ರೈತರ ಗಮನಕ್ಕೆ ತರದೆ ಪಹಣಿ ಪತ್ರದ ಕಾಲಂ ನಂಬರ್ 9 ರಲ್ಲಿ ಸರ್ಕಾರ ಅಂತ ನಮೂದು ಮಾಡಿದ್ದಾರಂತೆ.
ಕೆಲವು ವರ್ಷಗಳ ಹಿಂದೆ ಕೆಲವು ರೈತರು ನೀರಾವರಿ ಕರವನ್ನು ಸರ್ಕಾರಕ್ಕೆ ಕಟ್ಟಿದ್ದಾರೆ. ಆದರೂ ಕೂಡ ಪಹಣಿ ಪತ್ರದಲ್ಲಿನ ಸರ್ಕಾರ ಹಾಗೇ ಇದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಅಂತ ರೈತರು ಕಿಡಿಕಾರಿದ್ದಾರೆ. “ತಹಶೀಲ್ದಾರ ಯಡವಟ್ಟಿನಿಂದ ನಮಗೆ ಯಾವುದೇ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ. ಬೆಳೆ ವಿಮೆ, ಸರ್ಕಾರದ ಪರಿಹಾರ ಸಿಗುತ್ತಿಲ್ಲ. ಅಷ್ಟೇ ಅಲ್ಲ ಸಾಲ ಕೂಡ ಸಿಗುತ್ತಿಲ್ಲ. ಜಮೀನು ಸಹವಾಸ ಬೇಡ ಅಂತ ಮಾರಾಟ ಮಾಡಲು ಹೋದರೂ ಆಗುತ್ತಿಲ್ಲ” ಅಂತ ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಬೆಣ್ಣೆ ಹಳ್ಳದ ದಡದಲ್ಲಿ ಐದು ಗ್ರಾಮದ ರೈತರಿಗೆ ಸರ್ಕಾರಿ ಸೌಕರ್ಯ ಸಿಗ್ತಾಯಿಲ್ಲ. ಈ ಹಿಂದೆ ನೀರಾವರಿ ಕರವನ್ನು ಕಟ್ಟುವುದಿಲ್ಲ ಎನ್ನುವ ಕಾರಣಕ್ಕೆ ಬಹುದೊಡ್ಡ ಹೋರಾಟ ಮಾಡಲಾಗಿತ್ತು, ಆಗ ನರಗುಂದ ಬಂಡಾಯ ನಡೆದು ಹೋಗಿದ್ದು, ನರಗುಂದ ಹಾಗೂ ನವಲಗುಂದಲ್ಲಿ ಇಬ್ಬರು ರೈತರು ಹುತಾತ್ಮರಾಗಿದ್ದರು. ಇಷ್ಟೊಂದು ಉಗ್ರವಾದ ಹೋರಾಟವನ್ನು ಈ ಹಿಂದೆ ಈ ಭಾಗದ ರೈತರು ಮಾಡಿದ್ದಾರೆ.
ಅದರೆ, 1995 ರ ಸಮಯದಲ್ಲಿ ಆಗಿನ ತಹಶಿಲ್ದಾರ ಅವರು ಪಹಣಿ ಪತ್ರದ ಕಾಲಂ ನಂಬರ್ 9 ರಲ್ಲಿ ಸರ್ಕಾರ ಅಂತ ನಮೂದು ಮಾಡಿದ್ದರಂತೆ. ಕೆಲ ರೈತರು ನೀರಾವರಿ ಕರವನ್ನು ಕಟ್ಟಿದ್ದಾರೆ, ಆದರೆ, ಈವರಿಗೆ ಸರ್ಕಾರ ಅಂತ ತೆಗೆದು, ಪೂರ್ಣವಾಗಿ ರೈತರ ಹೆಸರು ಸೇರ್ಪಡೆ ಮಾಡಿಲ್ಲ. ಹೀಗಾಗಿ, ಪತ್ರಿ ಭಾರಿ ಉಕ್ಕಿ ಹರಿಯುವ ಬೆಣ್ಣೆಹಳ್ಳದ ಪ್ರವಾಹಕ್ಕೆ ಬೆಳೆ ಸರ್ವನಾಶವಾದರೂ, ರೈತರಿಗೆ ಪರಿಹಾರ ಮಾತ್ರ ಸಿಗುತ್ತಿಲ್ಲ. ಕೂಡಲೇ ಪಹಣಿ ಪತ್ರದಲ್ಲಿ ಕಾಲಂ 9 ರಲ್ಲಿ ಸರ್ಕಾರ ಅಂತ ನಮೂದಾದ ಹೆಸರನ್ನು ತೆಗೆದು, ರೈತರ ಹೆಸರನ್ನು ದಾಖಲು ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನರಗುಂದ ತಹಶಿಲ್ದಾರ ಕಚೇರಿ ಮುಂದೆ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆ ಅನ್ನದಾತರು ನೀಡಿದ್ದಾರೆ.
ಇದನ್ನೂ ಓದಿ: ವಿಜಯಪುರ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು: ಕಂಗಾಲಾದ ಅನ್ನದಾತ
ಬೆಣ್ಣೆಹಳ್ಳ ಅಬ್ಬರಿಸಿ ಬೊಬ್ಬಿರಿದು ಹೋಗಿದ್ದು, ರೈತರು ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆ ಸರ್ವನಾಶವಾಗಿದೆ. ಈವಾಗ ಸರ್ಕಾರ ಪರಿಹಾರ ನೀಡಿದರೂ ಈ ರೈತರಿಗೆ ಪರಿಹಾರ ಬರುವುದಿಲ್ಲ. ಹೀಗಾಗಿ, ಆದಷ್ಟು ಬೇಗ ಪಹಣಿ ಪತ್ರದ ಕಾಲಂ ನಂಬರ್ 09 ಸರ್ಕಾರ ಅಂತ ನಮೂದಾದ ಹೆಸರನ್ನು ತೆಗೆದು, ರೈತರ ಹೆಸರನ್ನು ಸೇರ್ಪಡೆ ಮಾಡಬೇಕು. ಆಗ ಮಾತ್ರ ಸರ್ಕಾರಿ ಸೌಲಭ್ಯ ಹಾಗೂ ಪರಿಹಾರ ಸಿಗಲು ಸಾಧ್ಯ. ಆದಷ್ಟು ಬೇಗ ಈ ಕಾರ್ಯವನ್ನು ಗದಗ ಜಿಲ್ಲಾಡಳಿತ ಹಾಗೂ ಈ ಭಾಗದ ಜನಪ್ರತಿನಿಧಿಗಳು ನಿಗಾ ವಹಿಸಿ ಮಾಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







