ಸರ್ಕಾರದ ಕ್ರಮಕ್ಕೆ ಮಾಜಿ ಸಚಿವರಿಂದಲೇ ಅಸಮಾಧಾನ: ಅಧಿಕಾರಿಗಳ ವಿರುದ್ಧ ಸಿಎಂಗೆ ಪತ್ರ ಬರೆದ ಹೆಚ್​​ಕೆ ಪಾಟೀಲ್

ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೆಚ್​​.ಕೆ. ಪಾಟೀಲ್ ಈಗಾಗಲೇ ಹೇಳಿದ್ದಾರೆ. ಇದೀಗ ಅಧಿಕಾರಿಗಳ ಕ್ರಮಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಕುರಿತಾಗಿ ಸಿಎಂ ಡಿಕೆ ಶಿವಕುಮಾರ್​​ ಅವರಿಗೆ ಪತ್ರ ಕೂಡ ಬರೆದಿದ್ದಾರೆ.

ಸರ್ಕಾರದ ಕ್ರಮಕ್ಕೆ ಮಾಜಿ ಸಚಿವರಿಂದಲೇ ಅಸಮಾಧಾನ: ಅಧಿಕಾರಿಗಳ ವಿರುದ್ಧ ಸಿಎಂಗೆ ಪತ್ರ ಬರೆದ ಹೆಚ್​​ಕೆ ಪಾಟೀಲ್
ಎಚ್​ಕೆ ಪಾಟೀಲ್​​
Image Credit source: HK Patil facebook
Edited By:

Updated on: Sep 20, 2026 | 8:38 PM

ಬೆಂಗಳೂರು, ಸೆಪ್ಟೆಂಬರ್​ 20: ರಾಜ್ಯ ಸರ್ಕಾರದ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಮಾಜಿ ಸಚಿವ ಎಚ್​ಕೆ ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರಿಗಳ ವಿರುದ್ದ ಸಿಎಂ ಶಿವಕುಮಾರ್​ಗೆ ಪತ್ರ ಬರೆದಿದ್ದಾರೆ. ಅಧಿಕಾರಿಗಳು ಮುಖ್ಯಮಂತ್ರಿಗಳ ಆದೇಶ ಹಾಗೂ ನಿರ್ದೇಶನಗಳನ್ನೇ ಬಹಿರಂಗವಾಗಿ ಧಿಕ್ಕರಿಸುತ್ತಿದ್ದು, ರೈತ ವಿರೋಧಿ ಧೋರಣೆ ಅನುಸರಿಸುವ ಮೂಲಕ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಉತ್ತರ ಕರ್ನಾಟಕದಲ್ಲಿ ತೀವ್ರ ಬರ: ವಾಸ್ತವಿಕ ಪರಿಶೀಲನೆಗೆ ಆಗ್ರಹ

ಉತ್ತರ ಕರ್ನಾಟಕ ಭಾಗದಲ್ಲಿ ಈ ವರ್ಷ ತೀವ್ರ ಬರ ಪರಿಸ್ಥಿತಿ ತಲೆದೋರಿದೆ. ಶೇ. 40 ರಿಂದ ಶೇ. 60 ರಷ್ಟು ಮಳೆ ಕೊರತೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಈ ಭಾಗದ ಬಹುತೇಕ ಭೂಮಿ ಕಪ್ಪು ಮಣ್ಣಿನಿಂದ (ಎರೆ ಭೂಮಿ) ಕೂಡಿದೆ. ಒಂದೇ ದಿನ ಅತಿ ಹೆಚ್ಚು ಮಳೆಯಾದರೆ ಈ ಮಣ್ಣು ನೀರನ್ನು ಹೀರಿಕೊಳ್ಳುವ ಪ್ರಮಾಣ ಕಡಿಮೆ ಇದ್ದು, ನೀರು ಭೂಮಿಯ ಮೇಲೆಯೇ ಹರಿದುಹೋಗುವುದರಿಂದ ತೇವಾಂಶ ಸಂಗ್ರಹವಾಗುವುದಿಲ್ಲ. ಇಂತಹ ಭೌಗೋಳಿಕ ವಾಸ್ತವಿಕತೆಯನ್ನು ಪರಿಗಣಿಸಿ, ಬರಗಾಲ ಘೋಷಣೆಯ ಮಾರ್ಗಸೂಚಿಗಳನ್ನು ತಕ್ಷಣವೇ ಮರುಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಅವರು ಒತ್ತಿಹೇಳಿದ್ದಾರೆ.

ಅಸಮರ್ಪಕ ಮಳೆಮಾಪನ; ಸಿಎಂ ಆದೇಶಕ್ಕಿಲ್ಲ ಬೆಲೆ

ಅಸಮರ್ಪಕ ಮಳೆಮಾಪನ ಕೇಂದ್ರಗಳ ದೋಷಪೂರಿತ ಮಾಹಿತಿಯನ್ನು ಆಧರಿಸಿ ಬೆಂಗಳೂರಿನ ಅಧಿಕಾರಿಗಳು ಮನಬಂದಂತೆ ಲೆಕ್ಕಾಚಾರ ಮಾಡುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಆಡಳಿತ ಶೈಲಿಯ ಬಗ್ಗೆಯೇ ಸಾರ್ವಜನಿಕರಲ್ಲಿ ಅಸಮಾಧಾನ ಉಂಟಾಗುತ್ತಿದೆ. ಬೆಳೆ ವಿಮೆಗೆ ಸಂಬಂಧಿಸಿದಂತೆ ಸಂಖ್ಯಾ ಸಂಗ್ರಹಣಾ ಇಲಾಖೆಯ ಅಧಿಕಾರಿಗಳು ಸಿಎಂ ನಿರ್ದೇಶನವನ್ನೇ ಗೌರವಿಸುತ್ತಿಲ್ಲ. ಸತ್ಯಕ್ಕೆ ಬೆಲೆ ಕೊಡದೆ, ತಮ್ಮದೇ ಮಾನದಂಡ ಬಳಸಿ ರೈತರ ನೈಜ ಪರಿಸ್ಥಿತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದ ವಿರುದ್ಧ ಸಿಡಿದ ಕಾಂಗ್ರೆಸ್​​ ಹಿರಿಯ ಶಾಸಕ: ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ರೆ ರಾಜೀನಾಮೆ ಎಂದ ಹೆಚ್​​.ಕೆ. ಪಾಟೀಲ್​​

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಣಯಗಳನ್ನು ಅಧಿಕಾರಿಗಳು ಸಂಪೂರ್ಣವಾಗಿ ಅಲಕ್ಷಿಸಿದ್ದಾರೆ. ಸಿಎಂ ನೇತೃತ್ವದಲ್ಲಿ ನಡೆದ ಸಭೆಯ ಚರ್ಚೆ ಹಾಗೂ ನಿರ್ಣಯಗಳನ್ನು ಧಿಕ್ಕರಿಸಿ, ನೀಡಿದ ಆದೇಶಗಳನ್ನೇ ಅಗೌರವಿಸಿ ತೀರ್ಮಾನ ಕೈಗೊಂಡಿದ್ದಾರೆ. ಕಳುಹಿಸಿದ ಪತ್ರಗಳು ಹಾಗೂ ಪ್ರಮುಖ ಮಾಹಿತಿಗಳನ್ನು ಹಿರಿಯ ಅಧಿಕಾರಿಗಳು ಹತ್ತಾರು ದಿನಗಳ ಕಾಲ ಗಮನಿಸುವುದೇ ಇಲ್ಲ. ಸಂಖ್ಯಾ ಸಂಗ್ರಹಣಾ ಇಲಾಖೆಯವರು ಬೆಂಗಳೂರಿನ ಕಚೇರಿಗಳಿಗೆ ಅಂಚೆ ಮೂಲಕ ಪತ್ರ ರವಾನಿಸುತ್ತಿದ್ದು, ಅದು 10 ದಿನದ ನಂತರ ಇದೇ ಊರಿನ ಕಚೇರಿಗಳಿಗೆ ತಲುಪುತ್ತಿದೆ.

27 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಪಟ್ಟು

ಇನ್ನು ಕಿತ್ತೂರು ಕರ್ನಾಟಕ ಭಾಗದ 73 ತಾಲೂಕುಗಳ ಪೈಕಿ ಮಳೆಯ ತೀವ್ರ ಅಭಾವವಿದ್ದರೂ 27 ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ಅತ್ಯಂತ ವಿಷಾದನೀಯ ಸಂಗತಿ. ಆದ್ದರಿಂದ ಉತ್ತರ ಕರ್ನಾಟಕ ಭಾಗದ ಈ ಎಲ್ಲಾ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಎಂದು ಘೋಷಿಸಬೇಕು ಹಾಗೂ ಅಧಿಕಾರಿಗಳ ಈ ರೈತ ವಿರೋಧಿ ಧೋರಣೆಯನ್ನು ನಿಲ್ಲಿಸಿ ಸಂಕಷ್ಟದಲ್ಲಿರುವ ಅನ್ನದಾತರಿಗೆ ನ್ಯಾಯ ಒದಗಿಸಬೇಕು ಎಂದು ಎಚ್.ಕೆ. ಪಾಟೀಲ್ ಪತ್ರದ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:37 pm, Sun, 20 September 26

Loading...
Unable to load recommendations.
Follow Us