ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: ರೇವಣ್ಣ ನಿವಾಸದಲ್ಲಿ ಇಂಚಿಂಚೂ ಶೋಧ ನಡೆಸಿದ SIT

ರೇವಣ್ಣ ನಿವಾಸದಲ್ಲಿ ಎಸ್​ಐಟಿ ಪರಿಶೀಲನೆ ನಡೆದಿದೆ. ರೇವಣ್ಣ ನಿವಾಸಕ್ಕೆ ಇಬ್ಬರು ಸಂತ್ರಸ್ತೆಯರನ್ನ ಕರೆತಂದು ಮಹಜರು ನಡೆಸಲಾಯ್ತು. ಹೊಳೆನರಸೀಪುರದ ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತೆ, ಹಾಸನದ ಎಂಪಿ ನಿವಾಸದ ಕಿರುಕುಳ ಸಂತ್ರಸ್ತೆ ಕರೆತಂದು ಮಹಜರು ಮಾಡಲಾಯ್ತು. ಸಂತ್ರಸ್ತೆಯರ ಮಾಹಿತಿಯಂತೆ ಬೆಡ್ ರೂಮ್​, ಸ್ಟೋರ್ ರೂಂ, ಅಡುಗೆ ಮನೆ ಒಳಗೆ ಮಹಜರು ಮಾಡಿ ಮಾಹಿತಿ ಕಲೆ ಹಾಕಲಾಗಿದೆ. ಎಲ್ಲಾ ಪ್ರಕ್ರಿಯೆ ವಿಡಿಯೋ ರೆಕಾರ್ಡ್ ಮಾಡಲಾಗಿದೆ.

Follow us
| Updated By: ಗಂಗಾಧರ​ ಬ. ಸಾಬೋಜಿ

Updated on: May 04, 2024 | 5:09 PM

ಹಾಸನ, ಮೇ 4: ಪ್ರಜ್ವಲ್ ಹಾಗೂ ರೇವಣ್ಣ (Prajwal Revanna) ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆ ಚುರುಕುಕೊಂಡಿದೆ. ಹಾಸನದ ಹೊಳೆನರಸೀಪುರದಲ್ಲಿರುವ ರೇವಣ್ಣ (HD Revanna) ಮನೆಯಲ್ಲಿ SIT ಅಧಿಕಾರಿಗಳು ಮಹಜರು ನಡೆಸಿದ್ದಾರೆ. ರೇವಣ್ಣನ ನಿವಾಸದೊಳಗೆ ಇಬ್ಬರು ಸಂತ್ರಸ್ತ ಮಹಿಳೆಯರ ಸಮ್ಮುಖದಲ್ಲೇ ಎಸ್​ಐಟಿ ಸ್ಥಳ ಮಹಜರು ನಡೆಸಿದೆ. ಸಂತ್ರಸ್ತ ಮಹಿಳೆ ಮಾಹಿತಿಯಂತೆ ಬೆಡ್ ರೂಂ, ಸ್ಟೋರ್ ರೂಂ, ಅಡುಗೆ ಮನೆಯಲ್ಲಿ ಅಧಿಕಾರಿಗಳು ಇಂಚಿಂಚೂ ಶೋಧ ಮಾಡಿದ್ದಾರೆ.

ಓರ್ವ ಎಸಿಪಿ, ಇಬ್ಬರು ಮಹಿಳಾ ಇನ್ಸ್​ಪೆಕ್ಟರ್​, ಮಹಿಳಾ PSI, ಇಬ್ಬರು ಮಹಿಳಾ ಪಿಸಿ, ಓರ್ವ ಹೆಚ್​ಸಿ, ಇಬ್ಬರು ಕಾನ್ಸ್​ಟೇಬಲ್​ ಸೇರಿದಂತೆ ಒಟ್ಟು ಎಂಟು ತನಿಖಾಧಿಕಾರಿಗಳಿಂದ ಮಹಜರು ಪ್ರಕ್ರಿಯೆ ಮಾಡಲಾಗಿದೆ. ಲೈಂಗಿಕ ದೌರ್ಜನ್ಯ ನಡೆದ ಸ್ಥಳದ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಿದ್ದಾರೆ. ಸ್ಥಳ ಮಹಜರು ವೇಳೆ ರೇವಣ್ಣ ಪತ್ನಿ ಭವಾನಿ ಮನೆಯಲ್ಲೇ ಇದ್ದರು ಎನ್ನಲಾಗಿದೆ.

ಪ್ರಜ್ವಲ್ ರೇವಣ್ಣಗೆ ಬ್ಲೂ ಕಾರ್ನರ್ ನೋಟಿಸ್?

ಸಂಸದ ಪ್ರಜ್ವಲ್ ರೇವಣ್ಣಗೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲು ಎಸ್​ಐಟಿ ಸಜ್ಜಾಗಿದೆ. ಪ್ರಜ್ವಲ್​ ರೇವಣ್ಣಗೆ ಬ್ಲೂ ಕಾರ್ನರ್ ನೋಟಿಸ್​​ ನೀಡುವಂತೆ ಸಿಬಿಐ ಅಧಿಕಾರಿಗಳಿಗೆ ಇಂಟರ್ ಪೋಲ್ ಮೂಲಕ ಮನವಿ ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಲೊಕೇಷನ್, ಚಲನವಲನ ಸೇರಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್​: ವಿಡಿಯೋ ನೋಡೋ ಧೈರ್ಯ ಬರಲಿಲ್ಲ, ನಿಖಿಲ್ ಕುಮಾರಸ್ವಾಮಿ

ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆ ನಡೆಸುತ್ತಿರೋ ಎಸ್​ಐಟಿ ಸದ್ಯ 4 ಕೇಸ್​ಗಳನ್ನ ಕೈಗೆತ್ತಿಕೊಂಡಿದೆ. ಪೆನ್​ಡ್ರೈವ್​ ಹಂಚಿಕೆ ಕೇಸ್​ನಲ್ಲಿ ಮಹತ್ತರ ಸಾಕ್ಷಿ ಲಭ್ಯವಾಗಿದೆ. ಆಡಿಯೋ, ವಿಡಿಯೋ ಸಹಿತ ದಾಖಲಾತಿ ಸಿಕ್ಕಿದೆ. ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ನೀಡಿರೋ ಎಲ್ಲ ವಿಡಿಯೋ ಸಾಕ್ಷ್ಯಗಳನ್ನ ದೇವರಾಜೇಗೌಡ ಎಸ್​ಐಟಿಗೆ ನೀಡಿದ್ದಾರೆ ಎನ್ನಲಾಗಿದೆ.

SIT ಅಧಿಕಾರಿಗಳ ಮೇಲೆ ಸಿಎಂ ಸಿದ್ದರಾಮಯ್ಯ ಗರಂ

SIT ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಕಾವೇರಿ ನಿವಾಸದಲ್ಲಿ ಸಭೆ ನಡೆಸಿರೋ ಸಿಎಂ ಮಾಹಿತಿ ಕಲೆಹಾಕಿದ್ದಾರೆ. ಎಸ್​ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಮತ್ತು ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಭಾಗಿ ಆಗಿದ್ದರು. ಪ್ರಜ್ವಲ್ ಕೇಸ್​ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಇನ್ನೂ ಬಂಧನವಾಗಿಲ್ಲವೇಕೆ ಎಂದು ಸಿಎಂ ತರಾಟೆಗೆ ತೆಗೆದುಕೊಂಡಿದ್ದರು. ಸಿಎಂ ಗರಂ ಆಗುತ್ತಿದ್ದಂತೆ ಸೂಕ್ತ ಕ್ರಮಗಳೊಂದಿಗೆ ಬಂಧಿಸ್ತೇವೆ ಅಂತಾ ಎಸ್​ಐಟಿ ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.