ಪ್ರಧಾನಿ ನರೇಂದ್ರ ಮೋದಿ ಅಂದ್ರೆ ಸಂಸದರಿಗೆ ಹೆದರಿಕೆ: ಆಕ್ಷೇಪಾರ್ಹ ಪದ ಬಳಸಿ ಟೀಕಿಸಿದ ಜೆಡಿಎಸ್ ಶಾಸಕ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 13, 2022 | 10:13 PM

ನಾವು ಹಿಜಾಬ್ ಪರವೂ ಇಲ್ಲ, ವಿರುದ್ಧವೂ ಇಲ್ಲ. ಹೇಳಿಕೊಳ್ಳಲು ಯಾವುದೇ ಸಾಧನೆಯಿಲ್ಲದ ಬಿಜೆಪಿ ಸರ್ಕಾರವು ಜನರ ಭಾವನೆ ಬಡಿದೆಬ್ಬಿಸಲು ಯತ್ನಿಸುತ್ತಿದೆ ಎಂದು ಆರೋಪ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅಂದ್ರೆ ಸಂಸದರಿಗೆ ಹೆದರಿಕೆ: ಆಕ್ಷೇಪಾರ್ಹ ಪದ ಬಳಸಿ ಟೀಕಿಸಿದ ಜೆಡಿಎಸ್ ಶಾಸಕ
ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಮತ್ತು ಜೆಡಿಎಸ್ ವರಿಷ್ಠ ಎಚ್​.ಡಿ.ದೇವೇಗೌಡ
Follow us on

ಹಾಸನ: ಪ್ರಧಾನಿ ನರೇಂದ್ರ ಮೋದಿ (Narendra Modi) ಎಂದರೆ ಬಿಜೆಪಿ ಸಂಸದರಿಗೆ ತೀವ್ರ ಹೆದರಿಕೆಯಿದೆ. ಅವರೆಲ್ಲರೂ ಹೆದರಿ ನಿಲ್ಲುತ್ತಾರೆ. ಪ್ರಧಾನಿಯ ಎದುರು ಮಾತನಾಡಲು, ರಾಜ್ಯದ ಅಭಿವೃದ್ಧಿಗೆ ಇರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಹಿಂಜರಿಯುತ್ತಾರೆ. ಅವರಿಗೆ ಧೈರ್ಯವೇ ಇಲ್ಲ ಎಂದು ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ (KS Lingesh)​ ಆರೋಪ ಮಾಡಿದರು. ಈ ಸಂದರ್ಭ ಅವರು ಆಕ್ಷೇಪಾರ್ಹ ಪದವೊಂದನ್ನೂ ಬಳಸಿದರು. ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾವು ಹಿಜಾಬ್ ಪರವೂ ಇಲ್ಲ, ವಿರುದ್ಧವೂ ಇಲ್ಲ. ಹೇಳಿಕೊಳ್ಳಲು ಯಾವುದೇ ಸಾಧನೆಯಿಲ್ಲದ ಬಿಜೆಪಿ ಸರ್ಕಾರವು ಜನರ ಭಾವನೆ ಬಡಿದೆಬ್ಬಿಸಲು ಯತ್ನಿಸುತ್ತಿದೆ. ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಹದಿಹರೆಯದ ಮನಸ್ಸುಗಳೇ ಬೇಕಿತ್ತು ಇವರಿಗೆ. ಈ ವಿದ್ಯಾರ್ಥಿಗಳಿಗೆ ಇನ್ನೂ 16, 17 ವರ್ಷ ಸಹ ತುಂಬಿಲ್ಲ. ಮನಸ್ಸು ಪ್ರಬುದ್ಧವಾಗಿಲ್ಲ ಎಂದು ವಿಶ್ಲೇಷಿಸಿದರು.

ಮಕ್ಕಳನ್ನು ಎತ್ತಿಕಟ್ಟಿ ಕೇಸರಿ ಶಾಲು ಹಾಕಿಸುವುದು ಹೀನ ಕಾರ್ಯ. ಹಿಜಾಬು ಹಾಕಿಕೊಳ್ಳುವುದು ಅಥವಾ ಹಾಕದೆ ಬಿಡುವುದು ಅವರಿಗೆ ಬಿಟ್ಟ ವಿಚಾರ. ವಸ್ತ್ರಸಂಹಿತೆ ಬಗ್ಗೆ ಶಾಲಾ ಆಡಳಿತ ಮಂಡಳಿ ನೋಡಿಕೊಳ್ಳುತ್ತದೆ. ರಾತ್ರೋರಾತ್ರಿ ಹುಡುಗರಿಗೆ ಕೇಸರಿ ಶಾಲು ಹಾಕಿಸಿ ಕ್ಯಾಂಪಸ್​ನಲ್ಲಿ ರಾಜಕಾರಣ, ಗಲಾಟೆ ಮಾಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕೇಸರಿಶಾಲು ಹಾಕದೆ ಕಾಲೇಜಿಗೆ ಹೋಗಿದ್ದರೆ ಹಿಜಾಬ್ ವಿಚಾರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಇಂದು 10ರಿಂದ 15 ವಿದ್ಯಾರ್ಥಿಗಳು ಜೈಲಿನಲ್ಲಿದ್ದಾರ. ರಾಜಕಾರಣಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯ ಹಾಳುಮಾಡಲಾಗಿದೆ ಎಂದು ಆರೋಪ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಜಾತೀಯತೆ, ಧರ್ಮ ತರಬೇಕು ಎನ್ನುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ. ಇನ್ನೊಂದ ಅವಧಿಗೆ ಇವರೇ ಅಧಿಕಾರಕ್ಕೆ ಬಂದರೆ ದೇಶ, ರಾಜ್ಯ ಉಳಿಯುವುದೇ? ಶಾಂತಿ, ಪ್ರೀತಿ ಬೆಳೆಸಿಕೊಂಡರೆ ಭವಿಷ್ಯದಲ್ಲಿ ದೇಶಕ್ಕೆ ಒಳ್ಳೆಯದಾಗುತ್ತೆ. ಇಲ್ಲದಿದ್ದರೆ ಮತ್ತೊಂದು ತಾಲಿಬಾನ್ (ಆಡಳಿತ) ಆಗುವುದರಲ್ಲಿ ಸಂಶಯವಿಲ್ಲ ಎಂದರು.

ಸರ್ಕಾರಗಳು ಬಡವರು, ರೈತರ ಪರ ಕಾರ್ಯಕ್ರಮ ರೂಪಿಸಬೇಕು. ಅದೇ ಕಾರಣಕ್ಕಾಗಿ ಎಚ್​.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಪಂಚರತ್ನ ಕಾರ್ಯಕ್ರಮ ರೂಪಿಸಿದ್ದರು. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಮಿಷನ್ 123 ಗುರಿ ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ 7ಕ್ಕೆ 7 ಕ್ಷೇತ್ರ ಗೆಲ್ಲುವ ಕೆಲಸ ಮಾಡಬೇಕು. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಾಚಿಕೆಯಾಗುವಂತೆ ನಮ್ಮ ಸಾಧನೆ ಇರಬೇಕು ಎಂದು ಸಲಹೆ ಮಾಡಿದರು.

ರಾಜಕಾರಣದ ಉದ್ದೇಶಕ್ಕಾಗಿ, ಮುಂದಿನ‌ ಚುನಾವಣೆ ಗೆಲ್ಲಬೇಕು ಎನ್ನುವ ಕಾರಣಕ್ಕೆ ಜಾತಿ ಮತ್ತು ಧರ್ಮವನ್ನು ಅಡ್ಡ ತಂದಿದ್ದಾರೆ. ಇವರ ಆಡಳಿತವೇ ಇದ್ದರೆ ಈ ದೇಶ ಮುಂದಿನ ದಿನಗಳಲ್ಲಿ ಒಂದಾಗಿ ಉಳಿಯುವುದಿಲ್ಲ. ಬೊಮ್ಮಾಯಿ ಸಂಪುಟದ ಪ್ರಮುಖ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಅವರು, ಕೇಸರಿ ಬಾವುಟ ಏಕೆ ರಾಷ್ಟ್ರಧ್ವಜ ಅಗಬಾರದು ಎಂದು ಪ್ರಶ್ನಿಸುತ್ತಾರೆ. ಇವರಂತೆಯೇ ಮುಸ್ಲಿಮರು ಹಸಿರು ಬಾವುಟ ಹಾರಿಸುತ್ತೇವೆ ಎಂದರೆ ದೇಶ ಉಳಿಯುತ್ತದೆಯೇ? ಈ ದೇಶದಲ್ಲಿರುವ ಎಲ್ಲ ಧರ್ಮೀಯರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ಹಿಂದೂ, ಕ್ರೈಸ್ತ, ಮುಸ್ಲಿಂ, ಸಿಖ್ಖರ ವಂಶವಾಹಿಗಳ ಮೂಲ ಒಂದೇ ಎನ್ನುವುದನ್ನು ಮರೆಯಬೇಡಿ. ರಾಷ್ಟ್ರದಲ್ಲಿ ಶಾಂತಿ, ಪ್ರೀತಿ, ಪ್ರೇಮ ಬೆಳೆಸಿಕೊಂಡು ಹೋದರೆ ಮುಂದಿನ ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಅಧ್ಯಕ್ಷ ಎಚ್​.ಡಿ.ದೇವೇಗೌಡ, ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರ ಅಸಮಾಧಾನದ ವಿಚಾರ ಪ್ರಸ್ತಾಪಿಸಿದರು. ಕೆಲ ಕಾರ್ಯಕರ್ತರು ಹಿಂಸೆ ಕೊಡುತ್ತಾರೆ ಎನ್ನುವುದು ನನಗೆ ಗೊತ್ತಿದೆ. ಸಮಸ್ಯೆಯನ್ನು ಬಗೆಹರಿಸಲು ನಾನು ಪ್ರಯತ್ನಿಸುತ್ತೇನೆ. ಸಮಸ್ಯೆ ಸರಿಪಡಿಸಲು ಆಗದಿದ್ರೆ ಅವರ ಇಚ್ಛೆಯಂತೆ ನಡೆದುಕೊಳ್ಳಲಿ ಎಂದರು. ಕಾರ್ಯಕರ್ತರು ಮತ್ತು ನಾಯಕರ ನಡುವಿನ ಗೊಂದಲ ಪರಿಹರಿಸಲು ಪ್ರಯತ್ನಿಸುತ್ತೇನೆ. ಶಾಸಕರ ಮನಸ್ಸಿಗೆ ನೋವಾಗುವ ಕೆಲಸ ಮಾಡುವುದಿಲ್ಲ. ನನ್ನಿಂದ ಅವರ ಸಮಸ್ಯೆ ಪರಿಹರಿಸಲು ಆಗದಿದ್ದರೆ ಅವರ ಮನಸ್ಸಿಗೆ ಇಷ್ಟ ಬಂದ ರೀತಿ ಮಾಡಬಹುದು.

ಅರಿಸೀಕೆರೆ ಶಾಸಕ ಶಿವಲಿಂಗೇಗೌಡ ಸಮಾವೇಶದಲ್ಲಿ ಭಾಗವಹಿಸದಿರುವ ಬಗ್ಗೆ ಅಪಾರ್ಥ ಕಲ್ಪಿಸುವುದು ತಪ್ಪು. ಅರಸೀಕೆರೆಯಲ್ಲಿ ಒಕ್ಕಲಿಗರ ಸಂಖ್ಯೆ ಕಡಿಮೆಯಿದೆ. ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಂದಿದ್ದರು. ಹೀಗಾಗಿ ಅವರು ಇಲ್ಲಿಗೆ ಬಂದಿಲ್ಲ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು. ಅರಸೀಕೆರೆ ಸೂಕ್ಷ್ಮ ತಾಲ್ಲೂಕು. ನಾನ್ಯಾಕೆ ಶಿವಲಿಂಗೇಗೌಡರ ವರ್ತನೆಯ ಬಗ್ಗೆ ದೂಷಣೆ ಮಾಡಲಿ. ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರ ಪಕ್ಷನಿಷ್ಠೆಯ ಬಗ್ಗೆ ನಾನೆಂದೂ ಮಾತನಾಡಿಲ್ಲ. ನಮ್ಮಲ್ಲಿರುವ‌ ಕೆಲವರು ಮನಸ್ಸಿಗೆ ನೋವುಂಟು ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಜೆಡಿಎಸ್ ರಾಜ್ಯ ಘಟದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಎಚ್.ಡಿ.ರೇವಣ್ಣ, ಕೆ.ಎಸ್.ಲಿಂಗೇಶ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ವಿಧಾನಪರಿಷತ್ ಚುನಾವಣಾ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ ಪಕ್ಷ ಸಂಘಟನೆಗಾಗಿ ಕಾರ್ಯಕರ್ತರಿಂದ ಸಲಹೆಗಳನ್ನೂ ಕೋರಲಾಯಿತು.

ಇದನ್ನೂ ಓದಿ: ಬಿಜೆಪಿ ವಿರುದ್ಧ ತೀವ್ರತೆ ಕಳೆದುಕೊಂಡ ಜೆಡಿಎಸ್ ಹೋರಾಟ: ವೈಎಸ್​ವಿ ದತ್ತ ಅಸಮಾಧಾನ
ಇದನ್ನೂ ಓದಿ: ಶಿಕ್ಷಣಕ್ಕೆ ಕೊಡೋಕೆ ದುಡ್ಡಿಲ್ಲ, ಸರ್ಕಾರ ಪಾಪರ್ ಆಗಿದೆ ಅಂತ ಹೇಳಿಬಿಡ್ಲಿ: ಜೆಡಿಎಸ್ ನಾಯಕ ರೇವಣ್ಣ ಸವಾಲು