
ಹಾಸನ, ಸೆಪ್ಟೆಂಬರ್ 04: ಕೇಂದ್ರ ಸರ್ಕಾರದ ‘ಪಿಎಂಇಜಿಪಿ’ ಯೋಜನೆಯಡಿ ಶೇಕಡಾ 35 ರಿಂದ 50 ರಷ್ಟು ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ರೈತರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೆಬೀಡು ಭಾಗದಲ್ಲಿ ಬೆಳಕಿಗೆ ಬಂದಿದೆ.ವಂಚನೆ ಎಸಗಿದ ಆರೋಪಿಯನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಶಂಕರಪ್ಪ (44) ಎಂದು ಗುರುತಿಸಲಾಗಿದೆ. ಈತ ತಾನು ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಒಂದೂವರೆ ವರ್ಷದ ಹಿಂದೆ ಹಳೆಬೀಡು ಭಾಗಕ್ಕೆ ಎಂಟ್ರಿ ಕೊಟ್ಟಿದ್ದ.
ಸ್ಥಳೀಯ ಮುಖಂಡ ಸೋಮಣ್ಣ ಎಂಬುವವರನ್ನು ಪರಿಚಯ ಮಾಡಿಕೊಂಡ ಶಂಕರಪ್ಪ, ಅವರ ಮೂಲಕ ನೂರಾರು ರೈತರನ್ನು ಸಂಪರ್ಕಿಸಿದ್ದ. 50 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಸಾಲ ಕೊಡಿಸುವುದಾಗಿ ಮತ್ತು ಅದಕ್ಕೆ ಭಾರೀ ಸಬ್ಸಿಡಿ ಸಿಗಲಿದೆ ಎಂದು ಆಸೆ ತೋರಿಸಿದ್ದ. ಸಾಲದ ಆಸೆಯಿಂದ ರೈತರು ತಮ್ಮಲ್ಲಿದ್ದ ಹಸುಗಳನ್ನು ಮಾರಿ ಹಾಗೂ ಕೈಸಾಲ ಮಾಡಿ ಈತನಿಗೆ ಲಕ್ಷಾಂತರ ರೂಪಾಯಿ ಕಮಿಷನ್ ನೀಡಿದ್ದರು.
ಹಣ ವಸೂಲಿ ಮಾಡಿದ ನಂತರ ಆರೋಪಿ ಎಸ್ಕೇಪ್ ಆಗಿದ್ದ. ಸಾಲವೂ ಸಿಗದೆ, ಹಣವೂ ಕೈಸೇರದೆ ತೀವ್ರ ಆಘಾತಕ್ಕೊಳಗಾದ ಸ್ಥಳೀಯ ಮುಖಂಡ ಸೋಮಣ್ಣ ಹಾಗೂ ಈಶ್ವರಪ್ಪ ಎಂಬ ರೈತರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಹಳೆಬೀಡು ಪೊಲೀಸ್ ಠಾಣೆಯಲ್ಲಿ ಒಟ್ಟು 72 ಜನರು ದೂರು ದಾಖಲಿಸಿದ್ದು, ಸುಮಾರು 92 ಲಕ್ಷ ರೂ. ವಂಚನೆಯಾಗಿದೆ ಎಂದು ಆರೋಪಿಸಿದ್ದಾರೆ. ಮೂರು ವಿಳಾಸಗಳ ಆಧಾರ್ ಕಾರ್ಡ್ ಹೊಂದಿರುವ ಈತನ ವಿರುದ್ಧ ಚಿಕ್ಕಬಳ್ಳಾಪುರದಲ್ಲೂ ಪ್ರಕರಣ ದಾಖಲಾಗಿದೆ. ಪ್ರಸ್ತುತ ಹಳೆಬೀಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ತಮಗೆ ನ್ಯಾಯ ಒದಗಿಸಬೇಕೆಂದು ನೊಂದ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:39 am, Fri, 4 September 26