ಹಾಸನ: ಪ್ರೀತಿಸಿ ಕೈ ಕೊಟ್ಟ ಪ್ರೇಮಿ; ನೊಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು

ಹುಡುಗ-ಹುಡುಗಿಯರು ಕಾಲೇಜು ಮೆಟ್ಟಿಲು ಹತ್ತಿದ್ರೆ ಸಾಕು ಸ್ನೇಹ, ಪ್ರೀತಿ ಎಂದು ಸುತ್ತಾಡೋದು, ಕೊನೆಗೆ ಆತ್ಮಹತ್ಯೆಗೆ ಯತ್ನಮಾಡಿ ಬದುಕನ್ನೇ ಹಾಳು ಮಾಡಿಕೊಳ್ಳುವ ಸಾಕಷ್ಟು ಘಟನೆಗಳು ನಮ್ಮ ನಡುವೆ ನಡೆಯುತ್ತಿರುತ್ತವೆ. ಇಲ್ಲೊಬ್ಬ ಖತರ್ನಾಕ್ ಹುಡುಗ, ಒಂದೇ ಕಾಲೇಜಿನ ಇಬ್ಬರು ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಂಡಿದ್ದ. ಈ ವಿಷಯ ಅವಳಿಗೆ ತಿಳಿಯುತ್ತಿದ್ದಂತೆ, ಪ್ರೀತಿ ಕೈ ಕೊಟ್ಟ ನೋವಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸತತ ಎಂಟು ದಿನಗಳ ಬಳಿಕ ಆ ಯುವತಿ ಮೃತಪಟ್ಟಿದ್ದು, ಇದೀಗ ಪ್ರೀತಿಸಿ ಮೋಸಮಾಡಿ ಎಸ್ಕೇಪ್ ಆದವನ ವಿರುದ್ದ ಕ್ರಮಕ್ಕಾಗಿ ಕುಟುಂಬ ಸದಸ್ಯರು ಆಗ್ರಹಸಿದ್ದಾರೆ.

ಹಾಸನ: ಪ್ರೀತಿಸಿ ಕೈ ಕೊಟ್ಟ ಪ್ರೇಮಿ; ನೊಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು
ಮೃತ ಯುವತಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 14, 2023 | 5:41 PM

ಹಾಸನ, ಅ.14: ಕಾಲೇಜು ಮೆಟ್ಟಿಲು ಹತ್ತಿದ್ರೆ ಸಾಕು ಕೆಲ ಹುಡುಗ ಹುಡುಗಿಯರು ಪ್ರೀತಿ ಪ್ರೇಮ ಎಂದು ಕಳೆದು ಹೋಗಿ ಬಿಡುತ್ತಾರೆ. ಅದರಂತೆ ಹಾಸನ(Hassan) ಜಿಲ್ಲೆಯ ಬೇಲೂರು ತಾಲ್ಲೂಕಿನ ಬೆಳ್ಳೋಟ್ಟೆ ಗ್ರಾಮದ ಆಶಾ(20) ಎಂಬ ಯುವತಿ, ಪ್ರೀತಿಯ ಬಲೆಗೆ ಬಿದ್ದು, ಲವ್ ಬ್ರೇಕಪ್ (Love Breakup)  ಆದ ನೋವಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ(ಅ.13) ಮೃತಪಟ್ಟಿದ್ದಾಳೆ. ಬೇಲೂರಿನ ಸರ್ಕಾರಿ ವೈಡಿಡಿ ಪದವಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಪದವಿ ಓದುತ್ತಿದ್ದ ಆಶಾ ಅವರು, ತನ್ನ ಪಿಯುಸಿ ಕ್ಲಾಸ್​ಮೇಟ್ ಮಂಜುನಾಥ್ ಜೊತೆಗೆ ಗೆಳೆತನ ಮಾಡಿದ್ದರು. ಪಿಯುಸಿಯಲ್ಲಿ ಸ್ನೇಹಿತರಾಗಿದ್ದವರು ಪದವಿಗೆ ಬರೋ ವೇಳೆಗೆ ಲವರ್​ಗಳಾಗಿದ್ರು, ಹಾಸನದ ಪದವಿ ಕಾಲೇಜಿಗೆ ಸೇರಿಕೊಂಡಿದ್ದ ಆಲೂರು ಮೂಲದ ಮಂಜುನಾಥ್ ಆಶಾಗಾಗಿ , ತಾನು ಮೊದಲು ಸೇರಿದ್ದ ಕಾಲೇಜನ್ನೆ ಬದಲಾಯಿಸಿ ಬೇಲೂರು ಕಾಲೇಜಿಗೆ ಸೇರಿಕೊಂಡಿದ್ದನಂತೆ.

ಆದರೆ, ಆಶಾಳ ಜೊತೆಗೆ ಗೆಳೆತನ ಇಟ್ಟಿಕೊಂಡೇ ಈ ಕತರ್ನಾಕ್ ಮಂಜುನಾಥ್, ಬೇರೊಬ್ಬ ಹುಡುಗಿ ಜೊತೆ ಲವ್ವಿ-ಡವ್ವಿ ಶುರುವಿಟ್ಟುಕೊಂಡಿದ್ದಾನೆ. ಈ ವಿಚಾರ ಗೊತ್ತಾಗುತ್ತಲೆ ಆಶಾ, ಆ ಹುಡುಗಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾಳೆ. ಮಂಜುನಾಥ್​ನನ್ನೂ ಪ್ರಶ್ನೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾಳೆ. ‘ನನ್ನ ಬಿಟ್ಟು ಅವಳನ್ನ ಅದೇಗೆ ಇಷ್ಟಪಡ್ತೀಯ ನೋಡೋಣ ಎಂದು ಜಗಳ ಮಾಡಿದ್ದಾಳೆ. ನೀನು ನನ್ನಿಂದ ದೂರ ಆಗಬೇಕು, ಇಲ್ಲ ಎಂದರೆ ನಮ್ಮಿಬ್ಬರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಈ ಕಿರಾತಕ ಮಂಜುನಾಥ್ ಬೆದರಿಸಿದ್ದನಂತೆ. ಇದರಿಂದ ಆಘಾತಗೊಂಡ ಆಶಾ ಅವರು ಅಕ್ಟೋಬರ್ 6ರಂದು ಕಾಲೇಜು ಬಳಿಯೇ ವಿಷ ಕುಡಿದು ಅಸ್ವಸ್ಥಳಾಗಿದ್ದಳು.

ಇದನ್ನೂ ಓದಿ:ಪ್ರೇಮಿಗಳಿಗೆ ಪೋಷಕರೇ ವಿಲನ್: ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ, ಯುವತಿ ಕುಟುಂಬ ಜೈಲು ಪಾಲು

ಎಂಟು ದಿನಗಳ ಬಳಿಕ ಯುವತಿ ಸಾವು

ಇನ್ನು ಈ ವಿಚಾರ ತಿಳಿದ ಮಂಜುನಾಥ್​ನೇ ಆಕೆಯನ್ನ ಆಸ್ಪತ್ರೆಗೆ ಸೇರಿಸಿ ಬಳಿಕ ಅಲ್ಲಿಂದ ಹೊರಟು ಹೋಗಿದ್ದಾನೆ. ಎಂಟು ದಿನಗಳು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಆಶಾ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮುಂಜಾನೆ ಮೃತಪಟ್ಟಿದ್ದು, ಮಗಳ ಸಾವಿಗೆ ಕಾರಣವಾದವನ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ಹೆತ್ತವರು ಆಗ್ರಹಿಸಿದ್ದಾರೆ. ಬೇಲೂರಿನ ಬೆಳ್ಳೋಟ್​ ಗ್ರಾಮದ ರಾಮಯ್ಯಗೆ ಮೂವರು ಹೆಣ್ಣುಮಕ್ಕಳು ಮಕ್ಕಳು ಚಿಕ್ಕವರಿರುವಾಗಲೇ ಪತ್ನಿ ಮೃತಪಟ್ಟಿದ್ದಾರೆ. ಕೂಲಿ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಇಬ್ಬರು ದೊಡ್ಡ ಮಕ್ಕಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಕೊನೆಯ ಮಗಳು ಚೆನ್ನಾಗಿ ಓದಲಿ ಎಂದು ಅಕ್ಕಂದಿರಿಬ್ಬರೂ ಕೂಡ ತಂಗಿಗೆ ಸಹಾಯ ಮಾಡಿದ್ದಾರೆ. ಚೆನ್ನಾಗಿಯೇ ಓದುತ್ತಿದ್ದ ಆಶಾ ಅವರು ಮಂಜುನಾಥ್​ನ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ.

ಆಶಾ ಜೊತೆಗೆ ಗೆಳೆತನ ಇಟ್ಟುಕೊಂಡೆ ಮತ್ತೊಬ್ಬಳ ಜೊತೆ ಸುತ್ತಾಡೋಕೆ ಶುರುಮಾಡಿರುವ ವಿಚಾರ ಹೇಗೋ ಆಶಾ ಕಿವಿಗೆ ಬಿದ್ದಿದೆ. ಈ ವಿಚಾರ ಗೊತ್ತಾಗುತ್ತಲೇ ಆ ಹುಡುಗಿ ಜೊತೆಗೆ ಆಶಾ ಜಗಳ ಮಾಡಿಕೊಂಡಿದ್ದಾಳೆ. ಆದ್ರೆ, ಮಂಜುನಾಥ್ ಕೂಡ, ತನ್ನನ್ನು ಬಿಟ್ಟು ಅವಳ ಜೊತೆಗೆ ನಿಂತಾಗ, ತಾನು ಮೋಸ ಹೋಗಿರುವ ಅರಿವಾಗಿದೆ. ಇದರಿಂದ ನೊಂದ ಆಶಾ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾಳೆ. ಅಕ್ಟೋಬರ್ 6ರಂದು ಕಾಲೇಜು ಸಮೀಪ ಮಂಜುನಾಥ್ ಜೊತೆಗೆ ಜಗಳಮಾಡಿಕೊಂಡು ಅಲ್ಲಿಯೇ ವಿಷ ಸೇವನೆ ಮಾಡಿದ್ದು, ಕೂಡಲೆ ಆಕೆಯನ್ನ ಮಂಜುನಾಥ್ ಬೇಲೂರಿನ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ.

ಇದನ್ನೂ ಓದಿ:ಕೋಲಾರ: ಎರಡು ತಿಂಗಳಿಂದ ವೇತನ ನೀಡಿಲ್ಲವೆಂದು ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ; ಇಲ್ಲಿದೆ ವಿವರ

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಶಿಫ್ಟ್ ಮಾಡಲಾಗಿದೆ. ಆದ್ರೆ, ತೀವ್ರ ಅಸ್ವಸ್ಥಗೊಂಡಿದ್ದ ಆಶಾ ಚಕಿತ್ಸೆ ಫಲಕಾರಿಯಾಗದೆ  ಕೊನೆಯುಸಿರೆಳೆದಿದ್ದಾಳೆ, ಪ್ರೀತಿಸೋದಾಗಿ ನಂಬಿಸಿ ಹೀಗೆ ಮೋಸ ಮಾಡಿದ ಮಂಜುನಾಥ್ ವಿರುದ್ದ ಕಠಿಣ ಕ್ರಮ ಆಗಬೇಕು. ಕೇವಲ ಲವ್ ಬ್ರೇಕಪ್ ಆಗಿದ್ದಕ್ಕೆಲ್ಲ ನನ್ನ ತಂಗಿ ಆತ್ಮಹತ್ಯೆ ಮಾಡಿಕೊಳ್ಳೋ ಮನಸ್ಥಿತಿಯವಳಲ್ಲ. ಬೇರೆ ಏನೋ ಆಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಸಹೋದರಿಯರು ಆಗ್ರಹಿಸಿದ್ದಾರೆ. ಈ ಕುರಿತು ಬೇಲೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಕೂಡಲೆ ಆತನನ್ನ ಬಂಧಿಸಿ, ನಮಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ