ರಾಜ್ಯದ ಹಲವೆಡೆ ವರುಣಾರ್ಭಟ: ತಡೆಗೋಡೆ ಕುಸಿದು, ಮರ ಬಿದ್ದು ಮನೆಗಳಿಗೆ ಹಾನಿ

Karnataka Rain: ಹಾಸನ ಮತ್ತು ಬೆಳಗಾವಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ತಡೆಗೋಡೆ ಹಾಗೂ ಬೃಹತ್ ಮರ ಕುಸಿದು ಹಲವು ಮನೆಗಳಿಗೆ ಹಾನಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಆದರೆ ಅದೃಷ್ಟವಶಾತ್​​ ಯಾವುದೇ ಜೀವಹಾನಿ ಸಂಭವಿಸಿಲ್ಲ. ಈ ನಡುವೆ ಮುನ್ನೆಚ್ಚರಿಕಾ ಕ್ರಮವಾಗಿ ಖಾನಾಪುರದ ಡೆಲ್ಟಾ ಫಾಲ್ಸ್‌ಗೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶಿಸಿದೆ.

ರಾಜ್ಯದ ಹಲವೆಡೆ ವರುಣಾರ್ಭಟ: ತಡೆಗೋಡೆ ಕುಸಿದು, ಮರ ಬಿದ್ದು ಮನೆಗಳಿಗೆ ಹಾನಿ
ಸಕಲೇಶಪುರದಲ್ಲಿ ತಡೆಗೋಡೆ ಕುಸಿದು ಮನೆಗಳಿಗೆ ಹಾನಿ
Image Credit source: Tv9 Kannada

Updated on: Jul 05, 2026 | 8:48 AM

ಮುಖ್ಯಾಂಶಗಳು

  • ಮಳೆ ಅಬ್ಬರಕ್ಕೆ ಸಕಲೇಶಪುರ, ಬೆಳಗಾವಿಯಲ್ಲಿ ಅವಾಂತರ
  • ತಡೆಗೋಡೆ ಕುಸಿದು, ಮರ ಬಿದ್ದು ಮನೆಗಳಿಗೆ ತೀವ್ರ ಹಾನಿ
  • ಮುನ್ನೆಚ್ಚರಿಕಾ ಕ್ರಮವಾಗಿ ಡೆಲ್ಟಾ ಫಾಲ್ಸ್​​ ಎಂಟ್ರಿ ಬ್ಯಾನ್​

ಹಾಸನ/ಬೆಳಗಾವಿ, ಜುಲೈ 05: ಮುಂಗಾರು ಮಳೆಯ ತೀವ್ರ ಕೊರತೆಯ ನಡುವೆಯೂ ಕರ್ನಾಟಕದ ಹಲವೆಡೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ತೀವ್ರ ಗಾಳಿ ಮಳೆ ಹಿನ್ನೆಲೆ ಬೃಹತ್ ತಡೆಗೋಡೆ ಕುಸಿದು 2 ಮನೆಗಳು ಜಖಂಗೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಅರೇಹಳ್ಳಿ ಬೀದಿಯ ಡಾಲರ್ಸ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸುತ್ತಿದ್ದ ಬಡಾವಣೆಯಲ್ಲಿ ಅವಘಡ ನಡೆದಿದ್ದು, ಮಧು ಮತ್ತು ಅಬ್ದುಲ್ ಮುನಾಫ್ ಎಂಬುವವರ ಮನೆಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೃಹತ್ ಹುಣಸೆ ಮರ ಬಿದ್ದು ಮನೆಗಳಿಗೆ ಹಾನಿ

Tree Collaps In Belagavi

ಮನೆಗಳ ಮೇಲೆ ಬಿದ್ದ ಹುಣಸೆ ಮರ

ಬೆಳಗಾವಿ ನಗರದಲ್ಲಿ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಗೆ ಅವಾಂತರಗಳೇ ನಡೆದಿದ್ದು, ಬೃಹತ್ ಹುಣಸೆ ಮರ ಬಿದ್ದು ನಾಲ್ಕು ಮನೆಗಳಿಗೆ ಹಾನಿಯಾಗಿರುವ ಘಟನೆ ಸಬಾಗ್ ನ‌ ಉಪ್ಪಾರ ಗಲ್ಲಿಯಲ್ಲಿ ನಡೆದಿದೆ. ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದು, ಮನೆಯ ಸದಸ್ಯರು ಗ್ರೇಟ್​​ ಎಸ್ಕೇಪ್​​ ಆಗಿದ್ದಾರೆ. ಮರ ಧರೆಗುರುಳುವ ವೇಳೆ ಅಲ್ಲೇ ಕೆಳಗೆ ಮಹಿಳೆಯೋರ್ವರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಘಟನೆಯಲ್ಲಿ ಅನಿಲ್ ಮುಟ್ಕೇಕರ್ ಎಂಬವರ ಮನೆಯ ಗೋಡೆ ಕುಸಿದಿದ್ದರೆ, ಆನಂದ್ ಭದ್ವಾಂಕರ್, ಏಕನಾಥ್ ಭದ್ವಾಂಕರ್, ಪ್ರಶಾಂತ್ ಗೋರ್ಲೆ ಮನೆಗಳ ಮುಂಭಾಕ್ಕೆ ಹಾನಿಯಾಗಿದೆ. ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!

ಡೆಲ್ಟಾ ಫಾಲ್ಸ್​​ಗೆ ಪ್ರವಾಸಿಗರಿಗೆ ನಿರ್ಬಂಧ

No Entry to Delta Falls: ಪ್ರವಾಸಿಗರ ಹುಚ್ಚಾಟ ಹಿನ್ನೆಲೆ ಡೆಲ್ಟಾ ಫಾಲ್ಸ್ ಪ್ರವೇಶ ನಿಷೇಧಿಸಿದ ಅರಣ್ಯ ಇಲಾಖೆ|#TV9D

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಆರ್ಭಟ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಹೊರವಲಯದಲ್ಲಿರುವ ಡೆಲ್ಟಾ ಫಾಲ್ಸ್​​ಗೆ ಜೀವಕಳೆ ಬಂದಿದೆ. ಈ ನಡುವೆ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವ ಕಾರಣ ಫಾಲ್ಸ್ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಬೆಳಗಾವಿ-ಗೋವಾ ಮುಖ್ಯರಸ್ತೆ ಮೂಲಕ ಫಾಲ್ಸ್​ಗೆ ಪ್ರವಾಸಿಗರು ಹೋಗ್ತಿದ್ದ ಕಾರಣ ಜಲಪಾತಕ್ಕೆ ಪ್ರವೇಶಿಸುವ ರಸ್ತೆಯಲ್ಲೇ ಅರಣ್ಯ ಸಿಬ್ಬಂದಿ ಕಾವಲಿಗೆ ನಿಂತಿದ್ದಾರೆ. ಜಲಪಾತಕ್ಕೆ ಸಾರ್ವಜನಿಕರ ನಿಷೇಧ ಎಂದು ಬೋರ್ಡ್ ಅಳವಡಿಕೆ ಮಾಡಲಾಗಿದೆ. ಕಾಲ್ನಡಿಗೆಯಿಂದ ತೆರಳುತ್ತಿದ್ದ ರಸ್ತೆಯೂದ್ದಕ್ಕೂ ಗುಂಡಿ ತೋಡಿ ಬಂದ್ ಮಾಡಲಾಗಿದ್ದು, ನಿರಂತರವಾಗಿ ಗಸ್ತು ನಡೆಸಲಾಗ್ತಿದೆ. ಇಷ್ಟಾಗಿಯೂ ಕಣ್ತಪ್ಪಿಸಿ ಜಲಪಾತಕ್ಕೆ ಹೋದ್ರೆ ಎಫ್ಐಆರ್ ದಾಖಲಿಸುವುದಾಗಿ ಖಡಕ್​ ಎಚ್ಚರಿಕೆ ನೀಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:41 am, Sun, 5 July 26

Follow Us