ಪ್ರಜ್ವಲ್ ವಿಡಿಯೋ ಪ್ರಕರಣ: ಕೇಸ್ ದಾಖಲಾದರೂ ಕಾಂಗ್ರೆಸ್​ ಕಾರ್ಯಕರ್ತರ ಬಂಧಿಸದ ಎಸ್​ಐಟಿ, ಅನುಮಾನ ಹುಟ್ಟಿಸಿದ ನಡೆ

| Updated By: ಗಣಪತಿ ಶರ್ಮ

Updated on: May 13, 2024 | 10:50 AM

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಲೀಕ್ ಪ್ರಕರಣದಲ್ಲಿ ಪ್ರಮುಖ ರೂವಾರಿಗಳು ಎನ್ನಲಾದ ಕಾರ್ತಿಕ್‌ ಗೌಡ ಹಾಗೂ ನವೀನ್‌ ಗೌಡ ರಕ್ಷಣೆಗೆ ಸರ್ಕಾರ ಮುಂದಾಗಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು, ಮುಖಂಡರ ಜೊತೆ ಗುರುತಿಸಿಕೊಂಡ ನಾಲ್ವರ ವಿರುದ್ಧ ಕ್ರಮ ಆಗದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಪ್ರಜ್ವಲ್ ವಿಡಿಯೋ ಪ್ರಕರಣ: ಕೇಸ್ ದಾಖಲಾದರೂ ಕಾಂಗ್ರೆಸ್​ ಕಾರ್ಯಕರ್ತರ ಬಂಧಿಸದ ಎಸ್​ಐಟಿ, ಅನುಮಾನ ಹುಟ್ಟಿಸಿದ ನಡೆ
ಪ್ರಜ್ವಲ್ ರೇವಣ್ಣ
Follow us on

ಹಾಸನ, ಮೇ 13: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆದರೆ, ಪ್ರಕರಣ ಸಂಬಂಧ ಯಾರೆಲ್ಲ ಬಂಧನಕ್ಕೊಳಗಾಗಿದ್ದಾರೆಯೋ? ಯಾರ ವಿರುದ್ಧ ಎಲ್ಲ ದೂರು ದಾಖಲಾಗಿದೆಯೋ ಆ ವಿವರಗಳನ್ನು ನೋಡಿದರೆ ಎಸ್​ಐಟಿ (SIT) ಮೇಲೆ ಸಾಕಷ್ಟು ಅನುಮಾನಗಳು ಮೂಡುವಂತಾಗಿದೆ. ಜೆಡಿಎಸ್, ಬಿಜೆಪಿಯ ಆರೋಪಿಗಳ ಮೇಲೆ ಮಾತ್ರ ಸರ್ಕಾರ ಹಾಗೂ ಎಸ್​ಐಟಿ ಕ್ರಮ ಕೈಗೊಳ್ಳುತ್ತಿವೆಯಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ಪ್ರಕರಣದಲ್ಲಿ ವಿಡಿಯೋ ಬಹಿರಂಗಪಡಿಸಿದ ಆರೋಪದಲ್ಲಿ ಕೇಸ್ ದಾಖಲಾಗಿದ್ದರೂ ಕಾಂಗ್ರೆಸ್ ಕಾರ್ಯಕರ್ತರ (Congress Workers) ಮೇಲೆ ಕ್ರಮ ಕೈಗೊಂಡಿಲ್ಲ.

ಪ್ರಕರಣದ ಪ್ರಮುಖ ರೂವಾರಿಗಳೆನ್ನಲಾದ ಕಾರ್ತಿಕ್‌ಗೌಡ ಹಾಗೂ ನವೀನ್‌ಗೌಡ ಮೇಲೆ ಈ ವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಪೆನ್ ಡ್ರೈವ್ ರೂವಾರಿಯೇ ಕಾರ್ತಿಕ್‌ಗೌಡ ಎಂಬ ಆರೋಪ ಇದ್ದರೂ, ಎಫ್‌ಐಆರ್ ದಾಖಲಾಗಿ 20 ದಿನವಾದರೂ ಬಂಧಿಸದೇ ಇರುವುದು ಅನುಮಾನ ಹೆಚ್ಚಿಸಿದೆ. ಸರ್ಕಾರ ನಡೆಯ ಮೇಲೆ ಸಾರ್ವಜನಿಕರಿಗೆ ಅ‌ನುಮಾನ ಮೂಡುವಂತಾಗಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ. ಶಾಸಕ ಹೆಚ್​​ಡಿ ರೇವಣ್ಣ ಜೈಲು ಪಾಲಾಗಿದ್ದಾರೆ. ಪ್ರಕರಣದಲ್ಲಿ ಬಿಜೆಪಿ ಮುಖಂಡ ದೇವರಾಜೇಗೌಡ ಅವರನನೂ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಡಿ ಬಂಧಿಸಲಾಗಿದೆ. ವಿಡಿಯೋ ಹಂಚಿಕೆ ಮಾಡಿದ್ದಾರೆಂಬ ಆರೋಪದಡಿ ಬಿಜೆಪಿಯ ಚೇತನ್, ಲಿಖಿತ್ ಅವರನ್ನೂ ಎಸ್​​ಐಟಿ ಬಂಧಿಸಿದೆ. ಇಷ್ಟೆಲ್ಲಾ ಆದರೂ ಕಾರ್ತಿಕ್, ನವೀನ್ ಗೌಡ, ಪುಟ್ಟರಾಜ್ ಅಲಿಯಾಸ್ ಪುಟ್ಟಿ, ಚೇತನ್ ಬಂಧನ ಆಗದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಈ ಬೆಳವಣಿಗೆಗಳು ಕಾರ್ತಿಕ್‌ ಗೌಡ ಹಾಗೂ ನವೀನ್‌ ಗೌಡ ರಕ್ಷಣೆಗೆ ಸರ್ಕಾರ ಮುಂದಾಗಿದೆಯಾ ಎಂಬ ಅನುಮಾನ ಹುಟ್ಟುಹಾಕಿದೆ. ಕಾಂಗ್ರೆಸ್ ನಾಯಕರು, ಮುಖಂಡರ ಜೊತೆ ಗುರುತಿಸಿಕೊಂಡ ನಾಲ್ವರ ವಿರುದ್ಧ ಕ್ರಮ ಆಗದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಪ್ರತಿ ದಿನ ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ

ಈ ಮಧ್ಯೆ, ಹೆಚ್​ಡಿ ರೇವಣ್ಣ ವಿರುದ್ಧದ ಕಿಡ್ನ್ಯಾಪ್ ಪ್ರಕರಣದ ಸಂತ್ರಸ್ತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ವಿಚಾರ ಇದೀಗ ಸದ್ದು ಮಾಡುತ್ತಿದೆ. ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ. ಪರಮೇಶ್ವರ, ಪ್ರತಿ ದಿನವೂ ಪ್ರತಿಕ್ರಿಯೆ ನೀಡಲು ಆಗಲ್ಲ. ಅದನ್ನೆಲ್ಲಾ ಎಸ್​ಐಟಿ ನೋಡಿಕೊಳ್ಳುತ್ತದೆ ಎಂದಿದ್ದಾರೆ. ತಮ್ಮನ್ನು ಯಾರೂ ಅಪಹರಣ ಮಾಡಿಲ್ಲ ಎಂದು ಸಂತ್ರಸ್ತ ಮಹಿಳೆ ಭಾನುವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು.

ಎಸ್ಐಟಿಗೇ ಸವಾಲೆಸೆದನಾ ನವೀನ್ ಗೌಡ?

ಪ್ರಕರಣದ ಪ್ರಮುಖ ರೂವಾರಿಗಳಲ್ಲೊಬ್ಬನಾದ ನವೀನ್ ಗೌಡ ಫೇಸ್​​​ಬುಕ್​​ನಲ್ಲಿ ಪೋಸ್ಟ್ ಮಾಡಿದ್ದು, ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಎ ಮಂಜುಗೆ ಕೊಟ್ಟಿದ್ದೆ. ಹೆಚ್​ಡಿ ಕುಮಾರಸ್ವಾಮಿ, ಪೆನ್ ಡ್ರೈವ್ ಹಂಚಿಕೆ ಹಿಂದೆ ಮಹಾನಾಯಕನ ಕೈವಾಡ ಇದೆ ಅಂದಿದ್ದರು. ಆ ಮಹಾನಾಯಕ ಅರಕಲಗೂಡು ಎಂಎಲ್ಎ ಎ ಮಂಜುನಾ ಎಂದು ಫೇಸ್​​​ಬುಕ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಹೆಚ್​​​ಡಿ ರೇವಣ್ಣ ಕಿಡ್ನಾಪ್​ ಕೇಸ್​​​ಗೆ ಬಿಗ್ ಟ್ವಿಸ್ಟ್​​: ನನ್ನನ್ನು ಯಾರೂ ಅಪಹರಿಸಿರಲಿಲ್ಲ ಎಂದ ಸಂತ್ರಸ್ತೆ

ಏಪ್ರಿಲ್ 20 ರಂದು ನನಗೆ ರಸ್ತೆಯಲ್ಲಿ ಸಿಕ್ಕಿದ್ದ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕರಾದ ಎ. ಮಂಜು ಅವರಿಗೆ ಏಪ್ರಿಲ್ 21 ರಂದು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ನೀಡಿದ್ದೇನೆ. ಕುಮಾರಸ್ವಾಮಿ ಅವರು ಹೇಳಿದ ಹಾಗೆ ವಿಡಿಯೋ ವೈರಲ್ ಹಿಂದೆ ಇರುವ ಮಹಾ ನಾಯಕ ಅರಕಲಗೂಡು ಶಾಸಕರೇ ಆಗಿರಬಹುದು ಎಂದು ಆತ ಬರೆದುಕೊಂಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ