AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hassan News: ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತು ಮನೆ ಒಡತಿ ಆತ್ಮಹತ್ಯೆ; ಮಗಳ ಸಾವಿನ ಸುದ್ದಿ ಕೇಳಿ ಸಾವನ್ನಪ್ಪಿದ ತಾಯಿ

ಮಗಳ ಸಾವಿನ ಸುದ್ದಿ ಕೇಳಿ ಆಕೆಯ ತಾಯಿಯೂ ಸಾವನ್ನಪ್ಪಿದ ಘಟನೆ ಹಾಸನ ಹೊರವಲಯದ ದಾಸರಕೊಪ್ಪಲಿನಲ್ಲಿ ನಡೆದಿದೆ. ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತು, ಮನೆ ಮಾಲಕಿ 2 ದಿನದ ಹಿಂದೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸುದ್ದಿಯನ್ನ ಕೇಳಿದ ಆಕೆಯ ತಾಯಿ ಆಘಾತದಿಂದ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.

Hassan News: ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತು ಮನೆ ಒಡತಿ ಆತ್ಮಹತ್ಯೆ; ಮಗಳ ಸಾವಿನ ಸುದ್ದಿ ಕೇಳಿ ಸಾವನ್ನಪ್ಪಿದ ತಾಯಿ
ಮೃತ ತಾಯಿ, ಮಗಳು
ಕಿರಣ್ ಹನುಮಂತ್​ ಮಾದಾರ್
|

Updated on: Jun 22, 2023 | 11:57 AM

Share

ಹಾಸನ: ಮಗಳ ಸಾವಿನ ಸುದ್ದಿ ಕೇಳಿ ಆಕೆಯ ತಾಯಿಯೂ ಸಾವನ್ನಪ್ಪಿದ ಘಟನೆ ಹಾಸನ(Hassan)ಹೊರವಲಯದ ದಾಸರಕೊಪ್ಪಲಿನಲ್ಲಿ ನಡೆದಿದೆ. ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತು, ಮನೆ ಮಾಲಕಿ 2 ದಿನದ ಹಿಂದೆ ಕೀಟನಾಶಕ ಸೇವಿಸಿ ಲಲಿತಾ(55) ಆತ್ಮಹತ್ಯೆ(suicide) ಮಾಡಿಕೊಂಡಿದ್ದರು. ಈ ಸುದ್ದಿಯನ್ನ ಕೇಳಿದ ಆಕೆಯ ತಾಯಿ ಲಕ್ಷ್ಮಮ್ಮ(75) ಆಘಾತದಿಂದ ಸಾವನ್ನಪ್ಪಿದ್ದಾಳೆ. ದಾಸರಕೊಪ್ಪಲಿನಲ್ಲಿ ಬಾಡಿಗೆ ಮನೆ ಹೊಂದಿರುವ ಮೃತ ಲಲಿತಾ ಮೇಲ್ಭಾಗದ ಮನೆಗಳನ್ನು ಬಾಡಿಗೆ & ಭೋಗ್ಯಕ್ಕೆ ನೀಡಿದ್ದರು. ಅವರ ಕಿರುಕುಳಕ್ಕೆ ಬೇಸತ್ತು ಇದೀಗ ಲಲಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹಾಸನ ಹೊರವಲಯದ ದಾಸರಕೊಪ್ಪಲಿನಲ್ಲಿ ಮೃತ ಲಲಿತಮ್ಮ ಹಾಗು ಪತಿ ನಾಗರಾಜ್ ಬಾಡಿಗೆ ಮನೆಯನ್ನ ಹೊಂದಿದ್ದರು. ಮೇಲ್ಭಾಗದ ಮನೆಗಳನ್ನು ಬಾಡಿಗೆಗೆ ಮತ್ತು ಭೋಗ್ಯಕ್ಕೆ ನೀಡಿದ್ದರು. ಅದರಂತೆ ಎರಡು ವರ್ಷದ ಹಿಂದೆ ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ-ನಟರಾಜ ದಂಪತಿಗೆ 5 ಲಕ್ಷಕ್ಕೆ ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ನಾಗರಾಜ ದಂಪತಿ ನೀಡಿದ್ದರು. ಇದಾದ ಮೇಲೆ ವಿನಾಃಕಾರಣ ಲಲಿತಾ ಅವರೊಂದಿಗೆ ಸುಧಾರಾಣಿ ಮತ್ತು ಆಕೆಯ ಗಂಡ ನಟರಾಜ್​ ಜಗಳ ಆಡುತ್ತಿದ್ದ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ಪ್ರೀತಿಸಿದವನ ಜೊತೆ ಮದುವೆಯಾಗಲು ಬಿಡದ ತಂದೆಯಿಂದ ಆತ್ಮಹತ್ಯೆಗೆ ಪ್ರಚೋದನೆ; ಮಗಳು ಸಾವನ್ನಪ್ಪಿದ 7 ದಿನದ ಬಳಿಕ ಸತ್ಯಾಂಶ ಬೆಳಕಿಗೆ

ಇದೇ ವಿಚಾರಕ್ಕೆ ಒಮ್ಮೆ ನಾಗರಾಜ ಮತ್ತು ಲಲಿತಾ ಅವರ ಮೇಲೆ ಸುಧಾರಾಣಿ ಮತ್ತು ನಟರಾಜ ಹಲ್ಲೆಗೆ ಮುಂದಾಗಿದ್ದರು. ಜೂ.16 ರಂದು ಸರ ಕದ್ದಿದ್ದೀಯಾ, ನೀನು ಕಳ್ಳಿ ಎಂದು ಜಗಳ ತೆಗೆದು ಲಲಿತಾಗೆ ಬಾಯಿಗೆ ಬಂದಂತೆ ಸುಧಾರಾಣಿ ಬೈಯ್ದಿದ್ದರು. ಇದರಿಂದ ಬೇಸರಗೊಂಡು ಲಲಿತಾ ಮನೆ ಬಿಟ್ಟು ಹೋಗಿದ್ದರು. ನಂತರ ಜೂ.17 ರಂದು ಬೆಳಿಗ್ಗೆ ನಂಜದೇವರಕಾವಲು ಗ್ರಾಮದ ಅವರ ಜಮೀನಿನಲ್ಲಿ ಕಳೆನಾಶಕ ಕುಡಿದು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಲಲಿತಾ ಬಿದ್ದಿದ್ದರು. ಕೂಡಲೇ ನಾಗರಾಜ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜೂ.20 ರಂದು ರಾತ್ರಿ ಲಲಿತಾ ಸಾವನ್ನಪ್ಪಿದ್ದರು. ಇದೀಗ ಮಗಳ ಸಾವಿನ ಸುದ್ದಿ ಕೇಳಿ ಲಲಿತಾ ತಾಯಿ ಲಕ್ಷಮ್ಮ (75) ನಿನ್ನೆ(ಜೂ.21) ಸಾವನ್ನಪ್ಪಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ