ಹಾಸನಾಂಬೆ ದರ್ಶನದ ವೇಳೆ ಕರ್ತವ್ಯ ಲೋಪ; ನಾಲ್ವರು ಸಿಬ್ಬಂದಿ ಅಮಾನತು
ಅ.9 ರಿಂದ ಹಾಸನಾಂಬೆಯ ದರ್ಶನ ಶುರುವಾಗಿದೆ. ವರ್ಷಕ್ಕೊಮ್ಮೆ ದರ್ಶನಕೊಡುವ ಹಾಸನಾಂಬೆಯನ್ನು ನೋಡಲು ಜನ ಕಿಕ್ಕಿರಿದು ಬರುತ್ತಿದ್ದಾರೆ. ಈ ಹಿಂದೆ ಕ್ಷೇತ್ರದ ಆಡಳಿತ ಮಂಡಳಿ ಗೋಲ್ಮಾಲ್ ಆರೋಪವನ್ನೂ ಎದುರಿಸಿತ್ತು. ಈಗಾಗಲೇ ಇಬ್ಬರು ಅಧಿಕಾರಿಗಳು ಅಮಾನತು ಹೊಂದಿದ್ದರೂ, ಈಗ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಮೂಲಕ ಕರ್ತವ್ಯ ಪಾಲನೆಯಲ್ಲಿ ಅಶಿಸ್ತು ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಹಾಸನ, ಅಕ್ಟೋಬರ್ 12: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನದ (Hassan) ಅಧಿದೇವತೆ ಹಾಸನಾಂಬೆ ದರ್ಶನೋತ್ಸವ ಅ.9 ರಿಂದ ಶುರುವಾಗಿದ್ದು, ಹಾಸನಾಂಬೆಯನ್ನು ನೋಡಲು ಜನ ಕಿಕ್ಕಿರಿದು ಬರುತ್ತಿದ್ದಾರೆ. ಕ್ಷೇತ್ರದ ಆಡಳಿತ ಮಂಡಳಿ ಗೋಲ್ಮಾಲ್ ಆರೋಪವನ್ನೂ ಎದುರಿಸಿತ್ತು. ತಾಯಿಯ ದರ್ಶನದ ಮೊದಲ ದಿನವೇ ಮಳೆ ಅವಾಂತರ ಸೃಷ್ಟಿಸಿತ್ತು. ಈ ನಡುವೆ ಮತ್ತೊಮ್ಮೆ ಕರ್ತವ್ಯ ಲೋಪದ ಆರೋಪ ಕೇಳಿ ಬರುತ್ತಿದೆ. ಈಗಾಗಲೇ ಇಬ್ಬರು ಅಧಿಕಾರಿಗಳು ಅಮಾನತು ಹೊಂದಿದ್ದರೂ, ಈಗ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಕಾರ್ಡ್ ಸ್ಕ್ಯಾನ್ ಮಾಡದೇ ಭಕ್ತರಿಗೆ ಪ್ರವೇಶ ನೀಡಿದ ಸಿಬ್ಬಂದಿ ಮೇಲೆ ಕ್ರಮ
ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಗೋಲ್ಡ್ ಪಾಸ್ ಸೌಲಭ್ಯ ಕಲ್ಪಿಸಲಾಗಿದೆ. ಇದರ ಉಸ್ತುವಾರಿಗಾಗಿ ಕಂದಾಯ ಇಲಾಖೆಯ ಸಿಬ್ಬಂದಿಯನ್ನೂ ನೇಮಿಸಲಾಗಿದೆ. ಆದರೆ ಈಗ ಇದೇ ಸಿಬ್ಬಂದಿಗಳಿಂದ ಕರ್ತವ್ಯ ಲೋಪವಾಗಿದ್ದು, ನಾಲ್ವರು ಅಮಾನತುಗೊಂಡಿದ್ದಾರೆ. ಗೋಲ್ಡ್ ಕಾರ್ಡ್ ಕೌಂಟರ್ನಲ್ಲಿ ಕುಳಿತಿದ್ದ ಸಿಬ್ಬಂದಿ ಭಕ್ತರ ಕಾರ್ಡ್ ಸ್ಕ್ಯಾನ್ ಮಾಡದೆಯೇ ಒಳಗೆ ಬಿಟ್ಟಿದ್ದಾರೆ.
ಇದನ್ನೂ ಓದಿ ಹಾಸನಾಂಬೆ ದರ್ಶನೋತ್ಸವ ತಯಾರಿಯಲ್ಲಿ ಭಾರೀ ಅಕ್ರಮ; ದೇವರಾಜೇಗೌಡ ಆರೋಪ
ಅನಧಿಕೃತ ಪ್ರವೇಶಕ್ಕೆ ಅವಕಾಶ ನೀಡಿರುವುದರಿಂದ ಗೋವಿಂದರಾಜ್ ಹಾಗೂ ಯೋಗಾನಂದ್ ಹಾಗೂ ವಿಎಗಳಾದ ಸಂತೋಷ್ ಅಂಬಿಗರ, ಶಿರಾಜ್ ಮಹಿಮಾ ಪಟೇಲ್ ಇವರನ್ನು ಅಮಾನತುಗೊಳಿಸಲಾಗಿದೆ. ಸ್ಪಷ್ಟ ನಿರ್ದೇಶನಗಳಿದ್ದರೂ, ಅನಧಿಕೃತ ಪ್ರವೇಶಕ್ಕೆ ಅವಕಾಶ ನೀಡಿರುವುದು ಗಂಭೀರ ಉಲ್ಲಂಘನೆಯಾಗಿದೆ. ಸರ್ಕಾರಿ ಗುರುತಿನ ಚೀಟಿಯನ್ನು ದುರುಪಯೋಗಪಡಿಸಿಕೊಳ್ಳುವುದು ಗಂಭೀರ ಅಪರಾಧ. ಇಂತಹ ವರ್ತನೆ ಸರ್ಕಾರಿ ನೌಕರರಿಗೆ ಯೋಗ್ಯವಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಮೊದಲ ದಿನವೇ ಎರಡು ಸಿಬ್ಬಂದಿ ಅಮಾನತು
ದೇವಿಯ ದರ್ಶನದ ಮೊದಲ ದಿನವೂ ಕರ್ತವ್ಯ ಐಡಿ ಕಾರ್ಡ್ ದುರುಪಯೋಗ ಮಾಡಿಕೊಂಡಿದ್ದ ಹಿನ್ನೆಲೆ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಬೇಜವಾಬ್ದಾರಿತನ ತೋರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:25 am, Sun, 12 October 25



