AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕಾಲುವೆಗಳನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ; ಅವಘಡಕ್ಕೆ ಕಾರಣವಾಗುತ್ತಿದೆ ರಸ್ತೆ ಮೇಲೆ ಹರಿಯುತ್ತಿರುವ ಮಳೆಯ ನೀರು

ಸರ್ವೇ ಕಾರ್ಯ ನಡೆಯುವ ಹಂತದಲ್ಲಿದ್ದಾಗಲೇ ಕೆಲವರು ಬೆಳಗಾವಿಯ ಪ್ರಾದೇಶಿಕ ವಿಭಾಗದ ಆಯುಕ್ತರಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಒತ್ತುವರಿ ತೆರವು ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ ಸಂಗೂರ ತಿಳಿಸಿದ್ದಾರೆ.

ರಾಜಕಾಲುವೆಗಳನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ; ಅವಘಡಕ್ಕೆ ಕಾರಣವಾಗುತ್ತಿದೆ ರಸ್ತೆ ಮೇಲೆ ಹರಿಯುತ್ತಿರುವ ಮಳೆಯ ನೀರು
ರಾಜಕಾಲುವೆಗಳನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ
TV9 Web
| Edited By: |

Updated on: Jul 20, 2021 | 10:28 AM

Share

ಹಾವೇರಿ: ಜಿಲ್ಲೆಯ ಅನೇಕ ಕಡೆಗಳಲ್ಲಿ ರಾಜಕಾಲುವೆಗಳೆ ಮಾಯವಾಗಿವೆ. ರಾಜಕಾಲುವೆಗಳು ಒತ್ತುವರಿ ಆಗಿರುವುದರಿಂದ ಮಳೆಗಾಲದಲ್ಲಿ‌ ಈ ಭಾಗದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಮಳೆ ನೀರು ಎಲ್ಲೆಂದರಲ್ಲಿ ಹರಿದು, ಜನರು ಓಡಾಡುವುದಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ರಸ್ತೆ ಮೇಲೆ ಮಳೆ‌ ನೀರು ಹರಿದು ಅಪಘಾತಗಳು ಸಂಭವಿಸುತ್ತಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹಾವೇರಿ ನಗರದಲ್ಲಿ ಹಲವು ವರ್ಷಗಳ ಹಿಂದೆ ಮಳೆಯ ನೀರು ನೇರವಾಗಿ ಕೆರೆಗಳಿಗೆ ಸೇರುವಂತೆ ರಾಜಕಾಲುವೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ನಗರದಲ್ಲಿನ ಅನೇಕ ಕಡೆಗಳಲ್ಲಿ ಜನರು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ರಾಜಕಾಲುವೆಗಳು ಒತ್ತುವರಿ ಆಗಿದ್ದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ದಾರಿಯೇ ಇಲ್ಲದಂತಾಗಿದೆ.

ನೀರು ಹರಿದು ಹೋಗಲು ನಿರ್ಮಿಸಿದ್ದ ರಾಜಕಾಲುವೆಗಳು ಒತ್ತುವರಿ ಆಗಿದ್ದರಿಂದ ಜನರಿಗೆ ಓಡಾಡುವುದಕ್ಕೆ ಸಮಸ್ಯೆ ಆಗುತ್ತಿದೆ. ರಾಜಕಾಲುವೆ ಒತ್ತುವರಿ ಬಗ್ಗೆ ಸರ್ವೇ ನಡೆಸುವುದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿತ್ತು. ಸರ್ವೇ ಕಾರ್ಯ ನಡೆಯುವ ಹಂತದಲ್ಲಿದ್ದಾಗಲೇ ಕೆಲವರು ಬೆಳಗಾವಿಯ ಪ್ರಾದೇಶಿಕ ವಿಭಾಗದ ಆಯುಕ್ತರಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ಒತ್ತುವರಿ ತೆರವು ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ ಸಂಗೂರ ತಿಳಿಸಿದ್ದಾರೆ.

ಕೆಲವು ಕಡೆಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣ ಆಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಜನರು ಮನೆ‌ ನಿರ್ಮಾಣ ಮಾಡಿದ್ದಾರೆ. ಧಾರಕಾರ ಮಳೆ ಸುರಿದರೆ ಅಥವಾ ನಿರಂತರ ಮಳೆ ಬಂದರೆ ರಾಜಕಾಲುವೆಗಳ‌ ಮೂಲಕ‌ ಹೆಗ್ಗೇರಿ ಕೆರೆ, ಮುಲ್ಲಾನಕೆರೆ, ಇಜಾರಿಲಕಮಾಪುರ ಕೆರೆಗಳಿಗೆ ಸೇರಬೇಕಾದ ನೀರು ರಸ್ತೆ ಮೇಲೆ ಹರಿಯುತ್ತದೆ. ರಸ್ತೆ ಮೇಲೆ ರಸ್ತೆ ಕಾಣದಂತೆ ನೀರು ಹರಿಯುವುದರಿಂದ ಮಳೆ ಬಂದಾಗೊಮ್ಮೆ ಜನರು ಓಡಾಟಕ್ಕೆ ಎಲ್ಲಿಲ್ಲದ ತೊಂದರೆ ಅನುಭವಿಸುತ್ತಾರೆ ಎಂದು ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ ಹೇಳಿದ್ದಾರೆ.

ಅಕ್ಷರಶಃ ಕೆರೆಗಳಂತೆ ಆಗುವ ರಸ್ತೆಗಳಲ್ಲಿ ಓಡಾಡೋವಾಗ ವಾಹನ ಸವಾರರು ದಾರಿ ಕಾಣದೆ ಬಿದ್ದು, ಅಪಘಾತಗಳು ಆಗಿರುವ ಘಟನೆಗಳು ನಡೆದಿವೆ. ಹೀಗಾಗಿ ರಾಜಕಾಲುವೆಗಳನ್ನು ತೆರವು ಮಾಡಿ ಅಭಿವೃದ್ಧಿ ಕಾರ್ಯ ಮಾಡುವುದಕ್ಕೆ ಸರಕಾರದಿಂದ ಒಂದು ಕೋಟಿ ರೂಪಾಯಿ ಹಣ ಬಿಡುಗಡೆ ಆಗಿತ್ತು. ಆದರೆ ಕೆಲವರು ರಾಜಕಾಲುವೆ ಒತ್ತುವರಿ ಕಾರ್ಯಕ್ಕೆ ಪ್ರಾದೇಶಿಕ ಆಯುಕ್ತರಿಂದ ತಡೆಯಾಜ್ಞೆ ತಂದಿದ್ದಾರೆ. ಪ್ರಾದೇಶಿಕ ಆಯುಕ್ತರು ವಾಸ್ತವ ಅರಿಯದೆ, ಸ್ಥಳ ಪರಿಶೀಲನೆ ಮಾಡದೆ ಮನಸೋ ಇಚ್ಛೆ ತಡೆಯಾಜ್ಞೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ ತಿಳಿಸಿದ್ದಾರೆ.

ವರದಿ: ಪ್ರಭುಗೌಡ.ಎನ್.ಪಾಟೀಲ

ಇದನ್ನೂ ಓದಿ: ಲಗ್ಗೆರೆಯಲ್ಲಿ ಏಕಾಏಕಿ ರಾಜಕಾಲುವೆ ತಡೆಗೋಡೆ ಒಡೆದ ಬಿಬಿಎಂಪಿ ಅಧಿಕಾರಿಗಳು; ಹತ್ತಾರು ಕುಟುಂಬಗಳು ಅತಂತ್ರ Viral Video: ನೀರು ತುಂಬಿ ಹರಿಯುತ್ತಿರುವ ರಸ್ತೆ ಮೇಲೆ ಗುತ್ತಿಗೆದಾರನ ಕೂರಿಸಿ, ತಲೆ ಮೇಲೆ ಕಸ ಸುರಿಸಿದ ಶಾಸಕ !