ಕಲಬುರಗಿಯಲ್ಲಿ ಆಲಿಕಲ್ಲು ಸಹಿತ ಭಾರಿ ಪ್ರಮಾಣದ ಮಳೆ: ವಾಹನ ಸವಾರರು ಪರದಾಟ

ಇಂದು ಬೆಳಿಗ್ಗೆಯಿಂದಲೇ ನಗರದಲ್ಲಿ ಬಹುತೇಕ ಮೋಡ ಕವಿದ ವಾತಾವರಣವಿತ್ತು. ಹೀಗಾಗಿ ನಗರದಲ್ಲಿ ಕತ್ತಲಿನಂತೆ ಭಾಸವಾಗಿತ್ತು. ಇನ್ನು ಮಳೆಯ ಆರ್ಭಟಕ್ಕೆ ರಸ್ತೆ ಕೂಡ ಕಾಣದೆ ವಾಹನ ಸವಾರರು ಹೆಡ್​​ಲೈಟ್‌ ಹಚ್ಚಿಕೊಂಡು ಸಂಚರಿಸಿದ್ದಾರೆ. ಗಾಳಿ, ಆಲಿಕಲ್ಲು ಸಹಿತ ಕಳೆದ ಅರ್ಧಗಂಟೆಯಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ.

ಕಲಬುರಗಿಯಲ್ಲಿ ಆಲಿಕಲ್ಲು ಸಹಿತ ಭಾರಿ ಪ್ರಮಾಣದ ಮಳೆ: ವಾಹನ ಸವಾರರು ಪರದಾಟ
ಮಳೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Apr 20, 2024 | 3:30 PM

ಕಲಬುರಗಿ, ಏಪ್ರಿಲ್​ 20: ಬಿಸಿಲ ಬೇಗೆಯಿಂದ ಬಸವಳಿದಿದ್ದ ಕರುನಾಡಲ್ಲಿ ಕಳೆದು ದಿನಗಳಿಂದ ಮಳೆರಾಯ ತಂಪೆರೆದಿದ್ದಾನೆ. ಮಳೆ (rain) ಬಂದರೆ ಸಾಕಪ್ಪ ಅಂತ ಜನ ಎದುರು ನೋಡುತ್ತಿರುವ ಹೊತ್ತಲ್ಲೇ ವರುಣದೇವ ಕೃಪೆ ತೋರಿಸಿದ್ದಾನೆ. ನಿನ್ನೆ ಕೂಡ ನಗರದಲ್ಲಿ ತುಂತುರು ಮಳೆ ಆಗಿದ್ದು, ಇಂದು ಮತ್ತೆ ಗುಡುಗು ಸಿಡಿಲು ಸಹಿತ ಮಳೆ ಸುರಿದಿದೆ. ಗಾಳಿ, ಆಲಿಕಲ್ಲು ಸೇರಿ ಕಳೆದ ಅರ್ಧಗಂಟೆಯಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಗುಡುಗು, ಸಿಡುಲು ಸಹಿತ ಮಳೆ ಆಗಿದ್ದು, ವಾಹನ ಸವಾರರು ಹೆಡ್​​ಲೈಟ್‌ ಹಾಕಿಕೊಂಡು ಸಂಚಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇಂದು ಬೆಳಿಗ್ಗೆಯಿಂದಲೇ ನಗರದಲ್ಲಿ ಬಹುತೇಕ ಮೋಡ ಕವಿದ ವಾತಾವರಣವಿತ್ತು. ಹೀಗಾಗಿ ನಗರದಲ್ಲಿ ಕತ್ತಲಿನಂತೆ ಭಾಸವಾಗಿತ್ತು. ಇನ್ನು ಮಳೆಯ ಆರ್ಭಟಕ್ಕೆ ರಸ್ತೆ ಕೂಡ ಕಾಣದೆ ವಾಹನ ಸವಾರರು ಹೆಡ್​​ಲೈಟ್‌ ಹಚ್ಚಿಕೊಂಡು ಸಂಚರಿಸಿದ್ದಾರೆ.

ಇದನ್ನೂ ಓದಿ: Bengaluru Rain: ಬೆಂಗಳೂರಿಗೆ ಬಂತು ಮೊದಲ ವರ್ಷಧಾರೆ

ಕಳೆದ ಹಲವು ವರ್ಷಗಳಿಗಿಂತ ಈ ಬಾರಿ ಕಲಬುರಗಿಯಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗುತ್ತಿದ್ದು, ನಿತ್ಯ ಸರಾಸರಿ 42 ರಿಂದ 43 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇರುತ್ತದೆ. ಹೀಗಾಗಿ ರಣಬಿಸಿಲಿನ ತಾಪಮಾನ ತಾಳಲಾರದ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದರು. ಮತ್ತೊಂದೆಡೆ ಬಿಸಿಲಿನ ಝಳದಿಂದ ಉದ್ಯಾನವನಗಳಲ್ಲಿ ವಿಶ್ರಾಂತಿ ಪಡೆಯುವಂತಾಗಿತ್ತು.

ಇದನ್ನೂ ಓದಿ: ಕರ್ನಾಟಕದ ಹಲವೆಡೆ ಭಾರಿ ಮಳೆ: ಸಿಡಿಲಿನ ಹೊಡೆತಕ್ಕೆ ಶಿವಮೊಗ್ಗದಲ್ಲಿ ರೈತ ಬಲಿ

ಬಾಗಲಕೋಟೆ ‌‌ನಗರದಲ್ಲಿ ಧಾರಾಕಾರ ಮಳೆ ಆಗಿದೆ. ಸತತ ಅರ್ಧ ಗಂಟೆ ಗುಡುಗು ಮಿಂಚು ಗಾಳಿ ಸಹಿತ ಮಳೆ ಸುರಿದಿದೆ. ಆ ಮೂಲಕ ಬಿಸಿಲಿಂದ ಕಂಗೆಟ್ಟ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ರಸ್ತೆಯುದ್ದಕ್ಕೂ ಮಳೆ‌ ನೀರು ಹರಿದಿದೆ.

ಅವಳಿ ನಗರದಲ್ಲಿ ಮಳೆ: ಬೆಟಗೇರಿ ಸಂಪರ್ಕಿಸುವ ರೈಲ್ವೆ ಬ್ರಿಡ್ಜ್ ಕೆಳ ರಸ್ತೆ ಮುಳುಗಡೆ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೂಡ ಇಂದು ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದ್ದು, ಬೆಟಗೇರಿ ಸಂಪರ್ಕಿಸುವ ರೈಲ್ವೆ ಬ್ರಿಡ್ಜ್ ಕೆಳ ರಸ್ತೆ ಮುಳುಗಿದೆ. ಪರಿಣಾಮ ಮಳೆನೀರಿನಿಂದ ಅಂಡರ್ ಪಾಸ್ ನದಿಯಂತಾಗಿದೆ. ವಾಹನ ಸಂಚಾರ ಬಂದ ಮಾಡಲಾಗಿದೆ. ಹಲವು ಮನೆಗಳಿಗೂ ನೀರು ನುಗ್ಗಿದ್ದು, ನೀರು ಹೊರಹಾಕಲು ನಿವಾಸಿಗಳು ಹರಸಾಹಸ ಪಟ್ಟಿದ್ದಾರೆ. ದನದ ಕೊಟ್ಟಿಗೆಯಲ್ಲಿ ಮಳೆನೀರು ನಿಂತಿರುವಂತಹ ಘಟನೆ ಬೆಟಗೇರಿ ಕುರಹಟ್ಟಿ ಪೇಟೆಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:22 pm, Sat, 20 April 24