ಸಚಿವರಾಗಲು ಪಾಟೀಲ್ ಈ ಪ್ಲ್ಯಾನ್: ಮತಗಳ್ಳತನ ಬಗ್ಗೆ ಬಿಜೆಪಿ ಮಾಜಿ ಶಾಸಕ ಸ್ಫೋಟಕ ಹೇಳಿಕೆ

ಆಳಂದ ಕ್ಷೇತ್ರದಲ್ಲಿ ಮತಕಳ್ಳತನದ ಆರೋಪ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ನಿನ್ನೆ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್​​ ಮನೆ ಮೇಲೆ SIT ದಾಳಿ ಮಾಡಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುಭಾಷ್ ಗುತ್ತೇದಾರ್, ನನ್ನ ವಿರುದ್ಧ ಆರೋಪಮಾಡಿ ಬಿ.ಆರ್.ಪಾಟೀಲ್ ಸಚಿವರಾಗಲು ಪ್ಲ್ಯಾನ್​ ಮಾಡಿದ್ದಾರೆ ಎಂದು ಬಾಂಬ್​ ಸಿಡಿಸಿದ್ದಾರೆ.

ಕಲಬುರಗಿ, ಅಕ್ಟೋಬರ್​ 18: ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಮತಕಳ್ಳತನದ (Aland Vote Theft Case)  ಆರೋಪ ದೇಶಾದ್ಯಂತ ಸದ್ದು ಜೋರಾಗಿದೆ. ನಿನ್ನೆ ಎಸ್ಐಟಿ ಅಧಿಕಾರಿಗಳು, ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ಗೆ (subhash guttedar) ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಸುಭಾಷ್ ಮನೆ ಬಳಿಯೇ ಕೆಲ ದಾಖಲೆಗಳನ್ನ ಸುಟ್ಟಿರುವುದು ಬಯಲಾಗಿತ್ತು. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುಭಾಷ್, ನಾವು ಯಾವುದೇ ಮತಗಳವು ಮಾಡಿಲ್ಲ, ಮತಗಳನ್ನು ಡಿಲೀಟ್ ಮಾಡಿಲ್ಲ. ನನ್ನ ವಿರುದ್ಧ ಕಾಂಗ್ರೆಸ್​ನವರ ಆರೋಪ ಸುಳ್ಳು ಎಂದು ಹೇಳಿದ್ದಾರೆ.

ಮಂತ್ರಿಯಾಗಲು ಪ್ರಯತ್ನ ಎಂದ ಸುಭಾಷ್ ಗುತ್ತೇದಾರ್

ನಗರದಲ್ಲಿ ಟಿವಿ9ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಬಿ.ಆರ್.ಪಾಟೀಲ್ ಸಚಿವರಾಗಲು ರಾಹುಲ್ ಗಾಂಧಿ ಗಮನ ಸೆಳೆದಿದ್ದಾರೆ. ನನ್ನ ವಿರುದ್ಧ ಆರೋಪಮಾಡಿ ಬಿ.ಆರ್.ಪಾಟೀಲ್ ಸಚಿವರಾಗಲು ಪ್ಲ್ಯಾನ್ ಮಾಡಿದ್ದಾರೆ. ಮತಗಳ್ಳತನವಾಗಿದೆ ಎಂದು ತಮ್ಮೂರಿನವರನ್ನು ದೆಹಲಿಗೆ ಕರೆದೊಯ್ದು ರಾಹುಲ್ ಗಾಂಧಿ ಜೊತೆ ನಿಲ್ಲಿಸಿ ಹೇಳಿದ್ದಾರೆ. ಆ ಮೂಲಕ ರಾಹುಲ್ ಗಾಂಧಿಗೆ ಹತ್ತಿರವಾಗಿ ಮಂತ್ರಿಯಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ: ಬಿಜೆಪಿ ಮಾಜಿ ಶಾಸಕರ ಮನೆ ಮೇಲೆ SIT ದಾಳಿ

ನನಗೆ ಈವರೆಗೆ ಯಾವುದೇ ನೋಟಿಸ್ ಕೊಟ್ಟಿಲ್ಲ, ನೋಟಿಸ್ ನೀಡಿದರೆ ಎಸ್ಐಟಿ ವಿಚಾರಣೆಗೆ ಹಾಜರಾಗುವೆ. ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಯಾವುದೇ ಮತಗಳ್ಳತನವಾಗಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸಿದ್ದರಿಂದ ವೋಟರ್ ಲಿಸ್ಟ್ ನೀಡಿರುತ್ತಾರೆ. ಎಸ್​​​ಐಟಿ ಸೇರಿದಂತೆ ನಾನು ಯಾವುದೇ ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ವೋಟ್ ಚೋರಿ ಕೇಸ್​​: ಕಲಬುರಗಿಯ 5 ಮನೆಗಳ ಮೇಲೆ ಎಸ್​ಐಟಿ ದಾಳಿ, ಸಾವಿರಾರು ವೋಟರ್ ಐಡಿ ಪತ್ತೆ

ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲದೆ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಇದೇ ಕಾರಣಕ್ಕೆ ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಮಾಡುತ್ತಿದ್ದಾರೆ. ನಮ್ಮ ಮನೆ ಬಳಿ ಯಾವುದೇ ಮತದಾರರನ್ನು ಪಟ್ಟಿಯಿಂದ ತೆಗೆದಿಲ್ಲ. ದೀಪಾವಳಿ ಹಿನ್ನೆಲೆಯಲ್ಲಿ ಕೆಲಸದವರು ಮನೆ ಕ್ಲೀನ್ ಮಾಡಿದ್ದಾರೆ. ಅದು ಮತದಾರರು ಪಟ್ಟಿ ಎಂದು ಮನೆಗೆಲಸದವರಿಗೆ ಗೊತ್ತೇ ಇಲ್ಲ. ಮನೆಗೆಲಸದವರಿಗೆ ಮತದಾರರ ಪಟ್ಟಿ ಸುಡಬೇಕೆಂಬ ಉದ್ದೇಶವಿರಲಿಲ್ಲ, ಹಾಗೇನಾದರೂ ಮಾಡಬೇಕು ಅಂತಿದ್ದರೆ ದೂರದ ಸ್ಥಳದಲ್ಲಿ ಸುಡುತ್ತಿದ್ದರು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.