ಒಟ್ಟಿಗೆ ಎಣ್ಣೆ ಹಾಕುವಾಗ ಗಲಾಟೆ; ಇಟ್ಟಿಗೆಯಿಂದ ಹೊಡೆದು ಪತ್ನಿ ಕೊಲೆ ಮಾಡಿದ ಪತಿ

| Updated By: ಆಯೇಷಾ ಬಾನು

Updated on: Oct 04, 2024 | 8:50 AM

ಆ ದಂಪತಿ ಮಕ್ಕಳೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದರು. ಒಟ್ಟೊಟ್ಟಿಗೆ ಒಂದೆ ಸ್ಥಳದಲ್ಲೆ ಕೆಲಸ ಮಾಡ್ತಿದ್ದ ಆ ದಂಪತಿ ರಾತ್ರಿ ಒಟ್ಟೊಟ್ಟಿಗೆ ಕಂಠಪೂರ್ತಿ ಎಣ್ಣೆ ಹೊಡೆಯುತ್ತಿದ್ದರು. ಆದರೆ ಕಳೆದ ರಾತ್ರಿ ಸಹ ಒಟ್ಟಿಗೆ ಕಂಠಪೂರ್ತಿ ಎಣ್ಣೆ ಹೊಡೆದಿದ್ದಾಗ ಗಂಡ ಪತ್ನಿಯನ್ನ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕಲಬುರಗಿಯಲ್ಲೊಂದು ಭಯಾನಕ ಹತ್ಯೆ ನಡೆದಿದೆ.

ಒಟ್ಟಿಗೆ ಎಣ್ಣೆ ಹಾಕುವಾಗ ಗಲಾಟೆ; ಇಟ್ಟಿಗೆಯಿಂದ ಹೊಡೆದು ಪತ್ನಿ ಕೊಲೆ ಮಾಡಿದ ಪತಿ
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ, ಅ.04: ಕಲಬುರಗಿ ನಗರ ಹೊರವಲಯದ ಶಹಬಾದ್ ರಸ್ತೆಯ ಇಟ್ಟಿಗೆ ಭಟ್ಟಿಯಲ್ಲಿ ಭೀಕರ ಕೊಲೆ (Murder) ನಡೆದಿದೆ. ಪತಿಯೇ ಪತ್ನಿಯನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ (Husband Wife Fight). ಆಳಂದ ತಾಲೂಕಿನ ಕೊಡಲಹಂಗರಗಾ ಗ್ರಾಮದ ಪ್ರಿಯಾಂಕಾಳನ್ನ (35) ಅದೇ ತಾಲೂಕಿನ ನಿಂಬರ್ಗಾ ಗ್ರಾಮದ ವಕೀಲ್ ರಾಠೋಡ್ ಜೊತೆ ಮದ್ವೆ ಮಾಡಿಕೊಡಲಾಗಿತ್ತು. ಇವರು ಮಕ್ಕಳೊಂದಿಗೆ ಶಹಬಾದ್ ರಸ್ತೆಯಲ್ಲಿನ ಇಟ್ಟಿಗೆ ಭಟ್ಟಿ ಬಳಿ ಪುಟ್ಟದೊಂದು ಮನೆ ಮಾಡಿಕೊಂಡಿದ್ದರು. ಹಿಗೇ ಅದೇ ಇಟ್ಟಿಗೆ ಭಟ್ಟಿಯಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡ್ತಿದ್ದ ದಂಪತಿ ನಿತ್ಯವೂ ಕಂಠಪೂರ್ತಿ ಕುಡಿಯುತ್ತಿದ್ದರು. ಅದರಂತೆ ಕಳೆದ ರಾತ್ರಿ ಸಹ ಇಬ್ಬರು ಎಣ್ಣೆ ಹೊಡೆದಿದ್ದಾರೆ. ಎಣ್ಣೆ ಮತ್ತಿನಲ್ಲಿ ಇಬ್ಬರ ಮಧ್ಯೆ ಜಗಳ ಶುರುವಾಗಿದ್ದು, ಜಗಳ ವಿಕೋಪಕ್ಕೆ ಹೋಗಿ ಅಲ್ಲೆ ಇದ್ದ ಇಟ್ಟಿಗೆಯಿಂದ ಪತ್ನಿ ಪ್ರಿಯಾಂಕಾಳ ತಲೆಗೆ ಜಜ್ಜಿ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಪತಿ ವಕೀಲ್ ರಾಠೋಡ್ ಮತ್ತು ಪತ್ನಿ ಪ್ರಿಯಾಂಕಾ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಾ, ಸಂಜೆಯಾದರೆ ಸಾಕು ರಾಠೋಡ್ ಮನೆಗೆ ಎಣ್ಣೆ ತರುತ್ತಿದ್ದನು. ಬಳಿಕ ಇಬ್ಬರೂ ಒಟ್ಟೊಟ್ಟಿಗೆ ಎಣ್ಣೆ ಹೊಡೆದು ಇಬ್ಬರು ಮಕ್ಕಳನ್ನ ನಿರ್ಲಕ್ಷ್ಯ ಮಾಡುತ್ತಿದ್ದರಿಂದ, ಕೆಲ ದಿನಗಳ ಹಿಂದೆ ಮಕ್ಕಳನ್ನ ಅಜ್ಜ ಅಜ್ಜಿ ಬಳಿ ಬಿಟ್ಟು ಬಂದಿದ್ದರು. ಇಷ್ಟಾದರೂ ಸಹ ಇಬ್ಬರ ಎಣ್ಣೆ ದಾಹ ಮಾತ್ರ ತೀರುತ್ತಿರಲಿಲ್ಲ. ಅದರಂತೆ ಕಳೆದ ರಾತ್ರಿ ಎಣ್ಣೆ ಪಾರ್ಟಿ ಶುರುವಾದಾಗ, ಎಣ್ಣೆ ಕಡಿದು ಬಿದ್ದಿರೋ ವಿಚಾರಕ್ಕೆ ಇಬ್ಬರ ಮಧ್ಯ ಗಲಾಟೆ ಆಗಿದೆ. ಆ ವೇಳೆ ಅಕ್ಕಪಕ್ಕದವರು ಸಹ ಇವರ ಗಲಾಟೆ ದಿನಾಲೂ ಇದ್ದಿದ್ದೆ ಅಂತಾ ಅವರ ಪಾಡಿಗೆ ಅವರಿದ್ದರು.

ಇದನ್ನೂ ಓದಿ: ಅಣ್ಣನಿಂದಲೇ ಅಪ್ರಾಪ್ತ ಸಹೋದರಿ ಮೇಲೆ ಅತ್ಯಾಚಾರ, ಆಕೆ ಈಗ ಗರ್ಭಿಣಿ

ಜಗಳದ ನಡುವೆ ಪತಿ ವಕೀಲ್ ರಾಠೋಡ್, ನಶೆಯಲ್ಲಿ ಪತ್ನಿಗೆ ಇಟ್ಟಿಗೆಯಿಂದ ಮನಬಂದಂತೆ ಥಳಿಸಿ ಕೊಲೆ ಮಾಡಿದ್ದಾನೆ. ಇನ್ನೂ ಮೃತದೇಹವನ್ನ ನಗರದ ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇನ್ನೂ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿಯನ್ನ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಅದೆನೇ ಇರಲಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸದೆ ಗಂಡ ಹೆಂಡ್ತಿ ಒಟ್ಟಿಗೆ ಎಣ್ಣೆ ಹೊಡೆದು ಜಗಳವಾಡಿಕೊಂಡಿದ್ದು ಪತ್ನಿ ಮೃತಪಟ್ಟಿದ್ದಾಳೆ. ಅಪ್ಪ-ಅಮ್ಮನ ಜಗಳಕ್ಕೆ ಮಕ್ಕಳಿಬ್ಬರು ಅನಾಥರಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ