ಕರ್ನಾಟಕದಲ್ಲಿ ಮಾಂಜಾ ದಾರ ನಿಷೇಧ: ಗಾಳಿಪಟ ಹಾರಿಸಲು ಹತ್ತಿ ದಾರಕ್ಕೆ ಮಾತ್ರ ಅವಕಾಶ

|

Updated on: Oct 25, 2024 | 8:43 AM

ಕರ್ನಾಟಕ ಸರ್ಕಾರವು ಪಕ್ಷಿಗಳು ಮತ್ತು ಜನರಿಗೆ ಅಪಾಯಕಾರಿಯಾದ ಚೈನೀಸ್ ಮಾಂಜಾ ದಾರದ ಬಳಕೆಯನ್ನು ನಿಷೇಧಿಸಿದೆ. ಹತ್ತಿಯಿಂದ ತಯಾರಿಸಿದ ದಾರವನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ. 2016ರ ಅಧಿಸೂಚನೆಗೆ ತಿದ್ದುಪಡಿ ಮಾಡಿ, ಚೈನೀಸ್ ಮಾಂಜಾ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಉಲ್ಲಂಘನೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

ಕರ್ನಾಟಕದಲ್ಲಿ ಮಾಂಜಾ ದಾರ ನಿಷೇಧ: ಗಾಳಿಪಟ ಹಾರಿಸಲು ಹತ್ತಿ ದಾರಕ್ಕೆ ಮಾತ್ರ ಅವಕಾಶ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್​ 25: ಗಾಳಿಪಟ (Kite) ಹಾರಿಸುವುದು ಕರ್ನಾಟಕದ (Karnataka) ಒಂದು ಜನಪದ ಉತ್ಸವವಾಗಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮಕ್ಕಳು, ಯುವಕರು ಯಾವುದೇ ವಯಸ್ಸಿನ ಮಿತಿ ಇಲ್ಲದೆ ಎಲ್ಲ ವರ್ಗದ ಜನರು ಗಾಳಿಪಟ ಹಾರಿಸಿ ಖುಷಿ ಪಡುತ್ತಾರೆ. ಗಾಳಿಪಟ ಹಾರಿಸಲು ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸುವುದನ್ನು ಸರ್ಕಾರ ನಿಷೇಧಿಸಿದೆ. ಕೇವಲ ಹತ್ತಿಯಿಂದ ತಯಾರಿಸಿದ ದಾರವನ್ನು (Cotton thread) ಮಾತ್ರ ಬಳಸುವಂತೆ ಸೂಚನೆ ನೀಡಿದೆ.

ಗಾಳಿಪಟ ಹಾರಿಸಲು ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸಲಾಗುತ್ತಿದೆ. ಈ ದಾರಗಳು ಪಕ್ಷಿಗಳ ಪ್ರಾಣಕ್ಕೆ ಕಂಟಕವಾಗಿವೆ. ಗಾಳಿಪಟ ಹಾರಿಸುವ ವೇಳೆ ದಾರ ತಾಗಿ ಪಕ್ಷಿಗಳು ಗಾಯಗೊಂಡು ಪ್ರಾಣ ಬಿಟ್ಟಿವೆ. ಹಾಗೇ ಬೈಕ್​ ಸವಾರರು ಕೂಡ ಇದರಿಂದ ಹೊರತಾಗಿಲ್ಲ. ಬೈಕ್​ ಸವಾರರ ಕುತ್ತಿಗೆ ಕೊಯ್ದ ಉದಾಹರಣೆಗಳು ಇವೆ.

ಈ ಹಿನ್ನೆಲೆಯಲ್ಲಿ ಚೀನಿ ದಾರ ಅಥವಾ ಮಾಂಜಾ ದಾರವನ್ನು ನಿಷೇಧಿಸುವಂತೆ ಪ್ರಕರಣ ನ್ಯಾಯಾಲದ ಮೆಟ್ಟಿಲೇರಿತು. ಬಳಿಕ, ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಮಾರ್ಗಸೂಚಿ ಹೊರಡಿಸಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಅದರಂತೆ 2016ರಲ್ಲಿ ಕರ್ನಾಟಕ ಸರ್ಕಾರ ಗಾಳಿಪಟ ಹಾರಿಸಲು ನೈಲಾನ್​ ಅಥವಾ ಚೀನಿ ದಾರ ಅಥವಾ ಮಾಂಜಾ ದಾರ ಬಳಕೆಯನ್ನು ನಿಷೇಧಿಸಿತು.

ಇದನ್ನೂ ಓದಿ:  ಕಾಫಿ ಪ್ರಿಯರಿಗೆ ಕಾದಿದೆ ಶಾಕ್: ಬೆಂಗಳೂರಿನಲ್ಲಿ ಇನ್ನಷ್ಟು ದುಬಾರಿಯಾಗಲಿದೆ ಕಾಫಿ ದರ

ಇದೀಗ, ರಾಜ್ಯ ಸರ್ಕಾರ 2016ರ ಅಧಿಸೂಚನೆಗೆ ಕೆಲ ತಿದ್ದುಪಡಿಯನ್ನು ಮಾಡಿ ಆದೇಶ ಹೊರಡಿಸಿದೆ. ಯಾವುದೇ ವ್ಯಕ್ತಿ, ಅಂಗಡಿಗಳು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಚೀನಿ ದಾರ ಅಥವಾ ಮಾಂಜಾ ದಾರ ತಯಾರಿಕೆಗೆ ಬಳಸಲಾಗುವ ನೈಲಾನ್​ ಮತ್ತು ಗಾಜು ಮತ್ತಿತರ ಅಪಾಯಕಾರಿ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಚೀನಿ ದಾರ ಅಥವಾ ಮಾಂಜಾ ದಾರ ತಯಾರು, ದಾಸ್ತಾನು ಮಾಡುವುದವುದನ್ನೂ ನಿಷೇಧಿಸಲಾಗಿದೆ. ಒಂದು ವೇಳೆ ಬಳಸಿದ್ದು, ತಯಾರು ಮತ್ತು ಮಾರಾಟ ಮಾಡಿದ್ದು ಕಂಡುಬಂದಲ್ಲಿ ಕಠಿಣಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ಇನ್ನು, ಗಾಳಿಪಟ ಹಾರಿಸುವವರು ಯಾವುದೇ ಚೂಪಾದ, ಗಾಜು, ಅಂಟುಗಳು ಅಥವಾ ದಾರವನ್ನು ಬಲಪಡಿಸುವ ವಸ್ತುಗಳಿಂದ ತಯಾರಿಸಿದ ದಾರವನ್ನು ಬಳಸುವಂತಿಲ್ಲ. ಕೇವಲ ಹತ್ತಿಯಿಂದ ತಯಾರಿಸಿದ ದಾರವನ್ನು ಮಾತ್ರ ಗಾಳಿಪಟ ಹಾರಾಟಕ್ಕೆ ಬಳಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಕರ್ನಾಟಕ ಸರ್ಕಾರ ಅಕ್ಟೋಬರ್​ 16 ರಂದು ಮಾರ್ಗಸೂಚಿ ಹೊರಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:38 am, Fri, 25 October 24