ವಿಜಯೇಂದ್ರಗೆ ಬಿಗ್ ಶಾಕ್: ಯತ್ನಾಳ್​ ಕಡೆ ತಿರುಗಿದ ತಟಸ್ಥ ನಾಯಕರ ಬಣ, ದಿಲ್ಲಿಯಲ್ಲಿ ಗೌಪ್ಯ ಸಭೆ

|

Updated on: Feb 10, 2025 | 6:19 PM

ಪರಸ್ಪರ ಗುದ್ದಾಟ. ಪಟ್ಟಕ್ಕಾಗಿ ಇಬ್ಬರ ನಡುವೆ ಕಾದಾಟ. ನಾನಾ ನೀನಾ ಅನ್ನೋ ಸಮರ. ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಡುವಿನ ರಾಜ್ಯಾಧ್ಯಕ್ಷ ರಣರಂಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ದೆಹಲಿ ಅಂಗಳದಲ್ಲಿ ಬಣ ಕಿತ್ತಾಟ ನಡೆಯುತ್ತಿದೆ. ಪೂಜೆ ನೆಪದಲ್ಲಿ ಯತ್ನಾಳ್ ಮತ್ತು ವಿಜಯೇಂದ್ರ ಇಬ್ಬರೂ ದೆಹಲಿಗೆ ತೆರಳಿದ್ದು, ಯತ್ನಾಳ್​ ಟೀಂ ಜತೆ ತಟಸ್ಥ ನಾಯಕರು ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ವಿಜಯೇಂದ್ರಗೆ ಬಿಗ್ ಶಾಕ್: ಯತ್ನಾಳ್​ ಕಡೆ ತಿರುಗಿದ ತಟಸ್ಥ ನಾಯಕರ ಬಣ, ದಿಲ್ಲಿಯಲ್ಲಿ ಗೌಪ್ಯ ಸಭೆ
Yatnal Team
Follow us on

ನವದೆಹಲಿ, (ಫೆಬ್ರವರಿ 10): ಕರ್ನಾಟಕ ಬಿಜೆಪಿ ಬಣ ಫೈಟ್ ಯಾವ ರೀತಿ ಆಗಿದೆ ಅಂದರೆ ಅತ್ತಾ ಹಾವು ಸಾಯುತ್ತಿಲ್ಲ. ಇತ್ತ ಕೋಲು ಮುರಿತ್ತಿಲ್ಲ ಎನ್ನುವಂತಾಗಿದೆ. ಯತ್ನಾಳ್​ ,ಬಣ ಕಟ್ಟಿಕೊಂಡು ದಿಲ್ಲಿ, ರಾಜ್ಯ ಎಂದು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ವಿಜಯೇಂದ್ರ ನೋಡಿದ್ರೆ ಸಿಂಗಲ್ ಆಗಿಯೇ ದೆಹಲಿಯಲ್ಲಿ ವರಿಷ್ಠರನ್ನ ಭೇಟಿ ಮಾಡುತ್ತಿದ್ದಾರೆ. ಎರಡೂ ಬಣ ಫೈಟ್​ ಬ್ರೇಕ್​ಗೆ ಮದ್ದು ಇರುವುದು ಹೈಕಮಾಂಡ್​ ಬಳಿಯೇ. ಹೀಗಾಗಿ ವರಿಷ್ಠರ ಭೇಟಿಗೆ ಪದೇ ಪದೇ ಎರಡೂ ಬಣಗಳಿಂದ್ಲೂ ಪ್ರಯತ್ನ ಆಗುತ್ತಿದ್ದು, ಇಂದು (ಫೆಬ್ರವರಿ 10) ವಿ.ಸೋಮಣ್ಣ ನಿವಾಸದ ಗೃಹಪ್ರವೇಶದ ನೆಪದಲ್ಲಿ ಎರಡೂ ಬಣದ ನಾಯಕರು ಡೆಲ್ಲಿಯಲ್ಲಿ ತಮ್ಮದೇ ಆದ ಗೇಮ್​ ಪ್ಲ್ಯಾನ್​ ನಡೆಸುತ್ತಿದ್ದಾರೆ.

ವಿ.ಸೋಮಣ್ಣ ಮನೆ ಪೂಜೆ ನೆಪದಲ್ಲಿ ರೆಬೆಲ್ಸ್ ದಂಡು!

ಸಚಿವ ವಿ.ಸೋಮಣ್ಣ ಮನೆ ಗೃಹಪ್ರವೇಶ ಪೂಜೆಯಲ್ಲಿ ಭಾಗಿ ವಿಚಾರದಲ್ಲೂ ಬಣ ತಿಕ್ಕಾಟ ಕಂಡು ಬಂದಿದೆ. ಯಾಕೆಂದ್ರೆ, ನಿನ್ನೆಯಷ್ಟೇ ದೆಹಲಿಗೆ ಹೊರಟ ಯತ್ನಾಳ್, ಸೋಮಣ್ಣ ಮನೆ ಪೂಜೆಗೆ ಹೋಗುತ್ತಿದ್ದೀವೆ ಎಂದಿದ್ದರು. ವಿಜಯೇಂದ್ರ ಸಹ ಸೋಮಣ್ಣ ಮನೆ ಪೂಜೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಆದ್ರೆ, ಸೋಮಣ್ಣ ನಿವಾಸದಲ್ಲಿ ಪೂಜೆ ಕಾರ್ಯಕ್ರಮಕ್ಕೆ ವಿಜಯೇಂದ್ರಗೆ ಆಹ್ವಾನವೇ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಸೋಮಣ್ಣ ನಿವಾಸಕ್ಕೆ ಪೂಜೆ ಹೋಗುತ್ತಿದ್ದೇನೆ ಎಂದಿದ್ದ ವಿಜಯೇಂದ್ರ ನಡೆ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ತಟಸ್ಥ ಗುಂಪಿನ ನಾಯಕರು ಸಹ ಯತ್ನಾಳ್​ ಬಣದ ಜೊತೆ ಗುರುತಿಸಿಕೊಂಡಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ದಿಲ್ಲಿಯಲ್ಲಿ ರಾಜಕೀಯ ಆಟವಾಡುತ್ತಿರುವ ಯತ್ನಾಳ್​ಗೆ ಮತ್ತೊಮ್ಮೆ ಬಿಗ್ ಶಾಕ್ ಕೊಟ್ಟ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ

ಸೋಮಣ್ಣ ಮನೆಯ ಗೃಹ ಪ್ರವೇಶದಲ್ಲಿ ಭಾಗಿಗೂ ಮುನ್ನ ಯತ್ನಾಳ್ ಬಣ ಸಭೆ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದು, ದೆಹಲಿಯ ಕರ್ನಾಟಕ ಭವನದಲ್ಲಿ ಸಭೆ ಮಾಡಿದರು. ಸಭೆಯಲ್ಲಿ ಬಿ.ಪಿ.ಹರೀಶ್, ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಹೇಶ್ ಕುಮಟಳ್ಳಿ ಭಾಗಿಯಾಗಿದ್ದರು. ಇನ್ನು ಸಭೆ ಬಳಿಕ ಮಾತನಾಡಿದ ಯತ್ನಾಳ್, ನಾವು ಸೋಮಣ್ಣ ಆಹ್ವಾನದ ಮೇರೆಗೆ ಬಂದಿದ್ದೇವೆ, ನಮ್ಮ ಕೆಲಸವೂ ಆಗಿದೆ ಎಂದು ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಗೃಹ ಪ್ರವೇಶ ನೆಪದಲ್ಲಿ ಲಿಂಗಾಯತ ನಾಯಕರ ಸಭೆ!

ಇವತ್ತು ಸೋಮಣ್ಣ ಗೃಹ ಪ್ರವೇಶ ನೆಪದಲ್ಲಿ ರಾಜಕೀಯ ಇಷ್ಟಕ್ಕೇ ನಿಲ್ಲಲಿಲ್ಲ, ಸಿಕ್ಕ ಸಮಯದಲ್ಲೇ ಲಿಂಗಾಯತ ನಾಯಕರೂ ಸಭೆ ಮಾಡಿದ್ದಾರೆ. ಇವರೆಲ್ಲರೂ ಇದೀಗ ಸದ್ಯ ತಟಸ್ಥ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಸೋಮಣ್ಣ ನಿವಾಸಲ್ಲಿ ಬಸವರಾಜ ಬೊಮ್ಮಾಯಿ, ಅರವಿಂದ್​ ಬೆಲ್ಲದ್, ಮುರುಗೇಶ್ ನಿರಾಣಿ ಒಟ್ಟಿಗೆ ಪ್ರತ್ಯಕ್ಷವಾಗಿರುವುದು ಕಂಡು ಬಂತು. ಇನ್ನು ತಟಸ್ಥ ಬಣವೂ ನಮ್ಮ ಕಡೆಯೇ ಇದೆ ಯತ್ನಾಳ್ ಹೇಳಿದ್ದರು. ಇದರ ನಡುವೆಯೇ ತಟಸ್ಥ ಬಣದ ಗುಂಪಿನ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಬೆಲ್ಲದ್ ಸೇರಿದಂತೆ ಇನ್ನೂ ಕೆಲ ನಾಯಕರು ಯತ್ನಾಳ್ ಜೊತೆ ಕಾಣಿಸಿಕೊಂಡಿಲ್ಲದ್ದೇ ಗೌಪ್ಯ ಸಭೆ ಮಾಡಿದೆ. ಹೀಗಾಗಿ ತಟಸ್ಥ ಬಣ ಯತ್ನಾಳ್​ ಕಡೆ ವಾಲಿದಂತಾಗಿದ್ದು, ಎಲ್ಲರೂ ಸೇರಿ ವಿಜಯೇಂದ್ರಗೆ ಶಾಕ್ ಕೊಡುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

ಸೋಮಣ್ಣ ಮನೆ ಪೂಜೆ ನೆಪದಲ್ಲಿ ದೆಹಲಿಗೆ ತೆರಳಿರೋ ಇಬ್ಬರು ನಾಯಕರು ಹೈಕಮಾಂಡ್ ನಾಯಕರನ್ನ ಭೇಟಿಯಾಗೋ ಸಾಧ್ಯತೆ ಇದೆ. ಆತಂಕದಲ್ಲೇ ದೆಹಲಿಗೆ ತೆರಳಿರೋ ವಿಜಯೇಂದ್ರ, ಇಂದು ಹೈಕಮಾಂಡ್ ನಾಯಕರನ್ನ ಭೇಟಿಯಾಗಲಿದ್ದಾರೆ.

ಅದೇನೇ ಹೇಳಿ, ಇದೀಗ ದೆಹಲಿಯಲ್ಲಿ ಸೋಮಣ್ಣ ಮನೆಯಲ್ಲಿ ಪೂಜೆ ನೆಪದಲ್ಲಿ ತೆರೆಮರೆಯಲ್ಲೂ ರಾಜಕೀಯ ನಡೆಯುತ್ತಿದೆ. ಒಂದ್ಕಡೆ ಯತ್ನಾಳ್ ಬಣ ಪ್ರತ್ಯಕ್ಷ ಆಗಿದ್ರೆ, ಮತ್ತೊಂದ್ಕಡೆ ತಟಸ್ಥ ಬಣವೂ ಪ್ರತ್ಯಕ್ಷ ಆಗಿದೆ. ಅದ್ರೆ ದೆಹಲಿಯಲ್ಲೇ ಇರುವ ವಿಜಯೇಂದ್ರ ನಡೆ ಕುತೂಹಲಕ್ಕೆ ಕಾರಣವಾಗಿದ್ದು, ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.