ದೀಪಾವಳಿಗೆಂದು ಊರಿಗೆ ಹೋಗುವವರ ಗಮನಕ್ಕೆ: ನಾಳೆಯಿಂದ ಸಾರಿಗೆ ನೌಕರರ ಮುಷ್ಕರ
ಬೆಳಕಿನ ಹಬ್ಬ ದೀಪಾವಳಿಯನ್ನು ಕುಟುಂಬದೊಂದಿಗೆ ಆಚರಿಸಲು ಊರಿಗೆ ಹೋಗುವವರ ಅನುಕೂಲಕ್ಕಾಗಿ ಕೆಎಸ್ ಆರ್ ಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ.ದೀಪಾವಳಿ ಹಬ್ಬದ ಪ್ರಯಾಣಿಕರ ದಟ್ಟಣೆ ತಪ್ಪಿಸುವ ಸಲುವಾಗಿ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ವಿಶೇಷ ಬಸ್ ಸಂಚರಿಸಲಿವೆ. ಆದ್ರೆ, ಬಸ್ ಓಡಿಸುವವರು ಮತ್ತೆ ಮುಷ್ಕರಕ್ಕೆ ಮುಮದಾಗಿದ್ದಾರೆ. ವಿವಿಧ ಬೇಡಿಕೆಗಳ ಈಡರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಾಳೆಯಿಂದಲೇ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಇದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.

ಬೆಂಗಳೂರು, ಅಕ್ಟೋಬರ್ 14): ರಾಜ್ಯ ಹಾಗೂ ಸಾರಿಗೆ ನೌಕರರ ನಡುವಿನ ಗುದ್ದಾಟ ಬಗೆಹರಿಯುತ್ತಿಲ್ಲ. ವಿವಿಧ ಬೇಡಿಕೆಗಳ ಈಡರಿಕೆಗೆ ಆಗ್ರಹಿಸಿ ಆಗಸ್ಟ್ ನಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆ ಮುಷ್ಕರ ಕೈಬಿಟ್ಟಿದ್ದರು. ಆದರೆ, ಇದೀಗ ಮತ್ತೆ ನಾಳೆಯಿಂದ (ಅಕ್ಟೋಬರ್ 15) ಮುಷ್ಕರಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ದೀಪಾವಳಿ ಹಬ್ಬದ ನಡುವೆಯೇ ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ. ಇದರಿಂದ ನಾಳೆ ಬೇರೆ ಬೇರೆ ಊರಿಗೆ ಹೋಗುವವರು ಮನೆ ಬಿಡುವ ಮುನ್ನ ಬಸ್ ಸಂಚಾರ ಇದ್ಯಾ ಇಲ್ವಾ ಎನ್ನುವುದನ್ನು ತಿಳಿದುಕೊಳ್ಳುವುದು ಒಳಿತು.
ಆಗಸ್ಟ್ 5ರಂದು ಬಸ್ ನಿಲ್ಲಿಸಿ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದರು. ಅದ್ರೆ, ಹೈಕೋರ್ಟ್ ಮುಷ್ಕರ ಮುಂದೂಡುವಂತೆ ಸೂಚಿಸಿತ್ತು. ಇದರಿಂದ ಮುಷ್ಕರ ಕೈಬಿಟ್ಟಿದ್ದರು. ಆದರೂ ಇಲ್ಲಿಯವರೆಗೂ ಸರ್ಕಾರ ಯಾವುದೇ ಬೇಡಿಕೆ ಈಡೇರಿಸಲು ಕ್ರಮಕೈಗೊಂಡಿಲ್ಲವೆಂದು ಆಕ್ರೋಶಗೊಂಡಿರುವ ಸಾರಿಗೆ ನೌಕರರು ಮತ್ತೆ ನಾಳೆಯಿಂದ (ಅಕ್ಟೋಬರ್ 14) ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಬಂದ್ ಮಾಡಿ ಬೆಂಗಳೂರು,ಹುಬ್ಬಳಿ, ಹಾಗೂ ಕಲುಬುರಗಿಯಲ್ಲಿ ಸಾರಿಗೆ ನೌಕರರಿಂದ ಐದು ದಿನ ಉಪವಾಸ ಸತ್ಯಾಗ್ರಹ ನಡೆಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: Karnataka Bus Strike: ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು, ಈ ಐದು ದಿನ ಬಸ್ಗಳು ಸರಿಯಾಗಿ ಸಂಚರಿಸೋದು ಅನುಮಾನ
ಸಾರಿಗೆ ನೌಕರರ ರಜೆ ಕ್ಯಾನ್ಸಲ್
ಇನ್ನು ನಾಳೆಯಿಂದ 5 ದಿನ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಹಿನ್ನೆಲೆಯಲ್ಲಿ ಸಾರಿಗೆ ನೌಕರರಿಗೆ ರಜೆ ರದ್ದು ಮಾಡಲಾಗಿದೆ. ನಾಳೆಯಿಂದ (ಅಕ್ಟೋಬರ್ 14) ಐದು ದಿನಗಳ ವರೆಗೆ ನೌಕರರ ರಜೆ ಕ್ಯಾನ್ಸಲ್ ಮಾಡಿ ಕೆಎಸ್ಆರ್ಟಿಸಿ ಆದೇಶ ಹೊರಡಿಸಿದೆ.
ಸಾರಿಗೆ ಸಂಸ್ಥೆ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ. ಹೀಗಾಗಿ ಜನರಿಗೆ ಸಮರ್ಪಕ ಸೇವೆ ಓದಗಿಸೋದು ನಿಗಮದ ಕರ್ತವ್ಯ. ನಾಳೆಯಿಂದ ಅ.19ರವರೆಗೆ ಉಪವಾಸ ಸತ್ಯಾಗ್ರಹದ ಅವಧಿಯಲ್ಲಿ ಸಾರಿಗೆ ಬಸ್ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಬಾರದು ಅನಿವಾರ್ಯ ಸಂದರ್ಭ ಹೊರತುಪಡಿಸಿ ಯಾರಿಗೂ ರಜೆಯಿಲ್ಲ ಎಂದು ನೋ ವರ್ಕ್, ನೋ ಪೇ ನಿಯಮ ಜಾರಿಗೊಳಿಸಿ ಆದೇಶಿಸಿದೆ.
ಒಟ್ಟಿನಲ್ಲಿ ಸಾರಿಗೆ ನೌಕರರಿಗೆ ಸರ್ಕಾರ ನೀಡಬೇಕಿರುವ ಹಿಂಬಾಕಿ ನೀಡಲ್ಲ. ವೇತನ ಹೆಚ್ಚಳ ಮಾಡಿಲ್ಲ. ನೌಕರರ ಯಾವ ಬೇಡಿಕೆಯನ್ನೂ ಸರ್ಕಾರ ಈಡೇರಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ನೌಕರರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲೇ ಸಾರಿಗೆ ನೌಕರರು ಪ್ರತಿಭಟನೆಗೆ ಕರೆ ನೀಡಿರುವುದು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗುವುದಂತೂ ಗ್ಯಾರಂಟಿ.



