ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ 398 ಕೋಟಿ ರೂ, ಸೇರಿದಂತೆ ಇಂದಿನ ಸಚಿವ ಸಂಪುಟದ ತೀರ್ಮಾನಗಳು
ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಎರಡನೇ ಅವಧಿಯಲ್ಲೂ ‘ಹಿಂದೂ ವಿರೋಧಿ’ ಎಂಬ ಆರೋಪಗಳು ಜೋರಾಗುತ್ತಿವೆ. ವೋಟ್ ಬ್ಯಾಂಕ್ ಗಾಗಿ ಮುಸ್ಲಿಂ ಓಲೈಕೆ ಮಾಡಲಾಗುತ್ತಿದೆ ಎಂದು ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೂ ಇದೀಗ ಅಲ್ಪಸಂಖ್ಯಾತರ ಮಾದರಿ ಕಾಲೋನಿ ಅಭಿವೃದ್ಧಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇನ್ನು ಇಂದಿನ ಸಚಿವ ಸಂಪುಟದಲ್ಲಿ ಏನೆಲ್ಲಾ ತೀರ್ಮಾನಗಳಾದವು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಸೆಪ್ಟೆಂಬರ್ 11): ರಾಜ್ಯ ಕಾಂಗ್ರೆಸ್ ಸರ್ಕಾರದ (Karnataka Congress Government) ವಿರುದ್ಧ ಹಿಂದೂ ವಿರೋಧಿ, ಮುಸ್ಲಿಂ ಓಲೈಕೆ ಆರೋಪಗಳು ಕೇಳಿಬರುತ್ತಿವೆ. ವೋಟ್ ಬ್ಯಾಂಕ್ ಸಲುವಾಗಿ ಸಿದ್ದರಾಮಯ್ಯನವರ ಸರ್ಕಾರ ಹಿಂದೂಗಳಿಗಿಂತ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಇದೀಗ 398 ಕೋಟಿ ರೂಪಾಯಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗೆ ಸಚಿವ ಸಂಪುಟ (karnataka cabinet) ಒಪ್ಪಿಗೆ ಸೂಚಿಸಿದೆ. ಹೌದು…22 ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮಾದರಿ ಕಾಲೋನಿ ಅಭಿವೃದ್ಧಿಗೆ 40ಕ್ಕೂ ಹೆಚ್ಚು ಕಾಮಗಾರಿಗಳನ್ನ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಬ್ಗಗೆ ಕಾನೂನು ಸಚಿವ ಎಚ್ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಇಂದು (ಸೆಪ್ಟೆಂಬರ್ 11) ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ವಿಶೇಷವಾಗಿ ಅಲ್ಪಸಂಖ್ಯಾತರ ಮಾದರಿ ಕಾಲೋನಿ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. 22 ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ವಾಸಿಸುತ್ತಿರುವ ನಗರ ಪ್ರದೇಶಗಳಲ್ಲಿರುವ ಅತೀ ಹಿಂದುಳಿದ ಕಾಲೋನಿಗಳ ಅಭಿವೃದ್ಧಿಗೆ 398.00 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನ ಕೈಗೊಳ್ಳಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಸಂಪುಟದ ತೀರ್ಮಾನಗಳು
- ಯಲ್ಲಾಪುರ ಸೇತುವೆ ನಿರ್ಮಾಣ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರ ಮತ್ತು ಹೆಗ್ಗಾರ ಗ್ರಾಮಗಳನ್ನು ಸಂಪರ್ಕಿಸುವ ಗಂಗಾವಳಿ ನದಿಗೆ ₹35 ಕೋಟಿ ಅಂದಾಜು ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
- ವಿಜಯಪುರ ವಿಮಾನ ನಿಲ್ದಾಣ: ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಗಳ ಪರಿಷ್ಕೃತ ಅಂದಾಜು ಮೊತ್ತವಾದ ₹618.75 ಕೋಟಿಗೆ ಅನುಮೋದನೆ ನೀಡುವ ವಿಚಾರವಾಗಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವರದಿ ಪಡೆದುಕೊಳ್ಳಲು ಸಂಪುಟ ನಿರ್ಧರಿಸಿದೆ.
- ವಿಕ್ಟೋರಿಯಾ ಆಸ್ಪತ್ರೆ: ಹೊಸ ವಾರ್ಡ್ಗಳಿಗೆ ಪೀಠೋಪಕರಣ: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ 1000 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ವಾರ್ಡ್ಗಳಿಗೆ ₹20.05 ಕೋಟಿ ವೆಚ್ಚದಲ್ಲಿ ಪೀಠೋಪಕರಣಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.
- ಆಸ್ಪತ್ರೆಗಳ ನವೀಕರಣ: ಮಾಲೂರು, ಮಾಗಡಿ, ಕುಶಾಲನಗರ, ಕೊರಟಗೆರೆ, ಜಗಳೂರು, ಸವಣೂರು, ರಾಮದುರ್ಗ, ಮತ್ತು ಸವದತ್ತಿ ತಾಲ್ಲೂಕು ಆಸ್ಪತ್ರೆಗಳ ಜೊತೆಗೆ ದಾವಣಗೆರೆ ಮತ್ತು ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗಳ ನವೀಕರಣಕ್ಕೆ ₹542 ಕೋಟಿ ಅನುಮೋದನೆ ನೀಡಲಾಗಿದೆ.
- ಸಂಚಾರಿ ಆರೋಗ್ಯ ಘಟಕಗಳ ಉನ್ನತೀಕರಣ: ಸಂಚಾರಿ ಆರೋಗ್ಯ ಘಟಕಗಳನ್ನು ದುರಸ್ತಿಗೊಳಿಸಿ, ಹೊಸ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲು ₹12.25 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಲಾಗಿದೆ. ಈ ವಾಹನಗಳ ವಾರ್ಷಿಕ ನಿರ್ವಹಣೆಗೆ ₹14.70 ಕೋಟಿ ಅನುಮೋದನೆ ದೊರೆತಿದೆ.
- PM KUSUM-B ಯೋಜನೆ: PM KUSUM-B ಯೋಜನೆಯಡಿ ರೈತರ ಪಂಪ್ಸೆಟ್ಗಳ ವೆಚ್ಚದ ಶೇ.50ರಷ್ಟು ಮೊತ್ತವನ್ನು ರಾಜ್ಯ ಸರ್ಕಾರದಿಂದ ಸಹಾಯಧನವಾಗಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ.
- ಬಯೋಡೀಸೆಲ್ ಮಿಶ್ರಣ: ಕರ್ನಾಟಕ ರಾಜ್ಯದಲ್ಲಿ ಬಯೋಡೀಸೆಲ್ ಅನ್ನು ಹೈಸ್ಪೀಡ್ ಡೀಸೆಲ್ನೊಂದಿಗೆ ಮಿಶ್ರಣ ಮಾಡುವ ಪರವಾನಗಿ ಆದೇಶ 2025ಕ್ಕೆ ಅನುಮೋದನೆ ನೀಡಲಾಗಿದೆ.
- ಸರ್ಕಾರಿ ಕಾರ್ಯಕ್ರಮಗಳಲ್ಲಿ ಅತಿಥಿಗಳ ಆಹ್ವಾನ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನಿಷ್ಠ 9 ಮತ್ತು ಗರಿಷ್ಠ 13 ಅತಿಥಿಗಳನ್ನು ಆಹ್ವಾನಿಸುವ ಮಾರ್ಗಸೂಚಿಯನ್ನು ಬದಲಾಯಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದ ಮಹತ್ವದ ಆಧಾರದ ಮೇಲೆ ಹೆಚ್ಚಿನ ಅತಿಥಿಗಳನ್ನು ಆಹ್ವಾನಿಸಲು ಅಧಿಕಾರ ನೀಡಲು ಸಂಪುಟ ಒಪ್ಪಿಗೆ ನೀಡಿದೆ.
Published On - 9:09 pm, Thu, 11 September 25




