
ಬೆಂಗಳೂರು, ಜೂನ್ 2: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗುತ್ತಿದ್ದಂತೆಯೇ, ಇತ್ತ ಸಚಿವ ಸಂಪುಟ ಸೇರಲು ಆಕಾಂಕ್ಷಿ ಶಾಸಕರ ಭರ್ಜರಿ ಲಾಬಿ ಮತ್ತು ಕಸರತ್ತು ಶುರುವಾಗಿದೆ. ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ (Congress) ಶಾಸಕರು ಹಾಗೂ ಎಂಎಲ್ಸಿಗಳು ದೆಹಲಿಗೆ ದಂಡಯಾತ್ರೆ ನಡೆಸುತ್ತಿದ್ದು, ಹೈಕಮಾಂಡ್ ನಾಯಕರ ಕದ ತಟ್ಟುತ್ತಿದ್ದಾರೆ. ಪ್ರಾದೇಶಿಕ ಮತ್ತು ಸಮುದಾಯವಾರು ಲೆಕ್ಕಾಚಾರಗಳ ನಡುವೆ ಸಚಿವ ಸಂಪುಟ ರಚನೆ ಹೈಕಮಾಂಡ್ಗೆ ಕಬ್ಬಿಣದ ಕಡಲೆಯಾಗಿ ಮಾರ್ಣಪಟ್ಟಿದೆ. ಮತ್ತೊಂದೆಡೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಂತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ದೆಹಲಿ ಮಟ್ಟದಲ್ಲಿ ತೀವ್ರ ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಹಿಂದಿನ ಸಂಪುಟದಲ್ಲಿದ್ದ ಕೆ.ಹೆಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಹೆಚ್.ಕೆ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಚಲುವರಾಯಸ್ವಾಮಿ ಮತ್ತೊಮ್ಮೆ ಸಚಿವರಾಗಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ ಎಂದು ಇವರು ಹೈಕಮಾಂಡ್ ಮುಂದೆ ವಾದ ಮಂಡಿಸುತ್ತಿದ್ದಾರೆ. ಇವರೊಂದಿಗೆ ಎನ್.ಎ. ಹ್ಯಾರಿಸ್, ಬಿ.ಆರ್. ಪಾಟೀಲ್, ಪ್ರದೀಪ್ ಈಶ್ವರ್, ರಿಜ್ವಾನ್ ಅರ್ಷದ್, ಡಿ. ರವಿಶಂಕರ್, ಹಂಪನಗೌಡ ಬಾದರ್ಲಿ, ಬಸವರಾಜ ರಾಯರೆಡ್ಡಿ, ಮಾಗಡಿ ಶಾಸಕ ಬಾಲಕೃಷ್ಣ ಹಾಗೂ ಎಸ್.ಆರ್. ಶ್ರೀನಿವಾಸ್ ಸೇರಿದಂತೆ ದೊಡ್ಡ ಶಾಸಕರ ಪಡೆಯೇ ಮಂತ್ರಿಗಿರಿಗೆ ಪಟ್ಟು ಹಿಡಿದಿದೆ. ಇನ್ನು ಎಂಎಲ್ಸಿಗಳ ಕೋಟಾದಡಿ ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್ ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ಬಿರುಸಾಗಿವೆ.
ಸಚಿವ ಸ್ಥಾನದ ಆಯ್ಕೆ ಒಂದೆಡೆಯಾದರೆ, ಉಪಮುಖ್ಯಮಂತ್ರಿ (DCM) ಹುದ್ದೆಗಳ ಸೃಷ್ಟಿ ಹೈಕಮಾಂಡ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ತಮ್ಮ ಬಣದ ಪ್ರಮುಖ ನಾಯಕರಾದ ದಲಿತ ಸಮುದಾಯದ ಡಾ. ಜಿ. ಪರಮೇಶ್ವರ್, ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಹಾಗೂ ಅಲ್ಪಸಂಖ್ಯಾತ ಕೋಟಾದಡಿ ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಸಿಎಂ ಪಟ್ಟ ನೀಡಲೇಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಇತ್ತ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆಯೂ ಕಣ್ಣಿಟ್ಟಿರುವ ಸತೀಶ್ ಜಾರಕಿಹೊಳಿ ಮತ್ತು ಶಿವರಾಜ್ ತಂಗಡಗಿ ಅವರು ಹೈಕಮಾಂಡ್ ಜವಾಬ್ದಾರಿ ನೀಡಿದರೆ ನಿಭಾಯಿಸಲು ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.
ಸಂಪುಟ ಕಸರತ್ತಿನ ನಡುವೆ ವಿಧಾನಸಭೆ ಸ್ಪೀಕರ್ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ. ಹಿರಿಯ ಶಾಸಕರು ಯಾರೂ ಸ್ಪೀಕರ್ ಸ್ಥಾನ ಅಲಂಕರಿಸಲು ಒಪ್ಪುತ್ತಿಲ್ಲ ಎನ್ನಲಾಗಿದ್ದು, ಪ್ರಸ್ತುತ ಸ್ಪೀಕರ್ ಆಗಿರುವ ಯು.ಟಿ. ಖಾದರ್ ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ.
ನಾಳೆಯೇ (ಜೂನ್ 3) ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದು, ಹೈಕಮಾಂಡ್ ಯಾರಿಗೆ ಮಂತ್ರಿಭಾಗ್ಯ ಕರುಣಿಸಲಿದೆ ಮತ್ತು ಕೆಪಿಸಿಸಿ ಸಾರಥ್ಯ ಯಾರ ಹೆಗಲೇರಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ