ಇಂದು ಸಚಿವ ಸಂಪುಟ ಸಭೆ: ರಾಜ್ಯಪಾಲರ ವಿರುದ್ಧವೇ ಅಧಿಕಾರ ಚಲಾವಣೆಗೆ ಮುಂದಾದ ಕಾಂಗ್ರೆಸ್ ಸರ್ಕಾರ!

| Updated By: ಗಣಪತಿ ಶರ್ಮ

Updated on: Aug 22, 2024 | 7:58 AM

ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್ ವಿರುದ್ಧವೇ ಅಧಿಕಾರ ಚಲಾಯಿಸಲು ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಮುಂದಾಗುವ ಸಾಧ್ಯತೆ ಇದೆ. ಮುಡಾ ಹಗರಣದಲ್ಲಿ ಸಿದ್ದರಾಮುಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದಂತೆಯೇ ಬಿಜೆಪಿ ಜೆಡಿಎಸ್ ಮೈತ್ರಿ ನಾಯಕರ ವಿರುದ್ಧ ಬಾಕಿ ಇರುವ ಪ್ರಕರಣಗಳ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ಶಿಫಾರಸು ಮಾಡುವ ಸಾಧ್ಯತೆ ದಟ್ಟವಾಗಿದೆ.

ಇಂದು ಸಚಿವ ಸಂಪುಟ ಸಭೆ: ರಾಜ್ಯಪಾಲರ ವಿರುದ್ಧವೇ ಅಧಿಕಾರ ಚಲಾವಣೆಗೆ ಮುಂದಾದ ಕಾಂಗ್ರೆಸ್ ಸರ್ಕಾರ!
ರಾಜ್ಯಪಾಲರ ವಿರುದ್ಧವೇ ಅಧಿಕಾರ ಚಲಾವಣೆಗೆ ಮುಂದಾದ ಕಾಂಗ್ರೆಸ್ ಸರ್ಕಾರ!
Image Credit source: PTI
Follow us on

ಬೆಂಗಳೂರು, ಆಗಸ್ಟ್ 22: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​​ ನಡೆಯ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್, ಇದೀಗ ರಾಜ್ಯಪಾಲರ ವಿರುದ್ಧವೇ ಅಧಿಕಾರ ಚಲಾವಣೆಗೆ ಮುಂದಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಬಿಜೆಪಿ ಜೆಡಿಎಸ್ ಮಿತ್ರಪಕ್ಷಗಳ ನಾಯಕರ ವಿರುದ್ಧದ ಪ್ರಕರಣಗಳ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧದ ಕೇಸ್‌ಗಳ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಮೈತ್ರಿ ನಾಯಕರ ಮೇಲಿನ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಸಲಹೆ ನೀಡಿ ನಿರ್ಣಯ ಕೈಗೊಳ್ಳಲಿರುವ ಸಾಧ್ಯತೆ ಇದೆ.

ಆರ್ಟಿಕಲ್ 163 ಅಡಿ ಅಧಿಕಾರ ಚಲಾವಣೆಗೆ ಸಿದ್ದು ಪಡೆ ಸಿದ್ಧ

ಸಂವಿಧಾನದ ವಿಧಿ 163 ಅಡಿ ಇರುವ ಅಧಿಕಾರ ಚಲಾಯಿಸಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಇದರ ಅಡಿ ರಾಜ್ಯಪಾಲರ ಬಳಿ ಬಾಕಿ ಇರುವ ಪ್ರಾಸಿಕ್ಯೂಷನ್ ಅರ್ಜಿಗಳ ವಿಲೇವಾರಿಗೆ ಸಲಹೆ ನೀಡಲಿದೆ. ರಾಜ್ಯಪಾಲರ ಬಳಿ ಬಿಜೆಪಿ ಜೆಡಿಎಸ್ ನಾಯಕರ ಪ್ರಾಸಿಕ್ಯೂಷನ್ ಅರ್ಜಿ ಬಾಕಿ ಇರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

163 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರ ರಾಜ್ಯ ಸಚಿವ ಸಂಪುಟಕ್ಕೆ ಇದೆ. ಇದೇ ಅಧಿಕಾರವನ್ನು ಬಳಸಿ ರಾಜ್ಯಪಾಲರಿಗೆ ಸರ್ಕಾರ ಸಲಹೆ ನೀಡಲಿದೆ.

ಯಾರಿಗೆಲ್ಲ ಇದೆ ಪ್ರಶಸಿಕ್ಯೂಷನ್ ಭೀತಿ?

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಲೋಕಾಯುಕ್ತ ಎಸ್ಐಟಿ ಈಗಾಗಲೇ ಮನವಿ ಮಾಡಿದೆ. ಇದರ ಜೊತೆಗೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧದ ಪ್ರಾಸಿಕ್ಯೂಷನ್ ಅರ್ಜಿ ಬಾಕಿ ಇದೆ. ಈ ಪ್ರಾಸಿಕ್ಯೂಷನ್ ಅರ್ಜಿಗಳ ಇತ್ಯರ್ಥಕ್ಕೆ ಸರ್ಕಾರ ಸಲಹೆ ರವಾನಿಸಲಿದೆ.

ಇದನ್ನೂ ಓದಿ: ಗಣಿಗಾರಿಕೆ ಪ್ರಕರಣ: ಸಹಿ ಫೋರ್ಜರಿ ಮಾಡಲಾಗಿತ್ತೆಂದ ಹೆಚ್​ಡಿ ಕುಮಾರಸ್ವಾಮಿ

ಈ‌ ಅರ್ಜಿಗಳ ಇತ್ಯರ್ಥ ಮಾಡಿ ಎಂದು ಸಲಹೆ ನೀಡಲಿದೆ. ಆ ಮೂಲಕ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಕ್ಕೆ ಸರ್ಕಾರ ರಾಜ್ಯಪಾಲರಿಗೆ ಕೌಂಟರ್ ಕೊಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ