ಕಾಂಗ್ರೆಸ್​​ ಪೋಸ್ಟರ್​​ನಲ್ಲಿ ಭಾರತದ ವಿಕೃತ ನಕ್ಷೆ; ಬಿಜೆಪಿಯಿಂದ ಟೀಕಾಪ್ರಹಾರ

ಕರ್ನಾಟಕ ಕಾಂಗ್ರೆಸ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ವಿಕೃತವಾದ ಭಾರತದ ನಕ್ಷೆಯನ್ನು ಬಳಸಿದೆ. ಮತ್ತೆ ಕಾಂಗ್ರೆಸ್ ಪಾಕಿಸ್ತಾನದ ಅಜೆಂಡಾವನ್ನು ನಡೆಸುತ್ತಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರಳಿ ಪಡೆಯಲು ಕಾಂಗ್ರೆಸ್ ಮೈತ್ರಿ ಬಯಸಿರುವುದು ಕಾಕತಾಳೀಯವಲ್ಲ ಎಂದು ನೆಟ್ಟಿಗರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

ಕಾಂಗ್ರೆಸ್​​ ಪೋಸ್ಟರ್​​ನಲ್ಲಿ ಭಾರತದ ವಿಕೃತ ನಕ್ಷೆ; ಬಿಜೆಪಿಯಿಂದ ಟೀಕಾಪ್ರಹಾರ
ಭಾರತದ ವಿಕೃತ ನಕ್ಷೆ ಹಂಚಿಕೊಂಡ ಕಾಂಗ್ರೆಸ್

Updated on: Nov 08, 2024 | 8:16 PM

ಬೆಂಗಳೂರು: ಇಂದು ಕರ್ನಾಟಕ ಕಾಂಗ್ರೆಸ್​ ತನ್ನ ಎಕ್ಸ್​ ಖಾತೆಯ ಪೇಜಿನಲ್ಲಿ (ಹಿಂದಿನ ಟ್ವಿಟ್ಟರ್) ಪೋಸ್ಟ್​ವೊಂದನ್ನು ಮಾಡಿತ್ತು. ಆ ಪೋಸ್ಟ್​ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಏಕೆಂದರೆ, ಕಾಂಗ್ರೆಸ್​ ತನ್ನ ಅಧಿಕೃತ ಎಕ್ಸ್​ ಪೇಜಿನಲ್ಲಿ ಹಾಕಿದ್ದ ಪೋಸ್ಟ್​ನಲ್ಲಿ ಬಳಸಿದ್ದ ಭಾರತದ ನಕ್ಷೆ ವಿಕೃತವಾಗಿತ್ತು. ಆ ನಕ್ಷೆಯಲ್ಲಿ ಕೆಲವು ಪ್ರದೇಶಗಳನ್ನು ಬಿಡಲಾಗಿತ್ತು. ಇದಕ್ಕೆ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್ ಕರ್ನಾಟಕದ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್​ ಫೋಟೋದ ಜೊತೆಗೆ ಹಾಕಲಾದ ಭಾರತದ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯ್ ಚಿನ್​ನಂತಹ ಭಾರತದ ಪ್ರಮುಖ ಭಾಗಗಳನ್ನು ತೆಗೆದುಹಾಕಲಾಗಿದೆ. ಆ ಪ್ರದೇಶಗಳನ್ನು ಬಿಟ್ಟು ಭಾರತದ ನಕ್ಷೆಯನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಕಾಂಗ್ರೆಸ್​ ಹಂಚಿಕೊಳ್ಳುವ ಮೂಲಕ ಯಾವ ಸಂದೇಶ ರವಾನಿಸುತ್ತಿದೆ? ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.


ಇದನ್ನೂ ಓದಿ: ಬಿಜೆಪಿ ಸುಳ್ಳಿನ ಫ್ಯಾಕ್ಟರಿ ನಡೆಸಲು ಜೀತದಾಳು, ಬಾಡಿಗೆ ಭಾಷಣಕಾರರನ್ನು ಇಟ್ಟುಕೊಂಡಿದೆ; ಪ್ರಿಯಾಂಕ್ ಖರ್ಗೆ ಟೀಕೆ

ಪೋಸ್ಟ್​ನಲ್ಲಿ ಏನಿತ್ತು?:

ರಾಜ್ಯದ ಆರ್ಥಿಕತೆಗೆ ಗ್ಯಾರಂಟಿ ಬಲ. 2023-24ರಲ್ಲಿ ಕರ್ನಾಟಕದ ಒಟ್ಟು ಆಂತರಿಕ ಉತ್ಪಾದನಾ (GSDP) ಅಭಿವೃದ್ಧಿ ದರ 10.2% ಇದ್ದು, ಇದು ರಾಷ್ಟ್ರಮಟ್ಟದ ಸರಾಸರಿ 8.2% ಗಿಂತಲೂ ಅತಿ ಹೆಚ್ಚು. ಗ್ಯಾರಂಟಿ ಯೋಜನೆಗಳ ಮೂಲಕ ಜನರ ಜೇಬಿಗೆ ನೇರವಾಗಿ ಹಣ ಹಾಕಿ ಅವರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸಿದೆ. ಗ್ಯಾರಂಟಿ ಯೋಜನೆಗಳಿಂದ ಐತಿಹಾಸಿಕ ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್​ ಇಂದು ಪೋಸ್ಟ್​ ಮಾಡಿತ್ತು.


ಈ ಪೋಸ್ಟ್​ನಲ್ಲಿ ಬಳಸಲಾದ ಕೇಸರಿ, ಬಿಳಿ, ಹಸಿರು ಬಣ್ಣದ ಭಾರತ ಧ್ವಜ ವಿರೂಪವಾಗಿದೆ ಎಂಬುದು ಇದೀಗ ಚರ್ಚೆಗೆ ಕಾರಣವಾಗಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ಪ್ರದೀಪ್ ಭಂಡಾರಿ ತಮ್ಮ ಎಕ್ಸ್​ ಪೇಜಿನಲ್ಲಿ ಮೊದಲು ಈ ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಈ ಬಗ್ಗೆ ಚರ್ಚೆ ಹೆಚ್ಚಾಗಿದೆ. ಆದರೆ, ಈ ಬಗ್ಗೆ ಕಾಂಗ್ರೆಸ್ ಯಾವುದೇ ಸ್ಪಷ್ಟನೆ ನೀಡಿಲ್ಲ.


ಇದನ್ನೂ ಓದಿ: ವಕ್ಫ್​ ವಿವಾದ: ಕರ್ನಾಟಕಕ್ಕೆ ಬಂದ ಜಂಟಿ ಸದನ ಸಮಿತಿ ಅಧ್ಯಕ್ಷರ ವಿರುದ್ಧ ಮುಗಿಬಿದ್ದ ಕಾಂಗ್ರೆಸ್​​ ನಾಯಕರು

ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಕಾಂಗ್ರೆಸ್ ಏಕೆ ಅಗೌರವಿಸುತ್ತದೆ? ಕರ್ನಾಟಕ ಕಾಂಗ್ರೆಸ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಭಾರತದ ವಿಕೃತ ನಕ್ಷೆಯನ್ನು ಬಳಸುತ್ತದೆ. ಮತ್ತೆ ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ಅಜೆಂಡಾ ನಡೆಸುತ್ತಿದೆ! ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರಳಿ ಪಡೆಯಲು ಕಾಂಗ್ರೆಸ್ ಪಕ್ಷ ಮತ್ತು ಅದರ ಇಂಡಿ ಅಲೈಯನ್ಸ್ ಬಯಸುತ್ತಿರುವುದು ಕಾಕತಾಳೀಯವಲ್ಲ ಎಂದು ನೆಟ್ಟಿಗರು ಕಾಂಗ್ರೆಸ್​ನ ಪೋಸ್ಟ್​ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us