Karnataka Dam Water Level: ಕೃಷ್ಣಾ ನದಿಯ ಭಾಗದಲ್ಲಿ ಹೆಚ್ಚಿದ ಹರಿವು, ಕಾವೇರಿ ಕಣಿವೆಯಲ್ಲಿ ಕ್ಷೀಣಿಸಿದ ಸಂಗ್ರಹ
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಪಾತ್ರದ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳಿಗೆ ಹರಿವು ತೀವ್ರಗೊಂಡಿದೆ. ಕೃಷ್ಣಾ ನದಿ ನೀರಿನ ಸೆಳವು ಹೆಚ್ಚಿದ್ದರಿಂದ ರಬಕವಿ-ಮಹಿಷವಾಡಗಿ ಬೋಟ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ ಕೆಆರ್ಎಸ್, ಕಬಿನಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ.

ಮುಖ್ಯಾಂಶಗಳು
- ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆಯಿಂದಾಗಿ ನೀರಿನ ಹರಿವು ಏರಿಕೆಯಾಗಿದೆ.
- ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರಿನ ಸಂಗ್ರಹ ಕಡಿಮೆಯಾಗಿದೆ.
- ಕೃಷ್ಣಾ ನದಿ ಭೋರ್ಗರೆತದಿಂದ ರಬಕವಿ ಮಹಿಷವಾಡಗಿ ನಡುವಿನ ಬೋಟ್ ಸಂಚಾರ ಬಂದ್.
ಬೆಂಗಳೂರು, ಜುಲೈ 24: ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟದ ತಾಜಾ ವರದಿ ಲಭ್ಯವಾಗಿದ್ದು, ಕೃಷ್ಣಾ ನದಿ ಪಾತ್ರದಲ್ಲಿ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿದ್ದರೆ, ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ.
1. ಹೇಮಾವತಿ ಜಲಾಶಯ (ಹಾಸನ)
- ಗರಿಷ್ಠ ಮಟ್ಟ: 2922 ಅಡಿ (37 TMC)
- ಇಂದಿನ ನೀರಿನ ಮಟ್ಟ: 2904.65 ಅಡಿ (22.82 TMC)
- ಒಳಹರಿವು: 1,198 ಕ್ಯೂಸೆಕ್ | ಹೊರಹರಿವು: 500 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 2921.03 ಅಡಿ – 36.16 TMC ನೀರಿತ್ತು, ಒಳಹರಿವು 6,761 ಕ್ಯೂಸೆಕ್ ಇತ್ತು)
2. ಕೆ.ಆರ್.ಎಸ್. ಜಲಾಶಯ (ಮಂಡ್ಯ)
- ಗರಿಷ್ಠ ಮಟ್ಟ: 124.80 ಅಡಿ (49.45 TMC)
- ಇಂದಿನ ನೀರಿನ ಮಟ್ಟ: 91.95 ಅಡಿ (17.13 TMC)
- ಒಳಹರಿವು: 713 ಕ್ಯೂಸೆಕ್
- ಹೊರಹರಿವು: 1,578 ಕ್ಯೂಸೆಕ್
3. ಆಲಮಟ್ಟಿ ಜಲಾಶಯ (ವಿಜಯಪುರ)
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ನೀರಿನ ಮಟ್ಟ: 518.58 ಮೀಟರ್
- ಒಳಹರಿವು: 73,162 ಕ್ಯೂಸೆಕ್
- ಹೊರಹರಿವು: 43,567 ಕ್ಯೂಸೆಕ್
4. ಬಸವಸಾಗರ ಜಲಾಶಯ (ಯಾದಗಿರಿ)
- ಗರಿಷ್ಠ ಮಟ್ಟ: 492.25 ಮೀಟರ್
- ಇಂದಿನ ನೀರಿನ ಮಟ್ಟ: 490.92 ಮೀಟರ್
- ಒಳಹರಿವು: 43,000 ಕ್ಯೂಸೆಕ್
- ಹೊರಹರಿವು: 00 ಕ್ಯೂಸೆಕ್
5. ಕಬಿನಿ ಜಲಾಶಯ (ಮೈಸೂರು)
- ಗರಿಷ್ಠ ಮಟ್ಟ: 84 ಅಡಿ (19.52 TMC)
- ಇಂದಿನ ನೀರಿನ ಮಟ್ಟ: 73.14 ಅಡಿ (13.27 TMC)
- ಒಳಹರಿವು: 2,369 ಕ್ಯೂಸೆಕ್
- ಹೊರಹರಿವು: 500 ಕ್ಯೂಸೆಕ್ (ಕಳೆದ ವರ್ಷ ಇದೇ ದಿನ: 83.60 ಅಡಿ – 19.28 TMC ನೀರಿತ್ತು, ಒಳಹರಿವು 11,592 ಕ್ಯೂಸೆಕ್ ಇತ್ತು)
ರಬಕವಿ-ಮಹಿಷವಾಡಗಿ ಬೋಟ್ ಸಂಚಾರ ಬಂದ್
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಕೃಷ್ಣಾ ನದಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ 60,000 ಕ್ಯೂಸೆಕ್ ಗಡಿದಾಟಿದೆ. ಇದರಿಂದಾಗಿ ನದಿ ಬೋರ್ಗರೆದು ಹರಿಯುತ್ತಿದ್ದು, ತೀರದ ರೈತರಲ್ಲಿ ಹರ್ಷ ಮೂಡಿಸಿದೆ.
ಬೆಳಗಾವಿ ಜಿಲ್ಲೆಯ ಗಡಿ ಗ್ರಾಮ ಮಹಿಷವಾಡಗಿ ಹಾಗೂ ಬಾಗಲಕೋಟೆ ಜಿಲ್ಲೆಯ ರಬಕವಿ ನಡುವೆ ಸಂಚರಿಸುತ್ತಿದ್ದ ಬೋಟ್ ಸಂಚಾರವನ್ನು ನೀರಿನ ಸೆಳವು ಜೋರಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ. ರಬಕವಿ-ಮಹಿಷವಾಡಗಿ ನಡುವೆ ಕೇವಲ 300 ಮೀಟರ್ ಸೇತುವೆ ಕಾಮಗಾರಿ ಕಳೆದ 10 ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ಈ ಸೇತುವೆ ಪೂರ್ಣಗೊಂಡಿದ್ದರೆ ಬೋಟ್ ಸಂಚಾರದ ಅಗತ್ಯವೇ ಇರುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿರುವ ಸ್ಥಳೀಯರು, ಕಾಮಗಾರಿಯನ್ನು ತಕ್ಷಣ ಮುಗಿಸುವಂತೆ ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




